|
ಲೋಕಕಲ್ಯಾಣಾರ್ಥ ವಿರಾಟ್ ಮೂರ್ತಿಗೆ ಮಹಾಮಜ್ಜನ
ಶತಮಾನದ ಮೊದಲ ಮಹಾಮಜ್ಜನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ
ಸಜ್ಜು
* ಹರೀಶ್ ಕೆ.ಆದೂರು
ಬಾಹುಬಲಿ
ಸ್ವಾಮಿಯ ಶಿಲಾಮೂರ್ತಿ ಮೋಕ್ಷದ ಮೊದಲ ಮೆಟ್ಟಲುಗಳಾದ ತ್ಯಾಗ,
ಆತ್ಮ, ಸಂಯಮ ಮತ್ತು ಅಹಂಕಾರ ನಿಗ್ರಹಗಳ ಪ್ರತೀಕ.
ಬಾಹುಬಲಿ ದಿಗಂಬರ ರೂಪವು ದೈವತ್ವದ ಕಡೆಗೆ ಆಧ್ಯಾತ್ಮವು
ಸಾಗುವುದನ್ನು ಅಡ್ಡಿಪಡಿಸುವ ಐಹಿಕ ಕಾಮನೆ ಮತ್ತು ಆಸೆಗಳ
ಮೇಲಿನ ಪೂರ್ಣ ವಿಜಯದ ಪ್ರತೀಕವೂ ಹೌದು.
ಇಂತಹ ತ್ಯಾಗಮೂರ್ತಿ ಬಾಹುಬಲಿಗೆ ಮಹಾಮಜ್ಜನದ ಸಂಭ್ರಮ.
ವಿಶ್ವಶಾಂತಿ, ವಿಶ್ವಭ್ರಾತೃತ್ವ ಮತ್ತು ಸೌಹಾರ್ಧತೆಗಳ
ಮೂಲೋದ್ದೇಶದಿಂದ ಜ.೨೮ರಿಂದ ಒಂದು ವಾರಗಳ ಕಾಲ
ಧರ್ಮಸ್ಥಳದ ಪುಣ್ಯನೆಲದಲ್ಲಿ ಸಾಗರೋಪಾದಿಯ ಭಕ್ತರ
ಸಮ್ಮುಖದಲ್ಲಿ ಸಕಲ ವೈದಿಕ ವಿಧಿ, ವಿಧಾನಗಳೊಂದಿಗೆ ಈ
ಪುಣ್ಯಕಾರ್ಯ ಸಂಪನ್ನಗೊಳ್ಳಲಿದೆ. ಇದಕ್ಕಾಗಿ ಶ್ರೀಕ್ಷೇತ್ರದಲ್ಲಿ
ಭರದ ಸಿದ್ದತೆಗಳು ನೆಲೆಗೊಳ್ಳುತ್ತಿವೆ. ಸಹಸ್ರಾರು ಮಂದಿ ಅಹರ್ನಿಶಿ
ಕಾರ್ಯೋನ್ಮುಖರಾಗಿದ್ದಾರೆ. ತನ್ಮೂಲಕ ವಿರಾಟ್ ಮೂರ್ತಿಗೆ ಮೂರನೆಯ
ಮಹಾಮಜ್ಜನಕ್ಕೆ ಸಕಲ ಸಿದ್ದತೆಗಳು ಆರಂಭಗೊಂಡಂತಾಗಿದೆ.
ಸುಂದರ ವಾತಾವರಣ. ರತ್ನಗಿರಿ ಬೆಟ್ಟವೇರುವಾಗೆಲ್ಲ ಪ್ರಕೃತಿ ಐಸಿರಿ.
ಬೃಹತ್ ಹೆಮ್ಮರಗಳು... ಮರದ ಕೊಂಬೆಯಿಂದ ಕೊಂಬೆಗೆ ಹಾರುಗ
ಕಪಿಸೈನ್ಯ.. ಪ್ರವಾಸಿಗರ ಆಕರ್ಷಣೆಗೆ ಕಾರಣ. ಮೆಟ್ಟಲೇರಿ ಬೆಟ್ಟದ
ತುದಿ ತಲುಪಲೂ ವ್ಯವಸ್ಥೆ. ಕಷ್ಟವಾದಲ್ಲಿ ವಾಹನದಲ್ಲೂ ಅಲ್ಲಿಗೆ
ತೆರಳಬಹುದು. ನೆರಳಿಗಾಗಿ ತಂಪೀಯುವ ಮರ.. ಅಲ್ಲೆಲ್ಲಾ
ಹಕ್ಕಿಗಳ ಇಂಚರ ನಿನಾದ. ಇದೆಲ್ಲ ನೋಡುತ್ತಾ ನೋಡುತ್ತಾ ಹೋದಂತೆ
ವಿರಾಟ್ ಮೂರ್ತಿ ಬಾಹುಬಲಿಯ ನಯನ ಮನೋಹರ ಮೂರ್ತಿ
ಸ್ಥೈರ್ಯ, ಜ್ಞಾನ, ಸಂತೃಪ್ತಿ, ತ್ಯಾಗ, ವೈರಾಗ್ಯ, ಶಾಂತಿಯ
ಸಂಕೇತಗಳನ್ನು ಸಾರುತ್ತಾ ನಿಂತಿರುವುದು ಗೋಚರವಾಗುತ್ತದೆ.
ಪುರಾಣಗಳಿಗೆ ಸರಿಯಾಗಿ ಸುಂದರ ಬೃಹತ್ ಮೂರ್ತಿ ನೆಲೆಗೊಂಡಿದೆ.
ಕ್ವಾರ್ಟ್ಜ್ ಖನಿಜಗಳ ಪಟ್ಟಿ ಮಿಶ್ರಗೊಂಡಿರುವ ಸೀಣಿ ಜಾತಿಯ ಗಡಸು
ಕಲ್ಲಿನಲ್ಲಿ ಈ ಮೂರ್ತಿ ನಿರ್ಮಾಣಗೊಂಡಿದೆ.
ರಾಜಲಕ್ಷಣಗಳಿಂದೊಡಗೂಡಿದ ಈ ಮೂರ್ತಿ ನಯನಮನೋಹರವಾಗಿದೆ.
ಅರೆತೆರೆದ ಧ್ಯಾನ ಮುದ್ರೆಯ ಕಣ್ಣುಗಳು, ಗುಂಗುರು ಕೂದಲು,
ದೀರ್ಘವಾದ ಕರ್ಣ, ವಿಶಾಲ ಬಾಹು, ತೋಳುಗಳಲ್ಲಿ ಮಾಧವೀಲತೆ,
ಪ್ರಬಲ ಕಟಿ, ಈ ಶಿಲ್ಪದಲ್ಲಿ ಕಾಣಬಹುದಾಗಿದೆ.
ಕಾರ್ಕಳದ ಮಂಗಲಪಾದೆಯಲ್ಲಿ ವಾಯುವ್ಯ ಆಗ್ನೇಯ ದಿಕ್ಕಿಗೆ
ಚಾಚಿಕೊಂಡಿದ್ದ ಬೃಹತ್ ಬಂಡೆಯನ್ನು ಧರ್ಮಸ್ಥಳದ ವಿರಾಟ್ ಬಾಹುಬಲಿ
ಮೂರ್ತಿ ರಚನೆಗಾಗಿ ಆಯ್ಕೆಮಾಡಲಾಯಿತು.
ದೈವಾನುಗ್ರಹ, ಗುರುಹಿರಿಯರ ಆಶಯ, ಸಂಕಲ್ಪ ಶಕ್ತಿ,
ದೃಢವಿಶ್ವಾಸಗಳೊಂದಿಗೆ ಶಿಲ್ಪಿ ರೆಂಜಾಳ ಗೋಪಾಲ ಶೆಣೈಯವರು
ತಮ್ಮ ಪುತ್ರ ಮಂಜುನಾಥ ಶೆಣೈ, ಮೊಮ್ಮಗ ರಾಧಾ ಮಾಧವ
ಶೆಣೈ ಸಹಿತ ತಮಿಳು ನಾಡಿನ ೪೦ ಶಿಲ್ಪಿಗಳೊಂದಿಗೆ ಈ ಕಾರ್ಯವನ್ನು
ಐದೂವರೆ ವರ್ಷಗಳಲ್ಲಿ ಪೂರ್ಣಗೊಳಿಸಿದರು.
ಅಕ್ಟೋಬರ್ ೧೨, ೧೯೬೭ರ ವಿಜಯದಶಮಿಯಂದು ಮೂರ್ತಿ ನಿರ್ಮಾಣದ
ಕೆಲಸ ಆರಂಭಗೊಂಡು ೧೯೭೩ರ ಫೆಬ್ರವರಿಯಲ್ಲಿ ಶ್ರೀಕ್ಷೇತ್ರಕ್ಕೆ
ಕೊಂಡೊಯ್ಯಲು ಸಿದ್ಧವಾಯಿತು.
ಬೃಹತ್ ಸಂಖ್ಯೆಯ ಶಿಲ್ಪಿಗಳು ಇದೊಂದು ವೃತವೆಂದು ನಂಬಿ
ಶಿಲ್ಪರಚನೆಗೆ ಕೈಗೊಂಡರು. ಶಿಲ್ಪರಚನೆಯ ಆದಿಯಿಂದ ಕೊನೆಯ
ತನಕವೂ ಶಿಲ್ಪಿಗಳ ಮೈಯಿಂದ ತೊಟ್ಟು ರಕ್ತವೂ ಜಿನುಗದೆ ಮೂರ್ತಿ
ನಿರ್ಮಾಣ ಕಾರ್ಯ ಕೈಗೂಡಿರುವುದು ದೈವೀ ಶಕ್ತಿಯ
ಅನುಗ್ರಹವೆಂದೇ ನಂಬಲಾಯಿತು.
ಏಲಾಚಾರ್ಯ ಸಿದ್ಧಾಂತ ಚಕ್ರವರ್ತಿ ವಿದ್ಯಾನಂದ ಮುನಿ ಮಹಾರಾಜ
ಮತ್ತು ಆಚಾರ್ಯರತ್ನ ಶ್ರೀ ವಿಮಲ ಸಾಗರಜೀ ಮುನಿಶ್ರೀ
ಮಾರ್ಗದರ್ಶನದಲ್ಲಿ ೧೯೮೨ನೇ ಫೆಬ್ರವರಿಯಲ್ಲಿ ಶಾಸ್ತ್ರೋಕ್ತವಾದ
ಪ್ರತಿಷ್ಠಾ ಮಸ್ತಕಾಭಿಷೇಕ ನಡೆಯಿತು. ದ್ವಿತೀಯ ಮಹಾಮಜ್ಜನ
೧೯೯೫ರಲ್ಲಿ ನಡೆಯಿತು. ಇದೀಗ ಮೂರನೆಯ ಮಹಾಮಜ್ಜನ
ಶುಭಸಂದರ್ಭ ಈ ಶತಮಾನದಲ್ಲಿ ನಮಗೆಲ್ಲರಿಗೂ ನೋಡುವ
ಭಾಗ್ಯ ಪ್ರಾಪ್ತವಾಗಿದೆ.
ಇನ್ನಷ್ಟು
ಇನ್ನೂ ಕೊಲ್ಲುವ
ಕನಸಿನಲ್ಲೇ ಇರುವ ಕೋಲಿ!
ಭಾರತಿ ನಗರದಲ್ಲಿ ಭುಗಿಲೆದ್ದ ಕೋಮು ಗಲಭೆ
ಬೆಂಗಳೂರು ನವ
ಭಾರತದ ಪ್ರತೀಕ
ಮುಲಾಯಂಗೆ `ಕೈ'ಕೊಟ್ಟ
ಕಾಂಗ್ರೆಸ್
ಎಎಕ್ಸ್ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
|