|
ಇದು `ಮಾಡರ್ನ್' ದೀಪಾವಳಿ
ಈಗಿನ ಮಕ್ಕಳಿಗೆ ಕೇವಲ ಪಟಾಕಿ ಸಿಡಿಸಿದರೆ ಮಾತ್ರ ದೀಪಾವಳಿ
ಆಚರಣೆಯಾಗುತ್ತದೆ ಎಂಬ ಭಾವನೆ ಮೂಡಿದೆ. ಕಿವಿಗಡಚಿಕ್ಕುವ
ಸದ್ದಿನ ಪಟಾಕಿಗಳು... ಬಿರುಸು ಬಾಣಗಳಷ್ಟೇ ದೀಪಾವಳಿಯ ಇಂದಿನ
ವೈಭವವಾಗಿ ಉಳಿದುಕೊಂಡಿದೆ. ಆಧುನಿಕ ಜಗತ್ತಿನಲ್ಲಿ ಬೆಳಕಿನ ಹಬ್ಬವ
ಆಚರಿಸುವ ಪರಿಯನ್ನು ಎಳೆಎಳೆಯಾಗಿ ನಿಮ್ಮ ಮುಂದೆ
ತೆರೆದಿಡುತ್ತದೆ ಈ ಲೇಖನ.
ಹರೀಶ್ ಕೆ.
ಆದೂರು
skadhur@sify.com
`ಮಮ್.. ಬ್ಯಾಡ.. ಅವಂಗೆ ಎಣ್ಣೆ ಅಂದ್ರೆ ಅಲರ್ಜಿ... ಅವ್ನ ಮೈಗೆ
ಆಯಿಲ್ ಅಪ್ಲೈ ಮಾಡ್ಬೇಡ..' ಇದು ಕಲ್ಪನೆಯ ಮಾತಲ್ಲ.
ಅಕ್ಷರಶಃ ಸತ್ಯ.. ಕಿವಿಯಾರೆ ಕೇಳಿದ್ದು..ಕಣ್ಣಾರೆ ಕಂಡದ್ದು.
ವ್ಹಾವ್...ಏನೊಂದು `ಡೆವಲಪ್ಮೆಂಟ್'...ನಮ್ಮ ಸಮಾಜದಲ್ಲಿ
ಆಗಿದೆ..! ಇಪ್ಪತ್ತು ವರ್ಷಗಳ ಹಿಂದಿನ ನೆನಪು.. ಅದಾಗ ನಾನಿನ್ನೂ
ಒಂದನೇ ತರಗತಿ. ಬಚ್ಚಲು ಮನೆಗುಡಿಸಿ, ಬಿಸಿನೀರ ಹಂಡೆಗೆ ರಂಗೋಲಿ
ಬಳಿದು ಎಲೆಗಳಿಂದ ಶೃಂಗರಿಸಿ ದೀಪಾವಳಿ ಹಬ್ಬಕ್ಕೆ ಅಮ್ಮ ಅಟ್ಟಣೆ
ನಡೆಸುತ್ತಿದ್ದ ಘಟನೆ ಇನ್ನೂ ಮನದಲ್ಲಿ ಅಚ್ಚಳಿಯದೆ ಉಳಿದಿದೆ.
ಹಬ್ಬದ ದಿನದಂದು ನಾವು ಗೆಳೆಯರೆಲ್ಲ `ಬಲೀಂದ್ರ' ತರಲು ಓಡುತ್ತಿದ್ದೆವು.
`ಪಾದೆಹೂ' ಕೀಳಲು ಕಾಲಿಗೆ ಮುಳ್ಳುತಾಗಿಸುತ್ತಾ ಅತ್ತೆಮಗಳು, ನಾನೂ
ಓಡಿದ್ದು ಇನ್ನೂ ಮನದಿಂದ ಮರೆಯಾಗಿಲ್ಲ.. ಹಬ್ಬದ ದಿನದಂದು
ಮುಂಜಾನೆಮೊದಲೇ ಅಮ್ಮ ಎದ್ದು ಹಬ್ಬದ ಸಿದ್ದತೆ ನಡೆಸುತ್ತಿದ್ದರು.
ಬೆಳ್ಳಂಬೆಳಗ್ಗೆಯೇ ಎದ್ದು ನಮಗೆಲ್ಲಾ ಎಣ್ಣೆ ಹಚ್ಚಿ ಬಿಸಿನೀರ ಸ್ನಾನ
ಮಾಡಿಸುತ್ತಿದ್ದರು. ನಾವೆಲ್ಲ ಹೊಸ ಬಟ್ಟೆ ಧರಿಸಿ ಹಬ್ಬದ
ಸಡಗರದಲ್ಲಿ ಸಂಭ್ರಮಿಸುತ್ತಿದ್ದೆವು. ಬಲೀಂದ್ರ ಪೂಜೆ, ಅವಲಕ್ಕಿ
ಪಂಚಕಜ್ಜಾಯ, ಉದ್ದಿನ ದೋಸೆ, ಇಡ್ಲಿ, ಶ್ಯಾವಿಗೆ, ಮೂಡೆ,
ಕೊಟ್ಟಿಗೆ(ಕಡುಬು) ಹೀಗೆ ವೈವಿಧ್ಯಮಯ ತಿಂಡಿಗಳು ದೀಪಾವಳಿ
ಹಬ್ಬದ ಪ್ರಧಾನ ಅಂಶವಾಗಿತ್ತು. ಬಲೀಂದ್ರ ಕರೆಯುವ
ಸಂಪ್ರದಾಯ, ಗೋ ಪೂಜೆ, ಅಂಗಡಿ ಪೂಜೆಯಂದು ಎಲ್ಲಿಲ್ಲದ ಉತ್ಸಾಹ
ಸಂಭ್ರಮ. ರಾತ್ರಿ ಒಂದಷ್ಟು ಓಲೆ ಪಟಾಕಿ ಸುಡುತ್ತಿದ್ದೆವು. ದುರುಸ
ಬಾಣ ಬಿಡುತ್ತಿದ್ದವು. ಸಂಪ್ರದಾಯಗಳಿಗಂತೂ ಎಳ್ಳಷ್ಟೂ ಚ್ಯುತಿ
ಮಾಡುತ್ತಿರಲಿಲ್ಲ.
ಆದರೆ ಇಂದು ಕಾಲ ಬದಲಾಗಿದೆ. ದೀಪಾವಳಿಯೆಂದ ಮಾತ್ರಕ್ಕೆ ಕೇವಲ `ಪಟಾಕಿ'
ಸಿಡಿಸಿ ಸಂಭ್ರಮಿಸುವುದೆಂದೇ ಆಗಿದೆ. ಎಣ್ಣೆ ಸ್ನಾನ ನಗರ
ಪ್ರದೇಶಗಳಲ್ಲಂತೂ ಇಲ್ಲವೇ ಇಲ್ಲ. ಆದರೂ ಇನ್ನೂ ಹಲವೆಡೆಗಳಲ್ಲಿ
ಸಂಪ್ರದಾಯದ ಆಚರಣೆ ಉಳಿದುಕೊಂಡಿದೆ ಎಂಬುದು ಸಮಾಧಾನ.
ಆಧುನೀಕತೆಯಿಂದಾಗಿ ಸಂಪ್ರದಾಯದ ಆಚರಣೆಗೆ ದೊಡ್ಡ
ಹೊಡೆತಬಿದ್ದಿದೆ ಎಂಬ ಅಂಶ ಸ್ಪಷ್ಟ.
ಹಿಂದಿನಂತೆ ಬಿಸಿನೀರ ಹಂಡೆಗಳಿಗೆ ರಂಗೋಲಿ ಬಳಿಯಲು ಬಿಸಿ ನೀರ
ಹಂಡೆಯೇ ಈ ಸಿಟಿಗಳಲ್ಲಿ ಇಲ್ಲ ಸ್ವಾಮೀ.. ಎಲ್ಲಾ ಹೀಟರ್, ಬಾಯ್ಲರ್,
ಸೋಲಾರ್ಗಳು ಆ ಸ್ಥಾನವನ್ನಲಂಕರಿಸಿದೆ. ಬಲೀಂದ್ರ ಹಾಕಲು ಸಿಟಿ
ಮನೆಗಳ ಮುಂದೆ ಜಾಗವೇ ಇಲ್ಲ. ಅಪಾರ್ಟ್ಮೆಂಟ್ ಸಂಸ್ಕೃತಿಯಿಂದಾಗಿ
`ಆಕಾಶಕ್ಕೆ ಹಣಕೊಟ್ಟು ಕೂತಂತೆ'! ಅಲ್ಲಿ ಅಂಗಳವೇ ಇಲ್ಲ. ಇದ್ದರೂ
ಅದು `ಪಾರ್ಕಿಂಗ್' ಏರಿಯಾ ನೋಡಿ. ಇನ್ನು ಅದೆಲ್ಲಾ
ಸಂಪ್ರದಾಯಗಳನ್ನು ಮಾಡಿದರೆ ಪಕ್ಕದ ಮನೆಯವರು
ಏನೆಂದುಕೊಳ್ಳುತ್ತಾರೋ... ಈ ಆಧುನಿಕ ಯುಗದಲ್ಲಿ ಇಂತಹ
ಆಚರಣೆಯೋ ಎಂಬ ಸಣ್ಣ ಅಂಜಿಕೆ ಇಂದಿನ ನಮ್ಮ ಹೆಚ್ಚಿನ ಪೇಟೆ
ಮನೆಯವರಲ್ಲಿ ಕಾಣತೊಡಗಿದೆ.
ಈಗಿನ ಮಕ್ಕಳಿಗೆ ಕೇವಲ ಪಟಾಕಿ ಸಿಡಿಸಿದರೆ ಮಾತ್ರ ದೀಪಾವಳಿ
ಆಚರಣೆಯಾಗುತ್ತದೆ ಎಂಬ ಭಾವನೆ ಮೂಡಿದೆ. ಟಿ.ವಿ ಮಾಧ್ಯಮ,
ಆಕರ್ಷಕ ಜಾಹೀರಾತುಗಳು ಕೇವಲ ಪಟಾಕಿಗಳನ್ನಷ್ಟೇ ತೋರಿಸಿ
ದೀಪಾವಳಿಯ ಸಂದೇಶ ಸಾರುತ್ತಿರುವುದೂ ಇದಕ್ಕೆ ಕಾರಣವಾಗಿದೆ. ಸಿ.ಡಿ
ಹಾಕಿದರೆ ಸಾಕು.. `ಢಮ್..ಢಮ್..ಸುರ್..ಸುರ್..' ಎಂಬೆಲ್ಲಾ
ಸದ್ದಿನೊಂದಿಗೆ ಆಕರ್ಷಕ ಚಿತ್ತಾರಗಳನ್ನು ಕಂಪ್ಯೂಟರ್ ಪರದೆ ಮೇಲೆ
ಮೂಡಿಸುತ್ತದೆ. ಕಿವಿಗಡಚಿಕ್ಕುವ ಸದ್ದಿನ ಪಟಾಕಿಗಳು... ಬಿರುಸು
ಬಾಣಗಳಷ್ಟೇ
ದೀಪಾವಳಿಯ ಇಂದಿನ ವೈಭವವಾಗಿ ಉಳಿದುಕೊಂಡಿದೆ.
ಹಬ್ಬಗಳು ಮನೆಯವರನ್ನೆಲ್ಲಾ ಒಂದುಗೂಡಿಸುವ ಕಾಲ ಅದಾಗಿತ್ತು. ಆದರೆ
ಇಂದು ಹಬ್ಬಗಳಂದೂ ಮನೆಯಲ್ಲಿರದೆ `ಫ್ರೆಂಡ್ಸ್ ಜೊತೆ
ಎಂಜಾಯ್' ಮಾಡುವ ಕಾಲ ನಿರ್ಮಾಣಗೊಂಡಿದೆ. ಫ್ರೆಂಡ್ಸ್ ಜೊತೆ
ಮೊಬೈಲ್ನಲ್ಲಿ ಹರಟುತ್ತಾ.. ಪಾರ್ಕ್, ಕ್ಲಬ್ಗಳಲ್ಲಿ ಕಾಲ ಕಳೆಯುವ
ಮಂದಿಗೇನೂ ಕೊರತೆಯಿಲ್ಲ. ಕಾಲ ಕಾಲಕ್ಕೆ ಸಮಾಜ ಬದಲಾಗುತ್ತಿದೆ.
ಅದರ ಜೊತೆ ಜೊತೆಗೆ ಜನತೆಯೂ ..., ಆಚರಣೆಗಳಲ್ಲೂ ಬದಲಾವಣೆ
ಕಾಣುತ್ತೇವೆ. ಸಂಸ್ಕೃತಿ ಅಧಪತನವಾಗುತ್ತಿದೆ. ಮಕ್ಕಳಿಗೆ ಹಬ್ಬ,
ಸಂಸ್ಕೃತಿಯ ಮಹತ್ವ ಮನದಟ್ಟು ಮಾಡುವಲ್ಲಿ ನಮ್ಮ
ಹೆತ್ತವರು ಸೋಲುತ್ತಿದ್ದಾರೆ, ಜೊತೆ ಜೊತೆಗೆ ಶಿಕ್ಷಕರೂ ಕೂಡ.
ಇನ್ನಷ್ಟು
ಬೆಳಕಿನ
ಹಬ್ಬಕ್ಕೆ ಓದುಗರು ಕಳಿಸಿದ ಶುಭಾಶಯ ಪತ್ರಗಳು |