|
ಜಾನಪದ ತಜ್ಞ ಕರೀಂಖಾನ್ ಇನ್ನಿಲ್ಲ
ಬೆಂಗಳೂರು :
ಜಾನಪದ ಗಾರುಡಿಗ ಡಾ. ಎಸ್. ಕೆ. ಕರೀಂಖಾನ್ ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ
ಶನಿವಾರ ಬೆಳಗ್ಗೆ ೧೧. ೩೦ಕ್ಕೆ ನಿಧನರಾದರು.
ಅನಾರೋಗ್ಯದಿಂದಾಗಿ
ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೀಂ ಖಾನ್ಗೆ ೯೫ ವರ್ಷ
ವಯಸ್ಸಾಗಿತ್ತು. ಕರೀಂಖಾನ್ ಅವರ ಪಾರ್ಥಿವ ಶರೀರವನ್ನು ಅಲಸೂರಿನ ಅವರ ನಿವಾಸಕ್ಕೆ
ಕೊಂಡೊಯ್ಯುವ ನಿರೀಕ್ಷೆ ಇದೆ. ಶನಿವಾರ ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದೆ.
ಕರೀಂಖಾನ್ ಬಗ್ಗೆ : 
ಹಾಸನದ ಸಕಲೇಶಪುರದಲ್ಲಿ
ಜನಿಸಿದ ಕರೀಂಖಾನ್ ಓದಿದ್ದು ಕೇವಲ
೫ನೇ ತರಗತಿಯವರೆಗೆ. ಅವರ ಒಲವಿದ್ದುದು ಜನಪದ ಅಧ್ಯಯನದಲ್ಲಿ. ಅದೇ
ವೇಳೆಗೆ ಗುರು ಆಚಂಗಿ ನಾರಾಯಣ ಶಾಸ್ತ್ರಿಯವರಿಂದ ಜನಪದದ ಕುರಿತು ಮಾರ್ಗದರ್ಶನವೂ
ಲಭಿಸಿತು. ಭಗವದ್ಗೀತೆ,
ಭಾಗವತವನ್ನು ಸುಲಲಿತವಾಗಿ ಹಾಡುತ್ತಿದ್ದ ಕರೀಂಖಾನ್ ರಚಿಸಿದ ನಟವರ ಗಂಗಾಧರ
ಎಂಬ ಚಿತ್ರಗೀತೆ ಪ್ರಸಿದ್ಧಿ ಹೊಂದಿತ್ತು. ಹಾಡುಗಾರಿಕೆಯನ್ನೇ ಜೀವನವನ್ನಾಗಿ ಆರಿಸಿಕೊಂಡಿದ್ದ
ಕರೀಂಖಾನ್ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಬೆಂಗಳೂರಿನ ನಂದಿಬೆಟ್ಟದಲ್ಲಿ
ಗಾಂಧೀಜಿಯವರ ದರ್ಶನ ಪಡೆಯುವ ಅವಕಾಶವೂ ಕರೀಂಖಾನ್ಗೆ ಲಭಿಸಿತ್ತು.
ಸಾಹಿತ್ಯ ಚಳವಳಿ,
ಅಲೆದಾಟ, ಜೈಲು ಶಿಕ್ಷೆ ಜಾನಪದದ ಅಧ್ಯಯನ... ಹೀಗೆ ಕರೀಂಖಾನ್ರ ಬದುಕು ವಿಭಿನ್ನ ರೀತಿಯದಾಗಿತ್ತು.
ಮದುವೆ ಸಂಸಾರ ಎಂಬುದು ಅವರ ಜೀವನದಲ್ಲಿ ನುಸುಳಲಿಲ್ಲ.
ಗಿರಿಜನ ಸಂಸ್ಕೃತಿಯ
ಅಧ್ಯಯನವನ್ನು ಆರಂಭಿಸಿ, ನಾಟಕ ರಚನೆ, ಗೀತ ಸಾಹಿತ್ಯ ರಚನೆಗಳಲ್ಲಿ
ತೊಡಗಿಸಿಕೊಂಡಿದ್ದ ಕರೀಂಖಾನ್ ಅವರಿಗೆ ಒಂದು ಸ್ವಂತ ಸೂರು ಇರಲಿಲ್ಲ. ಎಸ್ಸೆಂ ಕೃಷ್ಣ ಸರಕಾರವಿದ್ದಾಗ ಅವರಿಗೆ ಸೂರು ನೀಡುವ ಭರವಸೆ ಹಾಗೂ ಆ ನಿಟ್ಟಿನಲ್ಲಿ ಸಾಕಷ್ಟು
ಮಾತುಕತೆಗಳಾದವು. ಆದರೆ ಸೂರು ಮಾತ್ರ ಅವರಿಗೆ ದಕ್ಕಲಿಲ್ಲ. ಕರೀಂಖಾನ್
ಆರೋಗ್ಯ ಏರುಪೇರಾದಾಗಲೆಲ್ಲ ಅವರಿಗೆ ಮನೆ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು
ಮಾತುಕತೆಗಳು ಕೇಳಿಬರುತ್ತಿದ್ದವು. ಆದರೆ ಅವು ಕಾರ್ಯರೂಪಕ್ಕೆ ಬರಲೇ ಇಲ್ಲ.
ಸಂತಾಪ : ಎಸ್ಕೆ ಕರೀಂಖಾನ್ ನಿಧನಕ್ಕೆ
ಜಾನಪದ ತಜ್ಞ ಡಾ. ಕೆ. ಚಿನ್ನಪ್ಪ ಗೌಡ ಸಂತಾಪ ವ್ಯಕ್ತಪಡಿಸಿದ್ದು, ಅವರ ನಿಧನದಿಂದ
ಜನಪದ ಲೋಕ ನಿಜ ಅರ್ಥದಲ್ಲಿ ಬಡವಾಗಿದೆ ಎಂದು ಹೇಳಿದ್ದಾರೆ. ಜಾನಪದವನ್ನೇ ಜೀವನವನ್ನಾಗಿ
ಸ್ವೀಕರಿಸಿದ್ದ ಕರೀಂಖಾನ್ಗೆ ಒಂದು ಸ್ವಂತ ಸೂರನ್ನು ನೀಡದೇ ಇರುವ ಸರಕಾರವನ್ನು
ಅವರು ಖಂಡಿಸಿದ್ದಾರೆ. ಇದು ಸರಕಾರದ ಸಾಂಸ್ಕೃತಿಕ ನೀತಿಯಲ್ಲಿರುವ ದೋಷವನ್ನು ಬಿಂಬಿಸುತ್ತದೆ
ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
|