ಉಪಮುಖ್ಯಮಂತ್ರಿ ಮೇಲೆ ಬಿಜೆಪಿ ವರಿಷ್ಠರ ಕೆಂಗಣ್ಣು
ಬೆಂಗಳೂರು : ರಾಜ್ಯ
ರಾಜಕಾರಣದಲ್ಲಾಗುತ್ತಿರುವ ಕೆಲವು ಬೆಳವಣಿಗೆಗಳ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ
ಭಾರತೀಯ ಜನತಾ ಪಕ್ಷದ ವರಿಷ್ಠರು ತಮ್ಮ ಪಕ್ಷದ ಉಪಮುಖ್ಯಮಂತ್ರಿ ಬಿ. ಎಸ್.
ಯಡಿಯೂರಪ್ಪ ಅವರ ನೇತೃತ್ವದ ಮಂತ್ರಿ ಮಂಡಲದ ಮೇಲೆ ಕೆಂಗಣ್ಣು ಬೀರಿದ್ದಾರೆ.
ಕೆಂಗಣ್ಣು ಬೀರಲು ಪ್ರಮುಖ
ಕಾರಣವೆಂದರೆ, ಯಡಿಯೂರಪ್ಪ ಅವರ ಪಡೆ ಪಕ್ಷದ ಕಾರ್ಯಕ್ರಮಗಳನ್ನು
ತಮ್ಮ ಇತಿ-ಮಿತಿಯಲ್ಲಿ ಜಾರಿಗೊಳಿಸಲು ವಿಫಲರಾಗಿದ್ದಾರಲ್ಲದೇ, ಆಡಳಿತ ಯಂತ್ರದ ಮೇಲೂ
ನಿಯಂತ್ರಣ ಸಾಧಿಸಲಾಗಿಲ್ಲ ಎನ್ನುವ ಪಕ್ಷದ `ಕೆಲಕಾರ್ಯಕರ್ತರ' ದೂರು ಕೊನೆಗೂ ವರಿಷ್ಠರ
ಕಿವಿ ತಲುಪಿದೆ.
ಈ ನಿಟ್ಟಿನಲ್ಲಿ ಸಧ್ಯದಲ್ಲೇ
ಯಡಿಯೂರಪ್ಪ ನೇತೃತ್ವದ ಪಡೆಗೆ ಆಡಳಿತ ಯಂತ್ರದ ಮೇಲೆ ಯಾವ ರೀತಿಯಲ್ಲಿ
ನಿಯಂತ್ರಣ ಸಾಧಿಸಬೇಕು ಹಾಗೂ ಪಕ್ಷದ ಮತ್ತು ಕಾರ್ಯಕರ್ತರ `ಆಕಾಂಕ್ಷೆ'ಗಳನ್ನು
ಕಾನೂನಿನ ಪರಿಧಿಯಲ್ಲೇ ಹೇಗೆ ಸಂಭಾಳಿಸಬೇಕೆನ್ನುವುದರ ಬಗ್ಗೆ ಎರಡು ದಿನಗಳ
ಕಾಲ ಯಡಿಯೂರಪ್ಪ ಅವರ ಪಡೆಗೆ ತರಬೇತಿ ನೀಡಲು, ಪಕ್ಷದ ಹಿರಿಯ ಮತ್ಸದ್ಧಿ
ರಾಜಕಾರಣಿಗಳಾದ ವೆಂಕಯ್ಯ ನಾಯ್ಡು, ಅರುಣ್ ಜೆಟ್ಲಿ, ಅರುಣ್ ಶೌರಿ, ಸೇರಿದಂತೆ ಹಲವಾರು
ಹಿರಿಯ ತಲೆಗಳನ್ನು ಕಳುಹಿಸಿಕೊಡಲು ವರಿಷ್ಠರು ನಿರ್ಧರಿಸಿದ್ದಾರೆಂದು ಪಕ್ಷದ
ಮೂಲಗಳು ತಿಳಿಸಿವೆ.
``ಇತ್ತೀಚಿನ
ರಾಜಕೀಯ ಬೆಳವಣಿಗೆಗಳು ಪಕ್ಷದ ಹಿತ ಹಾಗೂ ಪಕ್ಷದ ಏಳಿಗೆಗೆ ಮಾರಕವಾಗಲಿವೆ
ಅಲ್ಲದೇ ಕಳೆದೈದು ತಿಂಗಳಿಂದ ಆಡಳಿತ ಯಂತ್ರದ ಮೇಲೆ ನಿಯಂತ್ರಣ ಸಾಧಿಸಲಾಗದಿದ್ದರೆ
ಸಚಿವರಾಗಿ ಪ್ರಯೋಜನವೇನು? ಎಂದು ದೆಹಲಿಯಲ್ಲಿ ಪಕ್ಷದ ವರಿಷ್ಠರು
ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲೇ ಎರಡು ದಿನದ ಕಾರ್ಯಾಗಾರ ತರಾತುರಿಯಲ್ಲಿ
ಆಗಸ್ಟ್ ೫-೬ರಂದು ನಗರದಲ್ಲಿ ನಿರ್ಧರಿಸಲಾಗಿದೆ'' ಎಂದು ಪಕ್ಷದ ಮೂಲಗಳು ತಿಳಿಸಿವೆ.
`ಪಕ್ಷದ ಕೆಲ
ಕಾರ್ಯಕರ್ತರು' ಮೇಲಿಂದ ಮೇಲೆ ಯಡಿಯೂರಪ್ಪ ಅವರ ಪಡೆಯ ಮೇಲೆ ನಡೆಸುವ
ಮೂರನೆಯ ದೂರು ಇದಾಗಿದೆ. ಇದರಿಂದ ಕಳೆದೆರಡು ಬಾರಿಯೂ ಯಡಿಯೂರಪ್ಪ
ಅವರು ತಮ್ಮ ಸ್ವವರ್ಚಸ್ಸಿನಿಂದ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟು ಬಚಾವ್
ಆಗಿದ್ದರು. ಆದರೆ ಈ ಬಾರಿ ಹೇಗೆ ಬಚಾವ್ ಆಗುತ್ತಾರೆನ್ನುವುದು ಕಾದು ನೋಡಬೇಕಿದೆ.