ಸಮಾಜಸೇವಾ ಸಮಿತಿಯಿಂದ ಒಂದು ವಿಭಿನ್ನ ಕಾರ್ಯಕ್ರಮ
ಬೆಂಗಳೂರು :
ಸಮಾಜ ಸೇವಾ ಸಮಿತಿಯು
ಜ್ಞಾನದ ಮೂಲಕ ಜನಸೇವೆಯನ್ನು ಮಾಡುತ್ತಿರುವುದು
ಶ್ಲಾಘನೀಯ ಎಂದು ಖ್ಯಾತ ಖಗೋಳ ಶಾಸ್ತ್ರಜ್ಞ ಎಸ್. ಬಾಲಚಂದ್ರರಾವ್ ತಮ್ಮ ಭಾಷಣದಲ್ಲಿ
ಹೇಳಿದ್ದಾರೆ.

ನಯನ ಸಭಾಂಗಣದಲ್ಲಿ
ಆಗಸ್ಟ್ ೧ ರಂದು ಸಮಾಜ ಸೇವಕರ ಸಮಿತಿ ಆಯೋಜಿಸಿದ ಸಮಾಜ ಸೇವಕರ ದಿನಾಚರಣೆ
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಧ್ಯಾಪಕರಿಗೆ ಶಿಕ್ಷಣದ ಮಹತ್ವ ಗೊತ್ತು, ವಿಜ್ಞಾನಿಗಳಿಗೆ
ವಿವಿಧ ರಂಗಗಳ ಪರಿಚಯವಿರುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ
ವಿಜ್ಞಾನ ಮತ್ತು ಸಂಗೀತ ಕ್ಷೇತ್ರಗಳೆರಡರಲ್ಲೂ ಪರಿಣತರಾಗಿದ್ದ ವಿಜ್ಞಾನಿ ಡಾ.
ರಾಜರಾಮಣ್ಣ, ಕಸ್ತೂರಿ ರಂಗನ್ ಮುಂತಾದವರನ್ನು ಅವರು ಹೆಸರಿಸಿದರು. ಆದರೆ ಈ ಬಗ್ಗೆ
ಹೆಚ್ಚು ಜನರಿಗೆ ತಿಳಿಯದಿರುವುದು ವಿಷಾದದ ಸಂಗತಿ ಎಂದರು.

ಅಹಂಕಾರ ಅನ್ನೋದು
ವಿಜ್ಞಾನದಲಿಲ್ಲ, ಐನ್ಸ್ಟಿನ್, ಮೇರಿಕ್ಯೂರಿಯವರ ಜೀವನವನ್ನು ಇಂದಿನ ಯುವಜನಾಂಗ
ಒಮ್ಮೆ ಅವಲೋಕಿಸಬೇಕು ಎಂದರು. ವರಾಹಮಿಹಿರನ ಬೃಹತ್ ಸಂಹಿತಾದಲ್ಲಿನ ಕೆಲವು
ಉದಾಹರಣೆ ನೀಡಿ, ವಿಜ್ಞಾನಿಗಳು ಈಗಿನ ಕಾಲದ ಋಷಿಗಳಿದ್ದ ಹಾಗೆ, ಅವರ ಗರಿ ಸತ್ಯಾನ್ವೇಷಣೆಯಾಗಿರಬೇಕು
ಎಂದರು.
ಕೂಡಲಿ ಚಿದಂಬರ
ಅವರ ಪುತ್ರ ಕೃಷ್ಣಮೂರ್ತಿ ಮಾತನಾಡುತ್ತಾ ಏಳು ದಶಕದಿಂದ ತಾವು ಪ್ರಕಾಶನ ಮಾಧ್ಯಮದಲ್ಲಿರುವುದಕ್ಕೆ
ಜನರ ಬೆಂಬಲವೇ ಕಾರಣ, ನಮ್ಮ ತಂದೆ ಹುಟ್ಟುಹಾಕಿದ ಕಾರ್ಯವನ್ನು ನಾನು ಮುಂದುವರೆಸುತ್ತಿದ್ದೇನೆ
ಎಂದರು.
ನರಹಳ್ಳಿ ಬಾಲಸುಬ್ರಮಣ್ಯ
ಮಾತನಾಡುತ್ತಾ ರಾಜಕಾರಣದಿಂದ ನಮ್ಮ ಭಾಷೆ ಕೂಡ ಅಪಮೌಲ್ಯವಾಗಿದೆ. ಅಂತಹವರು
ದೇಶಸೇವೆ, ಸಮಾಜಸೇವೆ ಎಂದು ಮಾತನಾಡಿದರೆ ನಗು ಬರುತ್ತದೆ. ಪರಿಸ್ಥಿತಿ ಹೀಗಿರುವಾಗ
ರಾಜಕಾರಣಿಗಳ ಸಹಾಯ ಪಡೆಯದೇ ಸಮಾಜ ಸೇವೆಗೆ ಮೌಲಿಕ ಅರ್ಥ ನೀಡುತ್ತಿರುವ
ಸಮಾಜ ಸೇವಕರ ಸಮಿತಿ ಸದಸ್ಯರು ನಿಜಕ್ಕೂ ಅಭಿನಂದನಾರ್ಹರು ಎಂದರು.

ಈಗ ಸಮಾಜದಲ್ಲಿ
ಭೋಗ ಸಂಸ್ಕೃತಿ, ವಾಣಿಜ್ಯ ಸಂಸ್ಕೃತಿ ತಾಂಡವವಾಡುತ್ತಿದೆ. ಸ್ವಾರ್ಥ, ಕ್ರೂರತನ ಅಧಿಕವಾಗಿದೆ.
ಇವೆಲ್ಲದರ ನಡುವೆ ಪರ್ಯಾಯ ಸಂಸ್ಕೃತಿಯ ನಿರ್ಮಾಣದ ಅಗತ್ಯವಿದೆ. ಸಾಹಿತ್ಯ ಹಾಗೂ
ವಿಜ್ಞಾನ ಜೀವನದಲ್ಲಿ ಸರಿಯಾಗಿ ಬೆರೆತರೆ ಜೀವನ ಸಾರ್ಥಕತೆಯನ್ನು ಪಡೆಯಬಹುದು.
ಯುವಕರ ಕನಸುಗಳನ್ನು
ಭ್ರಷ್ಟ ಸಮಾಜ ಹಾಳು ಮಾಡಿದೆ, ಇಡೀ ವಿಶ್ವವೇ ಒಂದು ಕುಟುಂಬ ಎಂಬ ವಿಶಾಲ ಮನೋಭಾವ
ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಮಾಜ ಸೇವಾ
ಸಮಿತಿ ಮಾಡುತ್ತಿರುವ ಕಾರ್ಯಕ್ಕೆ ನಮ್ಮಂತಹ ಹಿರಿಯರ ಬೆಂಬಲದ ಅಗತ್ಯವಿದೆ.
ಆದರೆ ಸಮಾಜ ಸೇವಾ ಸಮಿತಿ ಪ್ರಚಾರ ಬೇಡ ಎನ್ನುವುದು ಸರಿಯಲ್ಲ, ಪ್ರಚಾರದ ಮುಲಕ
ಇತರರಿಗೆ ಪ್ರೇರಣೆಯಾಗುವುದರಲ್ಲಿ ತಪ್ಪಿಲ್ಲ.
ಸಮಾಜದಿಂದ ನಾವು
ಪಡೆದಿರುವುದನ್ನು ದ್ವಿಗುಣವಾಗಿ ಹಿಂದಿರುಗಿಸಬೇಕು, ನಮ್ಮ ಸುತ್ತುಮುತ್ತಲಿನ ಪರಿಸರವನ್ನು
ಹಾಳು ಮಾಡದೆ ಚೆಂದಗಾಣಿಸಬೇಕು? ಎಂದು
ಕಾರಂತಜ್ಜನ ಮಾತುಗಳನ್ನು ನರಹಳ್ಳಿ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.