ಸ್ವಲ್ಪ ಬಾಯಿಮುಚ್ಚಿಕೊಂಡಿರ್ತೀರಾ
ದೇವೇಗೌಡ್ರೇ ?
ಬಿಜೆಪಿಯ ಪ್ರಹ್ಲಾದ್
ಜೋಶಿ ಸಲಹೆ
ಬೆಂಗಳೂರು :
ಬಿಜೆಪಿಯ ಯಾವ ಗುಂಪೂ ಸಮ್ಮಿಶ್ರ ಸರಕಾರದ ವಿರುದ್ಧ ಕೆಲಸ ಮಾಡುತ್ತಿಲ್ಲ. ಸಮ್ಮಿಶ್ರ
ಸರಕಾರ ೪೦ ತಿಂಗಳ ಕಾಲ ಆಡಳಿತ ನಡೆಸುವುದರಲ್ಲಿ ಸಂಶಯವಿಲ್ಲ ಎಂದು ಬಿಜೆಪಿಯ ವಕ್ತಾರ
ಪ್ರಹ್ಲಾದ್ ಜೋಶಿ ಗುರುವಾರ ಹೇಳಿದ್ದಾರೆ.
ಜೆಡಿಎಸ್ ಒಡೆಯಲು ಮತ್ತು
ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿಯ ಗುಂಪು ಪ್ರಯತ್ನಿಸುತ್ತಿದೆ ಎನ್ನುವುದರಲ್ಲಿ
ಸತ್ಯವಿಲ್ಲ. ದೇವೇಗೌಡರು ವಿಶ್ರಾಂತಿ ತೆಗೆದುಕೊಂಡು ಸುಮ್ಮನಿದ್ದರೆ ರಾಜ್ಯದ ಅಭಿವೃದ್ಧಿ
ಕಾರ್ಯಗಳು ನಿರಾತಂಕವಾಗಿ ನಡೆಯುತ್ತದೆ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಗೌಡರು ಸುಮ್ಮನಿರಬೇಕು.
ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ. ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಕುಮಾರಸ್ವಾಮಿ ನೇತೃತ್ವದ
ಸಂಯುಕ್ತ ಸರಕಾರ ಒಳ್ಳೇ ಕೆಲಸಗಳನ್ನು ಮಾಡುತ್ತಿದೆ. ಇವುಗಳ ನಡುವೆ
ದೇವೇಗೌಡರು ತಪ್ಪು ಅಭಿಪ್ರಾಯಗಳನ್ನು ಹುಟ್ಟಿಸುವಂತಹ ಹೇಳಿಕೆಗಳನ್ನು
ಕೊಡಬಾರದು ಎಂದು ಜೋಶಿ ಹೇಳಿದ್ದಾರೆ.
೨೪ ಪಕ್ಷಗಳ ಬೆಂಬಲದೊಂದಿಗೆ
ಐದು ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿದ ಅನುಭವ ಬಿಜೆಪಿಗೆ ಇದೆ.
ದೇವೇಗೌಡರು ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಿ ಸುಮ್ಮನೆ ಇದ್ದರೆ ಅದರಿಂದ
ತುಂಬಾ ಉಪಕಾರವಾಗುತ್ತದೆ ಎನ್ನುವ ಮೂಲಕ ಜೋಶಿ ನೇರವಾಗಿಯೇ ಗೌಡರಿಗೆ ಬಾಯಿ ಮುಚ್ಚುವಂತೆ
ಸಲಹೆ ಮಾಡಿದ್ದಾರೆ.