|
ಕುಂಬ್ಳೆ ಸುಂದರರಾಯರಿಂದ ಶೇಣಿ
ಸಂಸ್ಮರಣೆ
ವರದಿ : ಶ್ರೀನಿಧಿ.ಡಿ.ಎಸ್
ಚಿತ್ರ ಕೃಪೆ :
ಪ್ರಕಾಶಕ.ಕಾಂ
ಆಳ್ವಾಸ್ ನುಡಿಸಿರಿಯ ವೇದಿಕೆಯಲ್ಲಿ ಕುಂಬಳೆ ಸುಂದರ್ ರಾವ್, ಶೇಣಿ
ಗೋಪಾಲಕೃಷ್ಣ ಭಟ್ಟರ ಸಂಸ್ಮರಣೆಯ, ನುಡಿ ನಮನದಲ್ಲಿ
ತೊಡಗಿದ್ದರು. ಜೊತೆಗೆ ಕಂಬಾರರು ಮತ್ತು ಮೋಹನ ಆಳ್ವರು.
ತಮ್ಮ ಎಂದಿನ ರಂಜನೀಯ ಶೈಲಿಯಲ್ಲಿ ಮಾತನಾಡಿದ ಸುಂದರ
ರಾಯರು, ಶೇಣಿಯವರ ಬಗೆಗಿನ ನೆನಪಿನ ಬುತ್ತಿಯನ್ನ ಬಿಚ್ಚಿ
ನಮ್ಮ ಮುಂದಿಟ್ಟರು. ಹೇಗೆ ಹರಿದಾನ ವೃತ್ತಿಯಿಂದ ತಮ್ಮ
ಬದುಕನ್ನ ಆರಂಭಿಸಿದ ಶೇಣಿಯವರು ಯಕ್ಷ ಪ್ರಪಂಚದಲ್ಲಿ
ತಮ್ಮ ಛಾಪನ್ನ ಮೂಡಿಸಿ ಅಜರಾಮರರಾದರು ಅನ್ನುವುದನ್ನ
ಸೊಗಸಾಗಿ ನಿರೂಪಿಸಿದರು.
`ಕುರಿಯ ವಿಠ್ಠಲ ಶಾಸ್ತ್ರಿಗಳ ಆಸ್ಥೆಯಿಂದ ಯಕ್ಷರಂಗಕ್ಕೆ ಬಂದು,
ಕಿರಿಕಾಡು ವಿಷ್ಣು ಮಾಸ್ತರ್ರಿಂದ ಮಾತುಗಾರಿಕೆಯನ್ನ ಕಲಿತ
ಶೇಣಿಯವರು, ತಮ್ಮ ಯಕ್ಷ ರಂಗದ ಬದುಕಿನುದ್ದಕ್ಕೂ
ಯಶಸ್ಸನ್ನೇ ಕಂಡರು. ಹಂತಹಂತವಾಗಿ ಯಕ್ಷಗಾನದ ಒಳ
ಹೊರಗನ್ನ ಅರಿತು, ದಶಕಗಳ ಕಾಲ ಯಕ್ಷಗಾನ ರಂಗದ
ಅನಭಿಶಕ್ತ ಸಾಮ್ರಾಜ್ಞನಾಗಿ ಮೆರೆದವರು ಶೇಣಿ'.
ಶೇಣಿಯವರ ಪಾತ್ರ ವಿಸ್ತಾರದ ಕ್ರಮ, ಅರ್ಥ ವಿಸ್ತಾರ ಇವೆಲ್ಲ
ಯಾರಿಗೂ ಸರಿಸಾಟಿಯಿಲ್ಲದ್ದು ಎಂದು ಕುಂಬ್ಳೆಯವರು,
ಶೇಣಿಯವರು ಹೇಳಿದ್ದನ್ನೆ ಇಂದು ನಾವೆಲ್ಲ ಮತ್ತೆ ಮತ್ತೆ
ಹೇಳುತ್ತಿದ್ದೇವೆ, `ಶೇಣಿಯವರ ಮಾತುಗಳೇ ಇಂದಿಗೂ
ಯಕ್ಷಪ್ರಪಂಚದಲ್ಲಿ ಚಾಲ್ತಿಯಲ್ಲಿ ಉಳಿದಿವೆ' ಎಂದರು.
ಶೇಣಿಯವರು ಬಹಳ ರಸಿಕ ಮನಸ್ಕರೆಂಬುದನ್ನ ಹೇಳಿದ
ಕುಂಬ್ಳೆಯವರು, ಅವರು ಯಾವತ್ತೂ ವಿದೇಶಿ ಅತ್ತರನ್ನ
ಬಳಸುತ್ತಿದ್ದರು,
555 ಬ್ರಾಂಡಿನ ಸಿಗರೇಟನ್ನೇ ಸೇದುತ್ತಿದ್ದರು, ಬೆಳ್ಳಿ
ತಟ್ಟೆಯಲ್ಲೇ ವೀಳ್ಯದೆಲೆ ಸವಿಯುತ್ತಿದ್ದುದು ಮೊದಲಾದ
ಸ್ವಾರಸ್ಯಕರ ಅಂಶಗಳನ್ನ ಸಭಿಕರೆದುರು ತೆರೆದಿಟ್ಟರು.
ದಶರಥ, ಮಾಗಧ, ರಾವಣ, ಬಪ್ಪ ಬ್ಯಾರಿ, ಚಂದ ಗೋಪ,
ತುಘಲಕ್, ಶಾಂತಲಾದ ವಿಷ್ಣುವರ್ಧನ, ಯಯಾತಿ ಹೀಗೆ ಬಹು
ವೈವಿಧ್ಯಮಯವಾದ ಪಾತ್ರಗಳನ್ನು ನಿರ್ವಹಿಸಿದ ಶೇಣಿಯವರ
ಪಾಂಡಿತ್ಯ ಎಂತಹುದಾಗಿರಬಹುದೆಂದು ಅಚ್ಚರಿ ವ್ಯಕ್ತಪಡಿಸಿದ ಸುಂದರ
ರಾಯರು, ಶೇಣಿಯವರ ಬಗೆಗಿನ ಹಲವು ಸ್ವಾರಸ್ಯಕರ
ಘಟನೆಗಳನ್ನ ವಿವರಿಸಿ ನುಡಿ ನಮನ ಸಲ್ಲಿಸಿದರು.
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|