|
ನುಡಿಸಿರಿಯ ೨ನೇ ದಿನ-ಜನಪದ ಕಂಪಿನ
ಸಾಂಸ್ಕೃತಿಕ ಸಂಜೆ
ಮನಸ್ಸು ತುಂಬಾ ಬಣ್ಣ ಬಣ್ಣದ ಕನ್ನಡ ಸಂಸ್ಕೃತಿ ತುಂಬಿಕೊಂಡು
ನಿದ್ದೆ ಹೋಗಿರಬೇಕು, ನುಡಿಸಿರಿಯ ಜನಸಾಗರ!
ವರದಿ : ಶ್ರೀನಿಧಿ.ಡಿ.ಎಸ್
ಆಳ್ವಾಸ್ ನುಡಿಸಿರಿಯ ೨ನೇ ದಿನ, ಶನಿವಾರ ಸಂಜೆ ಕಲಾ ರಸಿಕರಿಗೆ
ಹಬ್ಬವೋ ಹಬ್ಬ! ಬಹು ವೈವಿಧ್ಯಮಯ ಸಾಂಸ್ಕೃತಿಕ
ಕಾರ್ಯಕ್ರಮಗಳು ನೆರೆದವರ ಮನ ತಣಿಸಿತು. ಸಂಜೆ ೫ಕ್ಕೆ
ಬಿ.ಹುಸೇನ್ ಸಾಬ್ ಅವರಿಂದ ಸುಗಮ ಸಂಗೀತ ಆರಂಭ. ಜನ
ಅದಾಗಲೇ ಸಭಾಂಗಣದ ತುಂಬ ಹರಡಿಕೊಂಡಾಗಿತ್ತು. ನಂತರ
ಅಪ್ಪಗರೆ ತಿಮ್ಮರಾಜು, ಕಿಕ್ಕೇರಿ ಕೃಷ್ಣಮೂರ್ತಿ, ಸುನೀತಾ
ಚಂದ್ರಕುಮಾರ್ ಮೊದಲಾದವರಿಂದ ಜನಪದ ರಸಸಂಜೆ. ಹಳೆಯ,
ನಾವು ಮರೆತೇ ಹೋಗಿಬಿಟ್ಟಿದ್ದ ಹಲವು ಮಧುರ ಜನಪದ
ಗೀತೆಗಳನ್ನು ಮನ ತುಂಬಿ ಹಾಡಿದರು.
ಎಲ್ಲೊ ಪುಸ್ತಕ ಮಳಿಗೆಗಳ ಹೊರಗೆ, ಮೆಟ್ಟಿಲುಗಳ ಮೇಲೆ, ನಿಂತೇ
ಆನಂದಿಸಿದ ಜನ! ಜನಪದ ಹಾಡುಗಳ ಗುಂಗಿನಿಂದ ಹೊರ ಬರುವ
ಮೊದಲೇ, ಚಿತ್ರನಟ ಶ್ರೀಧರ್ ಮತ್ತವರ ಪತ್ನಿ ಅನುರಾಧಾ
ಶ್ರೀಧರ್ ತಯಾರಿದ್ದರು, ತಮ್ಮ `ಮಹಾಭಾರತ ನೃತ್ಯ
ವೈಭವ'ದ ಜೊತೆ! ಇಡಿಯ ಮಹಾಭಾರತದ ಘಟನಾವಳಿಗಳನ್ನು ಈ
ದಂಪತಿ ಜೋಡಿ ಬಹು ಸೊಗಸಾಗಿ ಭರತನಾಟ್ಯದ ಮೂಲಕ ಪ್ರಸ್ತುತ
ಪಡಿಸಿದರು.
ಭರತನಾಟ್ಯ ನೋಡಲು ಜಾಗ ಸಿಕ್ಕಲಿಲ್ಲ ಅಂತ ನಿರಾಶರಾಗೋ ಮಾತಿಲ್ಲ!
ಕೆಳಗೆ, ಕೆ.ವಿ. ಸುಬ್ಬಣ್ಣ ಬಯಲು ರಂಗ ಮಂಟಪದಲ್ಲಿ ಯಕ್ಷಗಾನ
ಕೇಂದ್ರ ಉಡುಪಿ ಇವರಿಂದ `ಜಟಾಯು ಮೋಕ್ಷ' ಯಕ್ಷಗಾನ
ಅದಾಗಲೇ ಆರಂಭವಾಗಿತ್ತು! ಸಾವಿರಾರು ಜನ ಆರಾಮಾಗಿ ಕೂತು ನೋಡ
ಬಹುದಾದ ರಂಗ ಮಂಟಪ ಇದು. ಜಟಾಯು ಮೋಕ್ಷ ಒಂದು ವಿಭಿನ್ನ
ಶೈಲಿಯ ಯಕ್ಷ ಪ್ರಯೋಗ. ಹಿಮ್ಮೇಳದಲ್ಲಿ ಹಾರ್ಮೋನಿಯಮ್
ಬದಲಿಗೆ ಪಿಟೀಲನ್ನ ಬಳಸಲಾಗಿತ್ತು! ಬಡಗುತಿಟ್ಟಿನ ಸುಂದರ
ವೇಷಭೂಷಣಗಳು, ಸುಲಲಿತ ಮಾತುಗಾರಿಕೆ ಜನ ಮನ ಸೆಳೆದವು.
ನಂತರ ನಡೆದಿದ್ದು ಬೆನಕ, ಬೆಂಗಳೂರು ತಂಡದಿಂದ ಸತ್ತವರ
ನೆರಳು ನಾಟಕ. ನಾಗಾಭರಣ, ಎಮ್.ಎಸ್. ಕಾರಂತ್, ಮೈಕೊ
ಮಂಜು ಮೊದಲಾದ ಪ್ರತಿಭಾವಂತ ಕಲಾವಿದರಿಂದ ಕೂಡಿದ ಈ ತಂಡ
ಅತ್ಯಂತ ಪರಿಣಾಕಾರಿಯಾಗಿ ಜನರನ್ನ ಹಿಡಿದಿಟ್ಟಿತು. ಮಠಗಳ ಒಳಗಿನ
ಡಂಭಾಚಾರ, ಒಳ ಜಗಳ, ಮಠಾಧಿಪತಿಗಳ ಪೊಳ್ಳು
ಮನಸ್ಥಿತಿಯನ್ನ ಜಡಭರತ ಜಿ.ಬಿ.ಜೋಶಿಯವರ ಈ ನಾಟಕ ಚೆನ್ನಾಗಿ
ತೆರೆದಿಟ್ಟಿದೆ. ನಾಗಭರಣರ ನಿರ್ದೇಶನದ ಈ ನಾಟಕಕ್ಕೆ ಜನ
ನೋಡೆದ್ದಾಗ ಸರಿರಾತ್ರಿ ೧೨! ಮನಸ್ಸು ತುಂಬಾ ಬಣ್ಣ ಬಣ್ಣದ ಕನ್ನಡ
ಸಂಸ್ಕೃತಿ ತುಂಬಿಕೊಂಡು ನಿದ್ದೆ ಹೋಗಿರಬೇಕು, ನುಡಿಸಿರಿಯ
ಜನಸಾಗರ!
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|