|
ಆಧುನಿಕ ವಿದ್ಯಮಾನಗಳ ನಡುವೆ ಶಿಕ್ಷಣದ ಸವಾಲುಗಳು
ಪ್ರಥಮಗೋಷ್ಠಿಯಲ್ಲಿ ಪರಿಣಾಮಕಾರಿ ಚರ್ಚೆ
ವರದಿ : ಹರೀಶ್ ಕೆ. ಆದೂರು
ಚಿತ್ರ ಕೃಪೆ :
ಪ್ರಕಾಶಕ.ಕಾಂ
ಆಧುನಿಕ ವಿದ್ಯಮಾನಗಳ ನಡುವೆ ಶಿಕ್ಷಣದ ಸವಾಲುಗಳು ಎಂಬ
ಪ್ರಥಮ ದಿನದ ಪ್ರಥಮ ಗೋಷ್ಠಿ ಅತ್ಯಂತ ಪರಿಣಾಮಕಾರಿಯಾಗಿ
ಮೂಡಿಬಂತು. ಮೊದಲ ಗೋಷ್ಠಿಯಲ್ಲಿ ಅಧ್ಯಕ್ಷಾಧಿಯಾಗಿ ಪ್ರಬಂಧ
ಮಂಡಿಸಿದ ಎಲ್ಲರೂ ಇಂಗ್ಲಿಷ್ ಕಲಿಕೆಯ ಬಗ್ಗೆ ವಿರೋಧ
ವ್ಯಕ್ತಪಡಿಸಿದರಲ್ಲದೆ ಸರಕಾರದ ನಿಲುವಿಗೆ ತೀವ್ರ ಆಕ್ಷೇಪ
ವ್ಯಕ್ತಪಡಿಸಿದರು.
ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆ ವಿಚಾರದಲ್ಲಿ ಅತ್ಯಂತ
ಉಪಯುಕ್ತ ಚರ್ಚೆ ತನ್ಮೂಲಕ ನುಡಿಸಿರಿಯಲ್ಲಿ ನಡೆಯಿತು.

ಸಮಾನ ಶಿಕ್ಷಣ ನೀತಿ: ಸರಕಾರ ಸಮಾನ ಶಿಕ್ಷಣ ನೀತಿ ಜಾರಿಗೆ
ತರಬೇಕಾಗಿದೆ. ಕಾಮನ್ ಸ್ಕೂಲ್ ಸ್ಥಾಪಿಸಬೇಕಾಗಿದೆ. `ಕನ್ನಡದಲ್ಲಿ
ಕಲಿ, ಇಂಗ್ಲಿಷನ್ನು ಚೆನ್ನಾಗಿ ಕಲಿ' ಎಂಬ ಉದ್ಘೋಷಗಳೊಂದಿಗೆ ಹೆಚ್ಚು
ಹೆಚ್ಚು ಕನ್ನಡ ಶಾಲೆಗಳು ಸ್ಥಾಪನೆಗೊಳ್ಳಬೇಕಾಗಿದೆ ಎಂದು
ಗೋಷ್ಠಿಯಲ್ಲಿ ಕನ್ನಡ ಶಾಲೆಗಳ ನಾಳೆ ವಿಚಾರದಲ್ಲಿ ಪ್ರಬಂಧ
ಮಂಡಿಸಿದ ಸಿ.ಎಚ್ ಬಾಳಿಲ ಕೃಷ್ಣ ಶಾಸ್ತ್ರಿ ಅಭಿಪ್ರಾಯಿಸಿದರು.
ಅತ್ತ ಕನ್ನಡ ಬಾರದ ಇತ್ತ ಕನ್ನಡ ಮಾತನಾಡಲಾರದ ತ್ರಿಶಂಕು
ಸ್ಥಿತಿಯನ್ನು ಇಂದಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು
ಅನುಭವಿಸುತ್ತಿದ್ದಾರೆ ಎಂದವರು ಕಳವಳ ವ್ಯಕ್ತಪಡಿಸಿದರು.
ಸಂಸ್ಕೃತಿಯನ್ನು ಭಾಷೆಯಿಂದ ಬೇರ್ಪಡಿಸಿ ನೋಡಲಾಗದು.
ಭಾಷೆಯೊಂದು ನಾಶಗೊಂಡರೆ ಇಡೀ ಸಂಸ್ಕೃತಿಯೂ ನಾಶಗೊಂಡಂತೆ
ಎಂದ ಅವರು, ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಕೆ ಸರ್ವಥಾ
ಅಸಾಧ್ಯ. ಇದು ವಾಸ್ತವವೂ ಅಲ್ಲ. ದ್ವಿತೀಯ ಭಾಷೆಯಾಗಿ ಇನ್ನೂ
ಪ್ರಯೋಗ ಹಂತದಲ್ಲಿ ಇಂಗ್ಲಿಷ್ ಇರಬೇಕಾದರೆ ಅಷ್ಟೊಂದು
ಅವಸರಾವಸರದಲ್ಲಿ ಸರಕಾರ ಇಂಗ್ಲಿಷ್ ಕಲಿಕೆಗೆ ಪ್ರಾಧಾನ್ಯತೆ
ಯಾಕೆ ನೀಡುತ್ತಿದೆ ಎಂಬುದೇ ಪ್ರಶ್ನೆಯಾಗಿದೆ ಎಂದರು.
`ಪರಿಣಾಮ ಕಾರಿಯಾಗಿ ಇಂಗ್ಲಿಷ್ ಕಲಿಯಬೇಕು. ಅದು ಒಂದನೇ
ತರಗತಿಯಿಂದ ಅಲ್ಲ' ಎಂದವರು ಒತ್ತಿ ಹೇಳಿದರು.
ಖಾಸಗೀ ಶಾಲೆಗಳ ಆಡಳಿತ ಮಂಡಳಿಗಳು ಇಂಗ್ಲಿಷ್ ಮಾಧ್ಯಮ
ಶಾಲೆಗಳನ್ನು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಾಣುತ್ತಿದ್ದಾರೆ.
ನಿಜವಾಗಿಯೂ ಕನ್ನಡದ ಬಗ್ಗೆ ಕಾಳಜಿ ಇದ್ದಲ್ಲಿ, ಗುಣಮಟ್ಟದ ಶಿಕ್ಷಣ
ನೀಡುವ ಆಸಕ್ತಿ ಇದ್ದಲ್ಲಿ ಕನ್ನಡ ಮಾಧ್ಯಮಗಳ ಸಂಖ್ಯೆ ಹೆಚ್ಚಿಸಲಿ
ಎಂದರು.
ವಸಾಹತುಶಾಹಿ ಮಂಕು: ಇಂದು ವಸಾಹತೂ ಶಾಹಿ ಮಂಕಿಗೆ
ನಾವು ಒಳಗಾಗಿದ್ದೇವೆ. ಇಂಗ್ಲಿಷ್ ಭಾಷೆಯೇ ಮನೋಭೂಮಿಕೆಯಾಗಿ
ಉಳಿದುಹೋಗಿದೆ. ಇದು ಶಿಕ್ಷಣ ಮತ್ತು ಸಂಸ್ಕೃತಿಯ ಮೇಲೆ
ಪರಿಣಾಮಕಾರಿಯಾದ ಪ್ರಭಾವ ಬೀರಿದೆ ಎಂದು ಡಾ.ಡಿ.ಎಸ್ ನಾಗಭೂಷಣ
ಅಭಿಪ್ರಾಯಿಸಿದರು.
ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಸಂಸ್ಕೃತಿ ವಿಚಾರದಲ್ಲಿ ಡಾ.ಆರ್
ಪೂರ್ಣಿಮ ಪ್ರಬಂಧ ಮಂಡಿಸಿದರು.
ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಆಳ್ವಾಸ್
ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ ಮೋಹನ ಆಳ್ವ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
  
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|