Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 23 September 2006 10:01 AM

ಸುಂದರ ಮೈಸೂರಿಗೆ ಶೋಭೆಯ ದಸರಾ

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಪ್ರಸಿದ್ಧ ಪ್ರವಾಸಿ ತಾಣವಾದ ಮೈಸೂರು ನಗರವೀಗ ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಮಿನುಗುತ್ತಿದೆ. ಧಾರ್ಮಿಕ ಕಂಪನ್ನು ಬೀರುವ, ಭಾವೈಕ್ಯತೆಯ ಸೇತುವೆಯನ್ನು ನಿರ್ಮಿಸುವ, ಸಾಂಸ್ಕೃತಿಕ ಸಮ್ಮಿಲನವನ್ನು ಏರ್ಪಡಿಸುವ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೈಸೂರಿನ ಪತ್ರಿಕೋದ್ಯಮ ವಿದ್ಯಾರ್ಥಿ ಶ್ರೀನಿಧಿ ಓಡಿಲ್ನಾಳ ಸಂಪೂರ್ಣ ೧೦ ದಿನಗಳ ಸಂಭ್ರಮವನ್ನು ಸೆರೆಹಿಡಿದು ನಮ್ಮ ವಿಕ್ರಾಂತ ಕರ್ನಾಟಕಕ್ಕೆ ಕಳುಹಿಸಲಿದ್ದಾರೆ. ವರ್ಣ ರಂಜಿತವಾಗಿ ದಸರಾವನ್ನು ವಿಕ್ರಾಂತ ಬಳಗದೊಡನೆ ಆಚರಿಸಿ.

   

ಶ್ರೀನಿಧಿ ಓಡಿಲ್ನಾಳ

haninidhi@yahoo.com

ಮೈಸೂರು ದಸರಾ ಎಂಥವರನ್ನು ಕೂಡ ಮೋಡಿ ಮಾಡುತ್ತದೆ. ದೇಶ-ವಿದೇಶಗಳ ಜನರನ್ನು, ಪ್ರವಾಸಿ ಪ್ರಿಯರನ್ನು ಅಯಸ್ಕಾಂತದಂತೆ ಆಕರ್ಷಿಸಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು ದಸರಾಕ್ಕೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ.

ಇದೇ ಸೆ.೨೩ರಿಂದ ಆರಂಭಗೊಂಡು ಒಂಬತ್ತು ದಿನಗಳ ಈ ಉತ್ಸವಕ್ಕೆ ಎಲ್ಲ ರೀತಿಯಲ್ಲೂ ಸೊಬಗು ಕಳೆಗಟ್ಟುತ್ತಿದೆ. ಈ ಬಾರಿಯ ಉತ್ಸವಕ್ಕೆ ನಾಡಿನ ಹಿರಿಯ ಸಾಹಿತಿ, ಗಾಂಧೀವಾದಿ ಜಿ. ನಾರಾಯಣರವರು ಸೆ.೨೩ರಂದು ಬೆಳಗ್ಗೆ ೮-೧೫ಕ್ಕೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ಮೈಸೂರು ದಸರಾದ ಕೇಂದ್ರ ಬಿಂದು ಜಂಬೂ ಸವಾರಿ. ವಿಜಯ ದಶಮಿ ದಿನದಂದು ನಡೆಯುವ ಜಂಬೂ ಸವಾರಿಗೆ ಅ.೨ರಂದು ಮಧ್ಯಾಹ್ನ ೧.೧೫ಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಅರಮನೆ ಆವರಣದಲ್ಲಿರುವ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. ೭೦೦ ಕೆ.ಜಿ. ಚಿನ್ನದ ಅಂಬಾರಿಯನ್ನು ಹೊತ್ತು ಬಲರಾಮ ಘನಗಾಂಭೀರ್‍ಯದಿಂದ ಹೆಜ್ಜೆ ಹಾಕುವುದನ್ನು ನೋಡಿ ಎಂತವರೂ ನಿಬ್ಬೆರಗಾಗಲೇಬೇಕು. ಬಲರಾಮನ ಹಿಂದೆಯೇ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಬರುವ ಆನೆಗಳ ಸಾಲು, ಪಾರಂಪರಿಕ ಕಾರ್‍ಯಕ್ರಮ ಒಂದೆಡೆಯಾದರೆ, ಇನ್ನೊಂದೆಡೆ ಸ್ತಬ್ಧ ಚಿತ್ರ, ನೃತ್ಯ, ಗಾಯನ, ಕರ್ನಾಟಕದ ನಾನಾ ಪ್ರದೇಶದ ಕಲಾವಿದರ ತಂಡದವರಿಂದ ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ, ದೊಡ್ಡಾಟ, ಕೋಲಾಟ, ವೀರಗಾಸೆ ಹೀಗೆ ವಿಧವಿಧದ ಪ್ರದರ್ಶನ ನಮ್ಮ ಕಣ್ಮನ ಸೆಳೆಯುತ್ತದೆ.

ಈ ಬಾರಿಯ ಉತ್ಸವಕ್ಕೆ ಅರಮನೆ ಆವರಣವು ಸುಮಾರು ೯೬,೦೦೦ ವಿದ್ಯುತ್ ಬಲ್ಬ್‌ಗಳಿಂದ ಅಲಂಕೃತಗೊಂಡು ವಿಶ್ವದ ಗಮನ ಸೆಳೆಯುತ್ತಿದೆ. ೩೬,೦೦೦ ಬಲ್ಬ್‌ಗಳು ಈ ಬಾರಿಯ ದಸರಾಗೆ ಸೇರ್ಪಡೆಯಾಗಿರುದು ವಿಶೇಷವಾಗಿದೆ.

ವಿಶ್ವವಿಖ್ಯಾತ ಗಾಯಕರಿಂದ ಸಂಗೀತ ಕಾರ್‍ಯಕ್ರಮ, ಜಗನ್ಮೋಹನ ಅರಮನೆಯಲ್ಲಿ ಕವಿಗೋಷ್ಠಿ, ಪುರಭವನ, ಕಮಂದಿರ, ವೀಣೆಶೇಷಣ್ಣ ಭವನದಲ್ಲಿ ವಿವಿಧ ಸಾಂಸ್ಕೃತಿಕ ಮನರಂಜನೆ ಕಾರ್‍ಯಕ್ರಮ, ರಂಗಾಯಣದಲ್ಲಿ ನಾಟಕಾಸಕ್ತರಿಗೆ ನವರಂಗೋತ್ಸವ, ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವಕರನ್ನು ಆಕರ್ಷಿಸುವ ಯುವ ದಸರಾ, ಫಲಪುಷ್ಪ ಪ್ರದರ್ಶನ, ಸಾಹಸ ಕ್ರೀಡೋತ್ಸವ, ಚಲನಚಿತ್ರೋತ್ಸವ, ಪುರಭವನ ಆವರಣದಲ್ಲಿ ಆಹಾರ ಮೇಳ, ಕುಪ್ಪಣ್ಣ ಪಾರ್ಕ್‌ನಲ್ಲಿ ಸಾಕು ಪ್ರಾಣಿಗಳ ಪ್ರದರ್ಶನ.

ಚಲನಚಿತ್ರೋತ್ಸವ

ಮೈಸೂರು ದಸರಾ ಹಬ್ಬದಂದು ಮೈಸೂರಿನ ವಿವಿಧ ಚಿತ್ರಮಂದಿರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳೊಳಗೊಂಡಂತೆ ಒಟ್ಟು ೩೮ ಚಿತ್ರ ಪ್ರದರ್ಶಿಸಲಾಗುವುದು. ಚಿತ್ರಪ್ರೇಮಿಗಳನ್ನು ತನ್ನತ್ತ ಕೈ ಬೀಸಿ ಕರೆಯುವ ಈ ಚಲನಚಿತ್ರೋತ್ಸವವನ್ನು ಈ ಬಾರಿ ನಟ ಡಾ.ವಿಷ್ಣುವರ್ಧನ್ ಉದ್ಘಾಟಿಸಲಿದ್ದಾರೆ. ರೀಜೆನ್ಸಿ, ಸ್ಟರ್ಲಿಗ್, ಶ್ರೀ ನಾಗರಾಜ, ರಣಜಿತ್, ತಿಬ್ಬಾದೇವಿ ಮತ್ತು ಬಾಲಭವನ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶಿಸಲಾಗುತ್ತದೆ.

ವಿವಿಧ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪಟ್ಟಿ ಇಂತಿದೆ

ರೀಜೆನ್ಸಿ ಚಿತ್ರಮಂದಿರದಲ್ಲಿ ಸೆ.೨೩ರಂದು ಗಂಡುಗಲಿ ಕುಮಾರರಾಮ, ೨೪ರಂದು ಶಂಕರ್‌ಗುರು, ೨೫ರಂದು ಸಂಸ್ಕಾರ, ೨೬ರಂದು ಬೆಳದಿಂಗಳ ಬಾಲೆ, ೨೭ರಂದು ಶರಪಂಜರ, ೨೮ರಂದು ಹಂಸಗೀತೆ ಚಿತ್ರಗಳು.

ಸ್ಟರ್ಲಿಗ್‌ನಲ್ಲಿ ಚಿತ್ರಮಂದಿರದಲ್ಲಿ ಸೆ.೨೩ರಂದು ಜೋಗಿ, ೨೪ರಂದು ಬಂಗಾರದ ಮನುಷ್ಯ, ೨೫ರಂದು ಪಣಿಯಮ್ಮ, ೨೬ರಂದು ಹಠವಾದಿ, ೨೭ರಂದು ಪರಸಂಗದ ಗೆಂಡೆತಿಮ್ಮ, ೨೮ರಂದು ಅಮೇರಿಕ ಅಮೇರಿಕ ಚಿತ್ರಗಳು.

ರಣಜಿತ್ ಚಿತ್ರಮಂದಿರದಲ್ಲಿ ಸೆ.೨೩ರಂದು ಗಂಧದ ಗುಡಿ, ೨೪ರಂದು ಸೇವಂತಿ ಸೇವಂತಿ, ೨೫ರಂದು ಸಂಸ್ಕಾರ, ೨೬ರಂದು ಹುಲಿಯ, ೨೭ರಂದು ಗೆಜ್ಜೆಪೂಜೆ, ೨೮ರಂದು ಹಸೀನಾ ಚಿತ್ರಗಳು.

ಬಾಲಭವನ್ ಚಿತ್ರಮಂದಿರದಲ್ಲಿ ಸೆ.೨೩ರಂದು, ಬೆಟ್ಟದ ಹೂವು, ಕುಮಾರರಾಮ, ೨೪ರಂದು ಸತ್ಯಹರಿಶ್ಚಂದ್ರ, ೨೫ರಂದು ಚುಕ್ಕಿಚಂದ್ರಮ, ೨೬ರಂದು ಪಂಚಾಕ್ಷರಿ ಗವಾಯಿ, ೨೭ರಂದು ನಮ್ಮ ಮಕ್ಕಳು, ೨೮ರಂದು ಬಿ.ಆರ್.ಅಂಬೇಡ್ಕರ್, ೨೯ರಂದು ಚಿನ್ನಾರಿಮುತ್ತ, ೩೦ರಂದು ವರ್ಷಋತು ಚಿತ್ರಗಳು ಬೆಳ್ಳಿ ಪರದೆ ಮೇಲೆ ಮೂಡಿಬರಲಿದೆ.

ವಸ್ತು ಪ್ರದರ್ಶನ

ಮೈಸೂರು ದಸರಾ ಮಹೋತ್ಸವದ ಅವಿಭಾಜ್ಯ ಅಂಗದಂತಿರುವ ದಸರಾ ವಸ್ತು ಪ್ರದರ್ಶನಕ್ಕೆ ನೂರ ಹದಿನೆಂಟು ವರ್ಷಗಳ ಇತಿಹಾಸವಿದೆ. ಈ ಸಾಲಿನ ದಸರಾ ವಸ್ತು ಪ್ರದರ್ಶನ ದೊಡ್ಡಕೆರೆ ಮೈದಾನದಲ್ಲಿ ಸೆ.೨೩ರಂದು ಮಧ್ಯಾಹ್ನ ೪-೩೦ಕ್ಕೆ ಸಚಿವ ಶ್ರೀ ರಾಮುಲು ಉದ್ಘಾಟಿಸಲಿದ್ದಾರೆ. ಸುಮಾರು ೯೦ ದಿನಗಳ ಕಾಲ ನಡೆಯುವ ಈ ದಸರಾ ವಸ್ತು ಪ್ರದರ್ಶನ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ್ದರಿಂದ ಆಕರ್ಷಕ ರೀತಿಯಲ್ಲಿ ಸಿದ್ಧತೆ ಮಾಡಲಾಗಿದೆ. ಬೇರೆ ಬೇರೆ ಇಲಾಖೆಗಳ ಟ್ಯಾಬ್ಲೋ, ಹೊರ ರಾಜ್ಯದ ಹಲವು ಮಳಿಗೆಗಳು, ಬಣ್ಣ ಬಣ್ಣದ ಮಕ್ಕಳ ಆಟಿಕೆ ವಸ್ತುಗಳು ಸೇರಿದಂತೆ ಹತ್ತು ಹಲವು ಶೈಲಿಯ ಪ್ರದರ್ಶನವನ್ನು ಈ ವರ್ಷದ ದಸರಾ ವಸ್ತು ಪ್ರದರ್ಶನದಲ್ಲಿ ನೋಡಬಹುದಾಗಿದೆ.

ಕವಿಗೋಷ್ಠಿ

ದಸರಾ ಮಹೋತ್ಸವದ ಮತ್ತೊಂದು ಆಕರ್ಷಣೆ ದಸರಾ ಕವಿಗೋಷ್ಠಿ. ಸೆ.೨೮ರಂದು ಸಂಜೆ ೪ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆರಂಭವಾಗುವ ಈ ಕವಿಗೋಷ್ಠಿಯನ್ನು ನಾಡಿನ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಉದ್ಘಾಟಿಸಲಿದ್ದಾರೆ. ಈ ಬಾರಿ ೨೫ ಕವಿಗಳು ತಮ್ಮ ಕವನವನ್ನು ವಾಚಿಸಲಿದ್ದಾರೆ.

ಕ್ರೀಡಾಕೂಟ

ಈ ಬಾರಿಯ ಕ್ರೀಡಾಕೂಟವನ್ನು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಅಶ್ವಿನಿ ನಾಚಪ್ಪ ಅವರು ಸೆ.೨೬ರಂದು ಬೆಳಿಗ್ಗೆ ೧೦ಕ್ಕೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಸೆ. ೨೬ರಿಂದ ೨೮ರವರೆಗೆ ನಡೆಯುವ ಈ ಕ್ರೀಡಾಕೂಟದಲ್ಲಿ ೧೪ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಇದರ ಜೊತೆಗೆ ಪುರುಷ ಮತ್ತು ಮಹಿಳೆಯರ ಅರ್ಧ ಮ್ಯಾರಥಾನ್ ಓಟ, ಸೈಕಲ್ ಸ್ಪರ್ಧೆ, ಕೃತಕ ಗೋಡೆ ಹತ್ತುವ ಸ್ಪರ್ಧೆ, ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆ, ಕರಾಟೆ ಇವೇ ಮುಂತಾದ ಸ್ಪರ್ಧೆಗಳು ನಡೆಯಲಿದೆ.

ನವರಾತ್ರಿ ರಂಗೋತ್ಸವ

ಮೈಸೂರು ದಸರಾ ನಾಟಕಾಸಕ್ತರಿಗಾಗಿ ರಂಗಾಯಣದ ಭೂಮಿಗೀತದಲ್ಲಿ ಒಂಬತ್ತು ದಿನಗಳ ಕಾಲ ಹಲವು ನಾಟಕಗಳನ್ನು ಪ್ರದರ್ಶಿಸುವ ಮೂಲಕ ನವರಾತ್ರಿ ರಂಗೋತ್ಸವಕ್ಕೆ ಮತ್ತೊಂದು ಕಳೆ ತರಲಿದೆ. ಸೆ.೨೩ರಿಂದ ಆರಂಭಗೊಳ್ಳುವ ನಾಟಕ ಅ.೦೧ರವರೆಗೆ ಪ್ರತೀ ದಿನ ೬-೩೦ಕ್ಕೆ ಪ್ರದರ್ಶನಗೊಳ್ಳಲಿದೆ. ಈ ಬಾರಿ ಸೆ.೨೩ರಂದು ಪಿ.ಗಂಗಾಧರ್ ಸ್ವಾಮಿ ನಿರ್ದೇಶನದ ಬೀಚಿ ಬುಲೆಟ್ಸ್ ನಾಟಕ, ೨೪ರಂದು ಪ್ರಶಾಂತ್ ಹೀರೇಮಠ ನಿರ್ದೇಶನದಲ್ಲಿ ಮಹಾಜನ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿರುವ ಬೆರಳು ಹಿಡಿದು ನಡೆಸಿದ ಬೆಳ್ಳಿ ತೆರೆಯ ಗೆಳೆಯ ನಾಟಕ, ೨೫ರಂದು ಸಂತೋಷ್ ಕುಮಾರ್ ಕುಸುನೂರು ನಿರ್ದೇಶನದ ಮಹಾರಾಜ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿರುವ ದಿಂಡಿ ನಾಟಕ, ೨೬ರಂದು ಎಂ.ಸಿ. ಕೃಷ್ಣಪ್ರಸಾದ್ ನಿರ್ದೇಶನದ ಮಹಾರಾಣಿ ಮಹಿಳಾ ಕಲಾ ಕಾಲೇಜು ವಿದ್ಯಾರ್ಥಿನಿವರಿಂದ ಕಥೆಯಾದವರ ಕಥೆ ನಾಟಕ, ೨೭ರಂದು ಹುಲಗಪ್ಪ ಕಟ್ಟೀಮನಿ ನಿರ್ದೇಶನದ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ (ಕಾವಾ) ವಿದ್ಯಾರ್ಥಿಗಳಿಂದ ಮೋಟಿಬಾ ನಾಟಕ, ೨೮ರಂದು ಸರೋಜ ಹೆಗಡೆ ನಿರ್ದೇಶನದ ಜೆ.ಎಸ್.ಎಸ್. ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಂದ ಕಣ್ಣಾ ಮುಚ್ಚೆ ಕಾಡೇಗೂಡೆ ನಾಟಕ, ೨೯ರಂದು ರಂಗಾಯಣ ರಂಗಕಿಶೋರ ತಂಡದವರಿಂದ ಪೋಲೀಕಿಟ್ಟಿ ನಾಟಕ, ೩೦ರಂದು ಕಥೆಗಳ ಕಣಜ ನಾಟಕ ಹಾಗೂ ಅ.೧ರಂದು ರಂಗಾಯಣದ ನಿರ್ದೇಶಕರಾದ ಚಿದಂಬರ್ ರಾವ್ ಜಂಬೆ ನಿರ್ದೇಶನದ ರಂಗಾಯಣ ಕಲಾವಿದರಿಂದ ಅಧೇ ಅಧೂರೆ ನಾಟಕ ಪ್ರದರ್ಶಿಸಲಾಗುತ್ತದೆ. ಈ ನಾಟಕಗಳಿಗೆ ಪ್ರವೇಶ ಪತ್ರದ ಮೂಲಕ ಉಚಿತ ಪ್ರವೇಶವಿರುವುದು ನಾಟಕಾಸ್ತರಿಗೆ ಖುಷಿಯ ಸಂಗತಿಯಾಗಿದೆ. ಅಂದಿನ ನಾಟಕಗಳಿಗೆ ಅಂದೇ ಸಂಜೆ ೫-೩೦ಕ್ಕೆ ಕಚೇರಿಯಲ್ಲಿ ಪ್ರವೇಶ ಪತ್ರ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ವರ್ಷ ವಿಶೇಷವಾಗಿ ದೀಪಗಳ ಪ್ರದರ್ಶನ, ದಸರಾ ಗೊಂಬೆಗಳ ಪ್ರದರ್ಶನ ಮತ್ತು ಕಾವಾ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ಹಾಗೂ ಬಿ.ವಿ.ಕಾರಂತರ ಸಂಗ್ರಹಾಲಯದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ಬಾರಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ೯ ಮಂದಿಯನ್ನು ಸನ್ಮಾನಿಸಲಾಗುವುದು.

ಕುಸ್ತಿ ಪಂದ್ಯಾವಳಿ

ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ದೇವರಾಜ ವಿವಿದ್ದೋಶ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾಟವನ್ನು ಸೆ.೨೩ರಂದು ಮಧ್ಯಾಹ್ನ ೩ ಗಂಟೆಗೆ ಸಚಿವ ಚೆಲುವರಾಯ ಸ್ವಾಮಿ ಉದ್ಘಾಟಿಸಲಿದ್ದಾರೆ. ಈ ಕುಸ್ತಿ ಪಂದ್ಯಾಟವು ಸೆ.೨೯ರವರೆಗೆ ನಡೆಯಲಿದೆ.

ಆಹಾರಮೇಳ

ದಸರಾ ನೋಡಲು ಬರುವ ಜನರಿಗೆ ಎಲ್ಲವೂ ಕಣ್ಮನ ಸೆಳೆಯುವುದರ ಜೊತೆಗೆ ಆಹಾರ ಮೇಳವು ಕೂಡ ಸೆಳೆಯುವುದರಲ್ಲಿ ಸಂದೇಹವಿಲ್ಲ. ವಿವಿಧ ರಾಜ್ಯಗಳ ತಿಂಡಿತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಒಳಗೊಂಡಿದೆ. ಸೆ.೨೩ರಂದು ಆರಂಭಗೊಂಡು ೩೦ರವರೆಗೆ ತಿಂಡಿಗಳ ಚಪ್ಪರಿಸುವ ಭಾಗ್ಯ ದಸರಾ ನೋಡಲು ಬಂದ ಜನರ ಪಾಲಿಗಿದೆ.

ಬೊನ್ಸಾಯ್ ಗಿಡಗಳ ಪ್ರದರ್ಶನ

ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಆವರಣದಲ್ಲಿರುವ ಮೈಸೂರು ವಿ.ವಿ. ಕುಲಪತಿ ಪ್ರೊ. ಶಶಿಧರ ಪ್ರಸಾದ್ ಅವರ ನಿವಾಸದಲ್ಲಿ ಸೆ.೨೨ರಿಂದ ೨೪ರವರೆಗೆ ಬೊನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಕಾರ್‍ಯಾಗಾರ ನಡೆಯಲಿದೆ. ನಗರದ ಸೃಷ್ಟಿ ಬೊನ್ಸಾಯ್ ಸ್ಟಡಿ ಸರ್ಕಲ್ ಈ ಪ್ರದರ್ಶನ ನಡೆಸಿಕೊಡಲಿದೆ. ಇದಲ್ಲದೆ ಈ ಸಂದರ್ಭದಲ್ಲಿ ಬೊನ್ಸಾಯ್ ಗಿಡಗಳ ಬೆಳೆಸುವ ಬಗೆ ಕುರಿತು ಉಪನ್ಯಾಸ ಕೂಡ ಏರ್ಪಡಿಸಲಾಗಿದೆ.

ಫಲಪುಷ್ಪ ಪ್ರದರ್ಶನ

ಸೆ.೨೩ರಿಂದ ಅ.೩ರವರೆಗೆ ದಸರಾ ಪ್ರಯುಕ್ತ ಫಲಪುಷ್ಪ ಪ್ರದರ್ಶನ ಕರ್ಜನ್ ಪಾರ್ಕ್‌ನಲ್ಲಿ ನಡೆಯಲಿದೆ. ಈ ವರ್ಷ ಕ್ರಾಫರ್ಡ್ ಭವನ, ಕುಲಪತಿಗಳ ನಿವಾಸ, ವಿ.ವಿ.ಅಧಿಕಾರಿಗಳ ವಸತಿ ಗೃಹ, ಶೈಕ್ಷಣಿಕ ಸಿಬ್ಬಂದಿ ಕಾಲೇಜು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹೀಗೆ ನಾನಾ ವಿಭಾಗಗಳ ಮುಂದೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಫಲಪುಷ್ಪ ಪ್ರದರ್ಶನದ ಸೆ.೨೪ರಂದು ವಿ.ವಿ.ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್ ಉದ್ಘಾಟಿಸಲಿದ್ದಾರೆ.

ಯೋಗ ನಡಿಗೆ

ದಸರಾ ಪ್ರವಾಸೋದ್ಯಮ ಸಮಿತಿಯು ಈ ಬಾರಿ ಮೈಸೂರನ್ನು ಅಂತಾರಾಷ್ಟ್ರೀಯ ಯೋಗ ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಯೋಗ ನಡಿಗೆ ಕಾರ್‍ಯಕ್ರಮ ಹಮ್ಮಿಕೊಂಡಿದೆ. ಈ ಯೋಗ ನಡಿಗೆ ಸೆ.೯೦ರಂದು ಸಂಜೆ ೪ಕ್ಕೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಉದ್ಘಾಟಿಸಲಾಗುವುದು. ಒಂದು ಸಾವಿರ ಮಂದಿ ಯೋಗ ಪಟುಗಳು ಮತ್ತು ಯೋಗಾಸಕ್ತರು ಈ ಕಾರ್‍ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅರಮನೆ ಆವರಣದಿಂದ ಆರಂಭಗೊಳ್ಳುವ ಈ ನಡಿಗೆ ಸಯ್ಯಾಜಿರಾವ್ ರಸ್ತೆ, ಇರ್‍ವಿನ್ ರಸ್ತೆ, ಅಶೋಕ ರಸ್ತೆಯ ಮೂಲಕ ಅರಮನೆ ತಲುಪಲಿದೆ.

ಚಿಣ್ಣರ ದಸರಾ, ಗಾಳಿಪಟ ಉತ್ಸವ

ಈ ವರ್ಷದಿಂದ ಚಿಣ್ಣರಿಗಾಗಿ ಚಿಣ್ಣರ ದಸರಾ ಕಾರ್‍ಯಕ್ರಮ ನಡೆಯಲಿದೆ. ಈ ಮೂಲಕ ದಸರಾದಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಲು ಅವಕಾಶ ಸಿಕ್ಕಿದ್ದಂತಾಗಿದೆ. ಸೆ.೨೭ರಿಂದ ೨೯ರವರೆಗೆ ಬೆಳಗ್ಗೆ ೯ ರಿಂದ ಸಂಜೆ ೪ರವರೆಗೆ ಕಲಾಮಂದಿರದಲ್ಲಿ ಚಿಣ್ಣರ ದಸರಾ ಆಯೋಜಿಸಲಾಗಿದೆ.

ಈ ವರ್ಷದ ಆಕರ್ಷಣೆಯಲ್ಲಿ ಇನ್ನೊಂದು ಹೊಸ ಸೇರ್ಪಡೆ ಗಾಳಿಪಟ ಉತ್ಸವ. ಇದು ಸೆ.೨೯ರಂದು ಅರಮನೆ ಮುಂಭಾಗದಲ್ಲಿರುವ ದೊಡ್ಡಕೆರೆ ಮೈದಾನದಲ್ಲಿ ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ.

`ಹೋಮ್‌ಸ್ಟೇ ವ್ಯವಸ್ಥೆ

ಈ ಬಾರಿಯ ದಸರಾ ನೋಡಲು ಬರುವ ಪ್ರವಾಸಿಗರಿಗೆ ಹೋಮ್‌ಸ್ಟೇ ಎಂಬ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಈ ಹೊಸ ಯೋಜನೆಗೆ ಮೂವತ್ತು ಮನೆಗಳು ಆರಂಭಿಸಲು ಅರ್ಜಿಯನ್ನು ಈಗಾಗಲೇ ಸಲ್ಲಿಸಿದೆ. ಈ ಹೊಸ ಯೋಜನೆಯ ವಿಶೇಷತೆ ಏನೆಂದರೆ, ಮನೆಮಂದಿಯೇ ಪ್ರವಾಸಿ ಗೈಡ್‌ಗಳಾಗಿ ಕಾರ್‍ಯ ನಿರ್ವಹಣೆ ಮಾಡಲಿದ್ದಾರೆ. ಅಲ್ಲದೆ, ಕೆಲ ಮನೆಗಳಲ್ಲಿ ಪ್ರವಾಸಿಗರಿಗೆ ತಿರುಗಲು ಕಾರಿನ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಇವಿಷ್ಟೇ ಅಲ್ಲದೆ, ಅವಿಭಕ್ತ ಕುಟುಂಬದ ಪರಿಚಯ ಹಾಗೂ ಇಲ್ಲಿನ ಸಂಸ್ಕೃತಿ, ಪರಂಪರೆ, ಊಟೋಪಚಾರವನ್ನು ಪರಿಚಯಿಸುವುದು ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.

೨೪ ಗಂಟೆಗಳ ಮಾಹಿತಿ ವ್ಯವಸ್ಥೆ

ಈ ಸಂದರ್ಭದಲ್ಲಿ ಪ್ರವಾಸಿಗರಿಗಾಗಿ ೨೪ ಗಂಟೆಗಳ ಕಾಲ ಮಾಹಿತಿ ನೀಡಲು ಕೇಂದ್ರವನ್ನು ಸ್ಥಾಪಿಸಲಾಗಿದೆ. ಹೊಟೇಲ್, ವಾಣಿಜ್ಯ ಸಂಸ್ಥೆ, ದಸರಾ ಕಾರ್‍ಯಕ್ರಮದ ಬಗ್ಗೆ ಮಾಹಿತಿ, ಸಾರಿಗೆ, ಆಸ್ಪತ್ರೆ, ವಸತಿ ಬಗೆಗೆ ಪ್ರವಾಸಿಗರು ಮಾಹಿತಿ ಪಡೆಯಲು ಇಂಟ್ರ್ಯಾಕ್ವೀವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ ಎಂಬ ಹೊಸ ವ್ಯವಸ್ಥೆ ಮಾಡಿದೆ. ಅಲ್ಲದೆ, ಪ್ರವಾಸಿಗರು ಮಾಹಿತಿ ಕೇಂದ್ರಕ್ಕೆ ಕರೆ ಮಾಡಿಯೂ ಮಾಹಿತಿ ಪಡೆಯಬಹುದು. ಸ್ಥಳಿಯ ಕರೆಗೆ ದೂರವಾಣಿ ಸಂಖ್ಯೆ: ೩೨೦೩೮೮೮, ೩೨೦೫೮೮೮, ೨೪೧೮೮೮೮ ಹೊರಗಿನಿಂದ ಕರೆ ಮಾಡುವವರು ೦೮೨೧ ಕೋಡ್ ಸೇರಿಸಿ ಮಾಹಿತಿ ಪಡೆಯಬಹುದಾಗಿದೆ.

ಅಲ್ಲದೆ, ದೇಶ-ವಿದೇಶಿ ಜನರಿಗೆ ಮಾಹಿತಿ ಪಡೆಯಲು ವೆಬ್‌ಸೈಟ್ ಆರಂಭಿಸಿದೆ. ಇಲ್ಲಿಯೂ ಕೂಡ ದಸರಾ ಬಗೆಗೆ ಮಾಹಿತಿ ಲಭ್ಯವಿದೆ.

www.mysoredasara.com

www.karnatakatourism.com

www.mysoredasara.info

ಪಂಜಿನ ಕವಾಯಿತು

ದಸರಾದ ಮತ್ತೊಂದು ಆಕರ್ಷಣೆ ಪಂಜಿನ ಕವಾಯಿತು. ಬನ್ನಿಮಂಟಪದಲ್ಲಿ ನಡೆಯುವ ಈ ಪಂಜಿನ ಕವಾಯಿತಿನಲ್ಲಿ ರಾಜ್ಯಪಾಲ ಟಿ.ಎನ್.ಚತುರ್ವೇದಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಅನಂತರ ನಾನಾ ಸಾಹಸೋತ್ಸವ, ಅತ್ಯಂತ ಆಕರ್ಷಕ ಬಿರುಸು ಬಾಣ ಪ್ರದರ್ಶನ ನಡೆಯುವುದರೊಂದಿಗೆ ಈ ವರ್ಷದ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಒಟ್ಟಿನಲ್ಲಿ ಈ ಬಾರಿಯ ದಸರಾ ಮಹೋತ್ಸವಕ್ಕೆ ೨.೨೫ ಕೋಟಿ ರೂಪಾಯಿ ಅಂದಾಜು ವೆಚ್ಚ ಮಾಡಲಾಗುತ್ತಿದೆ. ಕಳೆದ ವರ್ಷ ಈ ಉತ್ಸವದಲ್ಲಿ ೧.೮೬ ಕೋಟಿ ರೂ ವೆಚ್ಚಮಾಡಲಾಗಿತ್ತು. ಈ ವರ್ಷದ ದಸರಾ ಉತ್ಸವಕ್ಕೆ ಒಂದು ಸಾವಿರ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಲಾಗಿದ್ದು ಈಗಾಗಲೇ ೮೦೦ ಗೋಲ್ಡ್ ಕಾರ್ಡ್ ಮಾರಾಟವಾಗಿದೆ. ಒಂದು ಗೋಲ್ಟ್ ಕಾರ್ಡ್ ಬೆಲೆ ೫೦೦ ರೂ ಆಗಿದ್ದು, ಸಾವಿರ ಗೋಲ್ಡ್ ಕಾರ್ಡ್‌ನಿಂದ ೫೦ಲಕ್ಷ ರೂ, ಸಂಗ್ರಹವಾಗಲಿದೆ. ಅಲ್ಲದೆ ಪಾಸ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಮೈಸೂರು ದಸರಾ ನಾಡಹಬ್ಬಕ್ಕೆ ಈ ಬಾರಿ ದೇಶ-ವಿದೇಶಗಳಿಂದ ಸರಿ ಸುಮಾರು ೧೦ಲಕ್ಷ ಮಂದಿ ಪ್ರವಾಸಿಗರು ಬರಬಹುದೆಂದು ಅಂದಾಜಿಸಲಾಗಿದೆ. ದಸರಾ ಪ್ರಯುಕ್ತ ಮೈಸೂರಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಹಾಗೂ ಎಲ್ಲೆಡೆ ಗೌಪ್ಯ ಕ್ಯಾಮರಾವನ್ನು ಕೂಡ ಅಳವಡಿಸಿದೆ. ದಸರಾ ಆಕರ್ಷಣೆಯಾಗಿ ಈ ಬಾರಿ ಒಂದು ಸಾವಿರ ಪೊಲೀಸರಿಂದ ವಾದ್ಯ ಸಂಗಿತ ಕಾರ್‍ಯಕ್ರಮ ಕೂಡ ನಡೆಯಲಿದೆ. ಅರಮನೆ ಆವರಣದಲ್ಲಿ ಸೆ.೨೬ರಂದು ಸಂಜೆ ೭-೩೦ರಿಂದ ೯-೩೦ರವರೆಗೆ ಏಕ ಕಾಲದಲ್ಲಿ ಪೊಲೀಸರು ಈ ವಾದ್ಯಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ. ಈ ಬಾರಿಯ ದಸರಾ ಜಂಬೂ ಸವಾರಿಯನ್ನು ಜನರು ವೀಕ್ಷಿಸಲು ಬೆಂಗಳೂರು ದೂರದರ್ಶನ ಅಲ್ಲದೆ, ಹಲವಾರು ಖಾಸಗಿ ಟಿ.ವಿ. ಚಾನೆಲ್‌ಗಳು ನೇರ ಪ್ರಸಾರ ಮಾಡಲಿದೆ. ಇದೇ ಪ್ರಪ್ರಥಮ ಬಾರಿಗೆ ಇಂಟರ್‌ನೆಟ್‌ನಲ್ಲಿಯೂ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಇವಿಷ್ಟೇ ಅಲ್ಲದೆ, ನಾಡಹಬ್ಬಕ್ಕೆ ಬರುವ ಪ್ರವಾಸಿಗರಿಗಾಗಿ ವಿಶೇಷ ಬಸ್ ವ್ಯವಸ್ಥೆ, ಮತ್ತು ನೈರುತ್ಯ ರೈಲ್ವೆ ಸೆ.೨೫ರಿಂದ ಅ.೫ರವರೆಗೆ ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ರೈಲು ಸೇವೆಯನ್ನು ಕೂಡ ಕಲ್ಪಿಸಿದೆ. ಮೈಸೂರು ಮಹಾರಾಜರು ದರ್ಬಾರು ನಡೆಸುತ್ತಿದ್ದ ಸಿಂಹಾಸನವನ್ನು ಸೆ.೧೫ರಿಂದ ಅ.೧೫ರವರೆಗೆ ಒಂದು ತಿಂಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ.

ಇಷ್ಟೆಲ್ಲಾ ಸಡಗರಗಳನ್ನು ಮೈಗೂಡಿಸಿಕೊಂಡು ದಸರ ಮತ್ತೊಮ್ಮೆ ನಿಮ್ಮ ಭಕ್ತಿಗೆ, ಮನರಂಜನೆಗೆ ಸಿದ್ಧವಾಗಿದೆ. ಮೈಸೂರು ದಸರಾ ಎಷ್ಟೊಂದು ಸುಂದರ! ಎಂಬ ಉದ್ಗಾರ ಹೊರಡಿಸಲೆಂದಾದರೂ ನೀವು ಮೈಸೂರಿಗೆ ಒಮ್ಮೆ ಭೇಟಿ ಕೊಡುವುದು ಅವಶ್ಯ.

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com