ಉತ್ತರ ಕ್ಯಾಲಿಫೋರ್ನಿಯಾದಲ್ಲಿ
ಧರ್ಮಾಧಿಕಾರಿಗಳು
ನಾಲ್ಕನೆಯ ವಿಶ್ವ ಕನ್ನಡ
ಸಮ್ಮೇಳನಕ್ಕಾಗಿ ಬಾಲ್ಟಿಮೋರ್ಗೆ ಆಗಮಿಸಿದ್ದ ಶ್ರೀಕ್ಷೇತ್ರ
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ
ಅವರು, ಸಮ್ಮೇಳನದ ನಂತರ ಅಮೆರಿಕೆಯ ಇತರ ಹಲವು
ನಗರಗಳಿಗೂ ಭೇಟಿ ಕೊಡುತ್ತಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ
ಮಿಲ್ಪೀಟಸ್ನ ಜೈನ ದೇಗುಲಕ್ಕೆ ಆಗಮಿಸಿದ್ದ ಅವರು ಇಲ್ಲಿಯ ಭಾರತೀಯ
ಸಮುದಾಯವನ್ನುದ್ದೇಶಿಸಿ ಮಾತನಾಡಿದರು. ಮಿಲ್ಪೀಟಸ್ ಜೈನ
ದೇವಾಲಯದ ಕಾರ್ಯಕಾರಿ ಸಮಿತಿ ಹಾಗೂ ಉತ್ತರ ಕ್ಯಾಲಿಫೋರ್ನಿಯ
ಕನ್ನಡಕೂಟ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸುಮಾರು
ನಾನೂರಕ್ಕೂ ಹೆಚ್ಚು ಸಭಿಕರು ಬಂದು ಹೆಗ್ಗಡೆಯವರ ವಿಚಾರಧಾರೆಯನ್ನು
ಕೇಳುವ ಸುಯೋಗ ಪಡೆದರು.
ಸೆಪ್ಟೆಂಬರ್ ೧೦ ರಂದು ಭಾನುವಾರ
ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ ಎರಡು ಭಾಗಗಳಿದ್ದವು. ಮೊದಲ
ಭಾಗದಲ್ಲಿ ನೆರೆದ ಸಭಿಕರಿಗೆಲ್ಲ ಅನುಕೂಲವಾಗುವಂತೆ ಇಂಗ್ಲಿಷ್ ಭಾಷೆಯಲ್ಲಿ
ಮಾತನಾಡಿದ ಶ್ರೀ ಹೆಗ್ಗಡೆಯವರು ಎರಡನೆಯ ಭಾಗದಲ್ಲಿ, ಕನ್ನಡಕೂಟದ
ಸದಸ್ಯರಿಗೆಂದೇ ಕನ್ನಡದಲ್ಲಿ ಮಾತನಾಡಿದರು. ಇದರ ನಂತರ ನಡೆದ
ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ, ಕನ್ನಡ ಕೂಟದ ಸದಸ್ಯರು
ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಹೆಗ್ಗಡೆಯವರು ತಮ್ಮ
ವಿಚಾರಧಾರೆಯನ್ನು ಸಭಿಕರಿಗೆ ವಿಷದವಾಗಿ ತಿಳಿಯಪಡಿಸಿದರು.
ಶ್ರೀಕ್ಷೇತ್ರದ ವತಿಯಿಂದ ನಡೆಸುತ್ತಿರುವ
ಗ್ರಾಮೀಣ ಅಭಿವೃದ್ಧಿ ಯೋಜನೆ, ಬಡತನ ನಿರ್ಮೂಲನ, ದುಶ್ಚಟಗಳ ನಿರ್ಮೂಲನ,
ಮಹಿಳಾ ವಿಕಾಸ, ಸ್ವ-ಉದ್ಯೋಗ ಕಾರ್ಯಕ್ರಮಗಳು, ದೇವಸ್ಥಾನ ಮತ್ತು
ಹಳೆಯ ಸ್ಮಾರಕಗಳ ಪುನರುದ್ಧಾರ, ಮೊದಲಾದ ಹಲವಾರು
ಯೋಜನೆಗಳನ್ನು ಹೆಗ್ಗಡೆಯವರು ಪರಿಚಯಮಾಡಿಕೊಟ್ಟರು. ನಾಡಿನ
ಸಾಮಾಜಿಕ-ಶೈಕ್ಷಣಿಕ-ಧಾರ್ಮಿಕ- ಆರ್ಥಿಕ ಬೆಳವಣಿಗೆಗೆ ಬೇಕಾಗಿರುವ
ಈ ಕಾರ್ಯಕ್ರಮಗಳು ಹೇಗೆ ಒಂದಕ್ಕೊಂದಕ್ಕೆ ಪೂರಕವೆಂಬುದನ್ನು
ಅವರು ಮನದಟ್ಟುಮಾಡಿಕೊಟ್ಟರು.
ನಮ್ಮ ಸಂಸ್ಕೃತಿಯನ್ನು,
ಭಾಷೆಯನ್ನು ಉಳಿಸಿ ಬೆಳೆಸಿಕೊಳ್ಳುವುದರ ಮಹತ್ವವನ್ನು ಹೆಗ್ಗಡೆಯವರು
ವಿವರಿಸಿದರು. ಸಂಸ್ಕೃತಿಯ ಒಂದು ಪ್ರಮುಖ ಅಂಗ ಧರ್ಮ. ಹಾಗಾಗಿ,
ನಾವೆಲ್ಲರೂ ನಮ್ಮ ಬಿಡುವಿಲ್ಲದ ದೈನಂದಿನ ಕಾರ್ಯಚಟುವಟಿಕೆಗಳ ನಡುವೆಯೂ,
ಕೊಂಚ ಸಮಯ ಮಾಡಿಕೊಂಡು ನಮ್ಮ ಸಂಸ್ಕೃತಿ ಧರ್ಮಗಳ ಬಗ್ಗೆ
ಚಿಂತಿಸುವುದರ ಅಗತ್ಯವನ್ನು ಹೆಗ್ಗಡೆ ಅವರು ಅರಿವು ಮಾಡಿಕೊಟ್ಟರು.
ಮುಂದಿನ ಪೀಳಿಗೆಗೆ ನಮ್ಮ ಬೇರುಗಳನ್ನು ಕಾಯ್ದುಕೊಂಡು ಹೋಗುವುದು
ಎಷ್ಟು ಅಗತ್ಯ ಎಂಬುದನ್ನು ಅವರು ವಿವರಿಸಿದರು. ಮನುಷ್ಯನು
ಏಳಿಗೆಗೆ ಬರಬೇಕಾದರೆ ಧರ್ಮವನ್ನು ಬೇರೆ ಇಟ್ಟು ನೋಡುವ ಮನೋಭಾವ
ಹೋಗಬೇಕು. ಧರ್ಮ ಎಂಬುದು ಜೀವನದಲ್ಲಿ ಹಾಸುಹೊಕ್ಕಾಗಿದ್ದಾಗಲೇ,
ಅದು ಜೀವನದ ವಿವಿಧ ಅಂಗಗಳೊಡನೆ ಸಾಮರಸ್ಯ
ಉಂಟುಮಾಡಿದಾಗಲೇ ಪ್ರಗತಿ ಸಾಧ್ಯ ಎಂದು ಅವರು ನುಡಿದರು.
ಸಂಸಾರಿಯಾಗಿದ್ದೂ ಮಹಾಯೋಗಿಯಾಗಿದ್ದ
ಭರತನ ಕಥೆ ಹೇಳಿದ ಹೆಗ್ಗಡೆಯವರು, ಭರತ
ಚಕ್ರವರ್ತಿಯ ವಿಚಾರಗಳು ಇಂದಿಗೂ ಹೇಗೆ ಆದರ್ಶಪ್ರಾಯವಾಗಿವೆ
ಎಂಬುದನ್ನು ತಿಳಿಸಿದರು.
ಕರ್ನಾಟಕದಲ್ಲಿ ನಡೆಯುತ್ತಿರುವ
ಮೂಲಭೂತ ಸೌಕರ್ಯ ಒದಗಿಸುವ ಅಭಿವೃದ್ಧಿ ಯೋಜನೆಗಳು, ಐಟಿ
ಕ್ರಾಂತಿಗಳ ಬಗ್ಗೆಯೂ ಮಾತಾಡಿದ ಶ್ರೀ ವೀರೇಂದ್ರ ಹೆಗ್ಗಡೆಯವರು,
ಈ ಕ್ರಾಂತಿಯಲ್ಲಿs ಧರ್ಮಸ್ಥಳ, ಮತ್ತು ಇತರ ಧಾರ್ಮಿಕ ಸಂಘಟನೆಗಳು
ತಾಂತ್ರಿಕ ಶೈಕ್ಷಣಿಕ ಸಂಸ್ಥೆಗಳ ಮೂಲಕ ಪ್ರಮುಖ ಪಾತ್ರವನ್ನು ವಹಿಸುತ್ತಿರುವುದನ್ನು
ವಿವರಿಸಿದರು. ಅಷ್ಟೇ ಅಲ್ಲದೆ ಧಾರ್ಮಿಕ ಸಂಸ್ಥೆಗಳು ಇನ್ನೂ ಯಾವ
ರೀತಿಯಲ್ಲಿ ಹೆಚ್ಚಿನ ಕೆಲಸ ಮಾಡಬಹುದು ಎಂಬುದನ್ನು, ಹೆಗ್ಗಡೆ
ಅವರು ಉದಾಹರಣೆಗಳ ಸಹಿತ ಹೇಳಿದರು.
ಕರ್ನಾಟಕಕ್ಕೆ ಹೊಸ ಅವಕಾಶಗಳನ್ನು
ತಂದುಕೊಡುವುದರಲ್ಲಿ ವಿದೇಶಿ ಕನ್ನಡಿಗರ ಪಾಲನ್ನು ಹೊಗಳಿದ
ಅವರು, ಇನ್ನೂ ಹಲವು ಕ್ಷೇತ್ರಗಳಲ್ಲಿ ಹೊರದೇಶದಲ್ಲಿರುವ ಕನ್ನಡಿಗರು
ತಾಯ್ನಾಡಿಗೆ ಇನ್ನೂ ಹೆಚ್ಚಿನ ಸಹಕಾರ ಕೊಡಬಹುದು ಎಂದು ನುಡಿದರು.
ಎಲ್ಲರೂ ತಮ್ಮ ತಮ್ಮ ಭಾಷೆ
ಸಂಸ್ಕೃತಿಗಳನ್ನು ಉಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಮೆರಿಕೆಯಲ್ಲಿರುವ
ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡಿದ್ದಾರೆ- ಇದನ್ನು ಮುಂದಿನ
ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ಇಲ್ಲಿನ ಥಳುಕಿನ ಜೀವನದ ನಡುವೆಯೂ, ತಮ್ಮ ಬೇರುಗಳನ್ನು
ಉಳಿಸಿಕೊಳ್ಳುತ್ತಿರುವ ಪ್ರಯತ್ನವನ್ನು ಮಾಡುವ ಇಲ್ಲಿಯ ಕನ್ನಡಿಗರಿಗೆ
ಗೌರವ ಅರ್ಪಿಸಬಯಸುತ್ತೇನೆ ಎಂದ ಹೆಗ್ಗಡೆಯವರು, `ಎಲ್ಲಾದರು
ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು?
ಎಂಬ ಕವಿವಾಣಿಯನ್ನು ಪುನರುಚ್ಚರಿಸಿದರು.
ಉತ್ತರ ಕ್ಯಾಲಿಫೋರ್ನಿಯ ಕನ್ನಡಕೂಟದ
ಅಧ್ಯಕ್ಷ ನರೇನ್ ಅವರು ಕೂಟದ ಸದಸ್ಯರ ಪರವಾಗಿ ಹೆಗ್ಗಡೆಯವರಿಗೆ
ಮಾಲಾರ್ಪಣೆ ಮಾಡಿ, ಶಾಲು ಹೊದೆಸಿ, ಕೃತಜ್ಞತಾ ಫಲಕಗಳನ್ನು
ಕೊಟ್ಟು ಧನ್ಯವಾದಗಳನ್ನು ಸಲ್ಲಿಸಿದರು.