|
ನಮ್ಮ ಸಂಭ್ರಮವನ್ನು ಯಾರೂ ಹೈಜಾಕ್ ಮಾಡದಿರಲಿ
!
ನಮ್ಮ
ಮುಂದಿರುವುದು ಹೋರಾಟದ ಕಣ. ಭಯೋತ್ಪಾದನೆಯ ವಿರುದ್ಧ
ಜಯಗಳಿಸಬೇಕಾಗಿದೆ ಎಂಬುದನ್ನು ಮರೆತೀರಾ...
ರಾಜಲಕ್ಷ್ಮಿ
ಕೆಲವೊಂದು ಶಬ್ಧಗಳು ಕಾಲ ಸಂದಂತೆ ತಮ್ಮ ಅರ್ಥವನ್ನು
ವಿಸ್ತರಿಸಿಕೊಳ್ಳುತ್ತವೆ. ಅಥವಾ ಅರ್ಥಗಳು ಸಂಕುಚಿತವಾಗುವುದೂ
ಉಂಟು. ಉದಾಹರಣೆಗೆ ಪ್ರಗತಿ ಅಥವಾ ಅಭಿವೃದ್ಧಿ.
ಪ್ರಕೃತಿ
ಪ್ರೇಮಿಗಳನ್ನು ಕೇಳಿದರೆ ಈ ಫ್ಲೈಓವರ್ಗಳು, ದೊಡ್ಡ ದೊಡ್ಡ
ಅಣೆಕಟ್ಟುಗಳು, ಪರಮಾಣು ಯೋಜನೆಗಳು, ವಿದ್ಯುತ್ ಉತ್ಪಾದನೆಯ
ರಕ್ಕಸಗಾತ್ರದ ಕಾರ್ಖಾನೆಗಳೆಲ್ಲ ಅಭಿವೃದ್ಧಿ ಅಲ್ಲವೇ ಅಲ್ಲ.
ಯಾಕೆಂದರೆ ದೂರದೃಷ್ಟಿಯಿಟ್ಟುಕೊಂಡು ನೋಡಿದಾಗ ಆ ಯೋಜನೆಗಳಿಂದ
ಮನು ಕುಲಕ್ಕೆ ಹಾನಿಯೇ ಕಟ್ಟಿಟ್ಟ ಬುತ್ತಿ.
ಹಸಿರನ್ನು ಕೆಡಿಸುವ, ಉಸಿರಾಟದ ಗಾಳಿಯನ್ನು ವಿಷಗೊಳಿಸುವ ಮತ್ತು
ಮಾನವ ಸಮುದಾಯಗಳನ್ನೇ ನಾಶಮಾಡುವ ಯೋಜನೆಗಳು ಸದ್ಯಕ್ಕೆ
ಎಷ್ಟೇ ಲಾಭ ಕೊಟ್ಟರೂ ಅವುಗಳನ್ನು ಅಭಿವೃದ್ಧಿ ಎಂದು ಪರಿಗಣಿಸುವುದಕ್ಕಾಗದು.
ಯಾಕೆಂದರೆ ಅವು ಲಾಭದ ಜೊತೆ ಜೊತೆಗೆ ಪರೋಕ್ಷವಾಗಿ ಮನುಷ್ಯ
ಕುಲಕ್ಕೆ ಹಾನಿ ಮಾಡುವ ಕಾರ್ಯವನ್ನೂ ಮಾಡುತ್ತಲೇ ಇರುತ್ತವೆ.
ಹೀಗೆ
ಮುಂದುವರೆದ ಸಮಾಜ, ನಾಗರೀಕ ಸಮಾಜ, ಆಧುನಿಕತೆ ಎಂಬ
ಪದಗಳೂ ಕೂಡ ತಮ್ಮ ಅರ್ಥಗಳಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟು
ಹಾಕಬಲ್ಲವು. ಆ ಪದಗಳ ಕುರಿತ ಪ್ರತ್ಯೇಕ ಚರ್ಚೆ ಏನೇ ಇರಲಿ, ಸದ್ಯಕ್ಕೆ
ಈ ಸಾಲಿಗೆ ಸೇರಿದ ಇನ್ನೊಂದು ಪದವೆಂದರೆ `ಸ್ವಾತಂತ್ರ್ಯ ?.
೧೯೪೭ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ- ಬಂಧನದಿಂದ, ದಾಸ್ಯದಿಂದ
ನಾವೆಲ್ಲ ಮುಕ್ತರಾಗಿದ್ದೇವೆ. ಇನ್ನೇನು ಅಭಿವೃದ್ಧಿಯ, ಏಳ್ಗೆಯ ಸಾಮ್ರಾಜ್ಯವೊಂದರ
ನಿರ್ಮಾಣ ಕಾರ್ಯದ ಅವಕಾಶ ಭಾರತೀಯರಿಗೆ ದಕ್ಕಿಯೇ ಬಿಟ್ಟಿತು ಎಂಬ
ಖುಷಿ ದೇಶದೆಲ್ಲೆಡೆ ವ್ಯಾಪಿಸಿತ್ತು.
ನಂತರ
ನಮ್ಮದೇ ಆದ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡೆವು. ಪ್ರಜಾಸತ್ತೆ,
ಚುನಾವಣೆಗಳೆಂಬ ಚುಕ್ಕಾಣಿಗಳೊಂದಿಗೆ ಮುಂದುವರೆಯುವಾಗ
ಎದುರಾದ ಏರಿಳಿತಗಳನ್ನೂ ಕೂಡ `ಏನೇ ಆಗಲಿ ಇಲ್ಲಿರುವುದು ನಾವೇ
ತಾನೇ? ? ಎಂಬ
ಒಂದು ನಿರಾಳತೆಯೊಂದಿಗೆ ನಿರ್ಲಕ್ಷ್ಯದಿಂದ ಸ್ವೀಕರಿಸಿದೆವು. ನಮ್ಮದು ಸ್ವತಂತ್ರದೇಶ,
ಯಾರ ಹಂಗೂ ನಮಗಿಲ್ಲ ಎಂಬ ನೆಮ್ಮದಿ ಭಾರತೀಯರೆದೆಯಲ್ಲಿ ಮನೆಮಾಡಿತ್ತು.
ಈ
ಬಾರಿ ಹಾಗಲ್ಲ
ಆದರೆ ಈ ಬಾರಿಯ ಸ್ವಾತಂತ್ರ್ಯ ಆಚರಣೆಯ ಸಂದರ್ಭದಲ್ಲಿ ದೇಶದ
ವಸ್ತು ಸ್ಥಿತಿ `ನಾವು ನಿರಾಳವಾಗಿರುವ ಹಾಗಿಲ್ಲ ?
ಎಂದು ಸ್ಪಷ್ಟವಾಗಿ ಸೂಚಿಸುತ್ತಿದೆ. ಬೇಡ ಬೇಡವೆಂದರೂ ಈ ವಿಷಯ ಮನಸ್ಸಿಗೆ
ಬಂದು ರಾಚುತ್ತದೆ. ಖಿನ್ನವೆನಿಸುತ್ತದೆ. ಅದಕ್ಕೆ ಪೂರಕವಾಗಿ ಈ ಬಾರಿಯ
ಸ್ವಾತಂತ್ರ್ಯ ಆಚರಣೆಯ ವಾತಾವರಣವೂ ಇದೆ.
ನಮಗೆ
ಗೊತ್ತಿಲ್ಲದ ಹಾಗೆ ಅಥವಾ ನಮ್ಮ ನಿರ್ಲಕ್ಷ್ಯಗಳ, ಮುಲಾಜುಗಳ,
ದಾಕ್ಷಿಣ್ಯಗಳ ಲಾಭ ಪಡೆದುಕೊಂಡು ಯಾರೋ ನಮ್ಮ ಒಗ್ಗಟ್ಟನ್ನು
ಹೈಜಾಕ್ ಮಾಡಿಬಿಟ್ಟಿದ್ದಾರೆ. ದೇಶ ಸ್ವತಂತ್ರವಾಗಿರುವ ದಿನವನ್ನು ಸಂಭ್ರಮದಿಂದ
ಆಚರಿಸುವ ಸ್ವತಂತ್ರ ಈ ಬಾರಿಯ ಸ್ವಾತಂತ್ರ್ಯ ದಿನದಂದು ನಮಗೆ
ಲಭ್ಯವಾಗಿಲ್ಲ.
ಎಲ್ಲೆಂದರಲ್ಲಿ ಭದ್ರತೆ, ಚೆಕಿಂಗ್ ! ದೇವಸ್ಥಾನಗಳಿಗೆ ಹೋಗುತ್ತೀರಾ... ಅಲ್ಲಿ
ಬಾಂಬ್ದಾಳಿ ಸಾಧ್ಯತೆಯ ಬಗ್ಗೆ ಪೇಪರ್ನಲ್ಲಿ ಓದಿರುವುದರಿಂದ ಹೋಗುವುದಕ್ಕೆ
ಹಿಂದೇಟು. ಉಗ್ರರು ರೇಡಿಯೋ ವಿಕಿರಣ ಬಳಸುತ್ತಾರಂತೆ, ಆತ್ಮಾಹುತಿ
ಬಾಂಬ್ಗಳನ್ನು, ರಾಸಾಯನಿಕಗಳನ್ನು ಬಳಸುತ್ತಾರಂತೆ, ಕೋಕ್ನ
ಮೂಲಕವೂ ಉಗ್ರರು ರಾಸಾಯನಿಕಗಳನ್ನು ಹರಡುತ್ತಾರಂತೆ.... ಹೀಗೆ
ಊಹಾಪೋಹಗಳು, ಕಟ್ಟೆಚ್ಚರಗಳು. ಎಲ್ಲಿದೆ ಸಂಭ್ರಮ ?
ದಿನಪತ್ರಿಕೆಯೊಂದರಲ್ಲಿ
ಸಹ ಶೀರ್ಷಿಕೆ ಹೀಗಿದೆ : `ಸ್ವಾತಂತ್ರ್ಯೋತ್ಸವದ ಸಂಭ್ರಮದ ಮೇಲೆ
ಭಯೋತ್ಪಾದನೆಯ ಕರಿನೆರಳು ?.
ಭಯವಿದ್ದಲ್ಲಿ, ಕಪ್ಪು ಛಾಯೆಯ ಬೇಸರವಿದ್ದಲ್ಲಿ ಸಂಭ್ರಮ
ಇರುವುದಕ್ಕೆ ಹೇಗೆ ತಾನೇ ಸಾಧ್ಯ? ಅರ್ಥ ವ್ಯತ್ಯಾಸಗೊಂಡ
ಪದಗಳ ಸಾಲಿಗೆ `ಸಂಭ್ರಮ?
ಎಂಬ ಪದವೂ ಸೇರಿತೇ? ಹಾಗಾಗದಿರಲಿ. ಹಾಗಾಗದಂತೆ ಮಾಡುವ
ಅವಕಾಶ ಈಗ ನಮ್ಮ ಮುಂದಿದೆ.
ಸ್ವಾತಂತ್ರ್ಯೋತ್ಸವದ
ಶುಭಾಶಯಗಳು ಎಂಬ ಹಾರೈಕೆಗಿಂತ ಈ ಸಂದರ್ಭದಲ್ಲಿ ಭಾರತೀಯರ
ಸಂಭ್ರಮದ ಮೇಲೆ ಯಾವ ಕರಿನೆರಳೂ ಬೀಳದಿರಲಿ ಎಂಬ ಹಾರೈಕೆಯೇ
ಸೂಕ್ತವೆನಿಸುತ್ತದೆ. ಭಯೋತ್ಪಾದನೆ ಎಂಬ ರಾಕ್ಷಸ ನಮ್ಮನ್ನು ಹೈಜಾಕ್
ಮಾಡಿದ್ದಾಗಿದೆ. ನಾವು ಆ ತೆಕ್ಕೆಯಿಂದ ಬಿಡಿಸಿಕೊಳ್ಳಲು ಹೋರಾಡಬೇಕಿದೆ.
|