|
ಗಣಿರಾಜಕೀಯಕ್ಕೆ ಮಾಜಿ ಪ್ರಧಾನಿ
ದೇವೇಗೌಡ ಪ್ರವೇಶ
ಪ್ರತಿ ಪಕ್ಷಗಳಿಗೆ
ಗೌಡರ ಎಚ್ಚರಿಕೆ
ಬೆಂಗಳೂರು :
ಗಣಿಲಂಚ ಹಗರಣದಿಂದ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ ದಿನದಿಂದಲೂ ಮೌನವ್ರತ
ಪಾಲಿಸಿಕೊಂಡು ಬಂದಿದ್ದ ಜಾತ್ಯಾತೀತ ಜನತಾದಳದ ವರಿಷ್ಠ ನಾಯಕ ಮಾಜಿ ಪ್ರಧಾನಿ
ಎಚ್.ಡಿ.ದೇವೇಗೌಡ ತಮ್ಮ ಮಗನ ಬೆಂಬಲಕ್ಕೆ ಟೊಂಕ ಕಟ್ಟಿ ನಿಲ್ಲು ಮುಂದಾಗಿದ್ದಾರೆ.
`ಕೆಲವು ದಿನಗಳಿಂದ
ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಮೇಲೆ ಬಂದಿರುವ ಆರೋಪಗಳ
ಸತ್ಯಾಸತ್ಯತೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಮುಂಬರುವ ಆಗಸ್ಟ್ ತಿಂಗಳಿಂದ
ರಾಜ್ಯದಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರಿಗೆ ಮುಂಬರುವ ಅನಿರೀಕ್ಷಿತ ದಿನಗಳಿಗಾಗಿ
ಸಿದ್ಧರಾಗಿರುವಂತೆ ತಯಾರುಗೊಳಿಸುವುದೇ ನನ್ನ ಮುಂದಿರುವ ಕೆಲಸ' ಎಂದು
ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಪತ್ರವೊಂದರಲ್ಲಿ ತಿಳಿಸಿದ್ದಾರೆ.
`ಬಳ್ಳಾರಿಯಲ್ಲಿ
ಅಕ್ರಮ ಗಣಿಗಾರಿಕೆಯ ಒಡೆತನದ ಸಲುವಾಗಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು
ತಮ್ಮತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಕದಡಿದ ನೀರಿನಲ್ಲಿ ಮೀನು
ಹಿಡಿಯಲು ಹವಣಿಸುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ
ಅವರು ಹರಿಹಾಯ್ದಿದ್ದಾರೆ.
ಇತ್ತೀಚಿನ ರಾಜಕೀಯ
ಬೆಳವಣಿಗೆಗಳು ನನ್ನ ಪಕ್ಷವನ್ನು ಅತಂತ್ರಗೊಳಿಸಲು ಮಾಡಿರುವ ಕೆಲ ಪಕ್ಷಗಳ ಹುನ್ನಾರವೆಂದು
ತಿಳಿಯದಷ್ಟು ಮೂರ್ಖ ನಾನಲ್ಲ ಎಂದು ಸರ್ಕಾರದ ಪಾಲುದಾರ ಪಕ್ಷದ ಮೇಲೂ ಪರೋಕ್ಷವಾಗಿ
ಕೆಂಡಕಾರಿದ್ದಾರೆ.
ಇಂತಹ ಸನ್ನಿವೇಶದಲ್ಲಿ
ತಮಗೂ ಹಾಗೂ ತಮ್ಮ ಪಕ್ಷಕ್ಕೂ ಮಾಡು ಇಲ್ಲವೇ ಮಡಿ ಎಂಬಂತಹ ಸನ್ನಿವೇಶ
ಎದುರಾಗಿದೆ. ಕಳೆದ ೫೦ ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಕಹಿ ಸನ್ನಿವೇಶಗಳನ್ನು
ನುಂಗಿಕೊಂಡೇ ಬಂದವರಾಗಿರುವುದರಿಂದ ತಾವು ತಮ್ಮ ಹೆಗಲ ಮೇಲಿನ ಶಲ್ಯವನ್ನು
ಕೊಡವಿಕೊಂಡೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿಕೆ ನೀಡುವ ಮೂಲಕ
ರಾಜಕೀಯದಲ್ಲಿ ಬದಲಾವಣೆಗಳಾಗುವ ಬಗ್ಗೆ ಸ್ಪಷ್ಟ ಮುನ್ಸೂಚನೆಯನ್ನು ಗೌಡರು ನೀಡಿದ್ದಾರೆ.
`ನನ್ನ ಪಕ್ಷ
ಯಾವತ್ತಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯ ಹಾಗೂ ಅನಿವಾರ್ಯ ಎಂಬುದನ್ನು
ಸಾಬೀತು ಪಡಿಸುವುದೇ ನನ್ನ ರಾಜಕೀಯ ಜೀವನದ ಅಂತಿಮ ಹೋರಾಟದ ಮುಖ್ಯ ಮಜಲಾಗಿದೆ'
ಎಂದು ತಮ್ಮ ಹೇಳಿಕೆಯಲ್ಲಿ ಪ್ರತಿಪಕ್ಷದವರಿಗೆ ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ. |