ಕೊನೆಗೂ
ಬಚಾವಾದ ಪ್ರಿನ್ಸ್!
ಸತತ ೫೦ ಗಂಟೆಗಳ ಕಾಲ ಕೊಳವೆ ಬಾವಿಯೊಳಗೆ ಜೀವನ್ಮರಣದ ಹೋರಾಟ.
ಶಹಾಬಾದ್ (ಹರಿಯಾಣ)
: ೬೦ ಅಡಿ ಆಳದ ಕೊಳವೆ ಬಾವಿಗೆ ಅಕಸ್ಮಾತಾಗಿ ಬಿದ್ದು ಅದರೊಳಗೆ ೫೦ ಗಂಟೆಗಳ ಕಾಲ
ಏಕಾಂಗಿಯಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹರಿಯಾಣದ ಐದು ವರ್ಷದ ಬಾಲಕ
ಪ್ರಿನ್ಸ್ನನ್ನು ಸೇನೆಯವರು ಸುರಕ್ಷಿತವಾಗಿ ಮೇಲೆತ್ತುವುದರೊಂದಿಗೆ ಕಳೆದೆರಡು
ದಿನಗಳಲ್ಲಿ ಉದ್ಭವಿಸಿದ್ದ ಆತಂಕ ನಿವಾರಣೆಯಾಯಿತು.
ಹರಿಯಾಣದ
ಕುರುಕ್ಷೇತ್ರದಲ್ಲಿರುವ ತನ್ನ ಮನೆಯ ಸಮೀಪ ಇತರ ಬಾಲಕರ ಜೊತೆ
ಆಟವಾಡುತ್ತಿದ್ದಾಗ ಪ್ರಿನ್ಸ್ ಕಾಲು ಜಾರಿ ಕೊಳವೆ ಬಾವಿಯೊಳಗೆ ಬಿದ್ದಿದ್ದ. ಕೊಳವೆ ಬಾವಿಯ
ಅಗಲ ಕೇವಲ ಒಂದೂವರೆ ಅಡಿ ಇದ್ದುದರಿಂದ ತಕ್ಷಣಕ್ಕೆ ಅವನನ್ನು ಮೇಲೆತ್ತಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ೪೯ ಗಂಟೆಗಳ ಕಾಲ ಏಕಾಂಗಿಯಾಗಿ ಅಲ್ಲೇ ಇರಬೇಕಾದ ಅನಿವಾರ್ಯತೆ ಬಾಲಕನದಾಗಿತ್ತು.
ಬಾಲಕನ ಸ್ಥಿತಿಯನ್ನು
ಟೀವಿಗಳಲ್ಲಿ ನೋಡಿದ ರಾಷ್ಟ್ರದ ಜನತೆ ಅವನು ಸುರಕ್ಷಿತವಾಗಿ ಮೇಲೆ ಬರಲು
ಕಳೆದೆರಡು ದಿನಗಳಿಂದ ಪ್ರಾರ್ಥಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಪ್ರಿನ್ಸ್ನನ್ನು ಸುರಕ್ಷಿತವಾಗಿ
ಮೇಲೆತ್ತುವ ಜವಾಬ್ದಾರಿಯನ್ನು ವಹಿಸಿಕೊಂಡ ಸೇನಾದಳ, ಕೊಳವೆ ಬಾವಿಯ ಪಕ್ಕದಲ್ಲಿಯೇ
ಇನ್ನೊಂದು ಹೊಂಡ ತೋಡಿ, ಅದರೊಳಗೆ ಏಳು ಅಡಿಯ ಸುರಂಗ ಮಾರ್ಗ ನಿರ್ಮಾಣ ಮಾಡಿ,
ಬಾಲಕನನ್ನು ಸುರಕ್ಷಿತವಾಗಿ ಹೊರತರಲು ಯಶಸ್ವಿಯಾದರಲ್ಲದೇ ಇಡೀ ರಾಷ್ಟ್ರದ ಜನತೆಯ
ಪ್ರಶಂಸೆಗೆ ಪಾತ್ರರಾದರು.
ಈ ಮೊದಲು ಕೊಳವೆ
ಬಾವಿಯೊಳಗೆ ಸಿಕ್ಕಿಹಾಕಿಕೊಂಡು ಅಸಹಾಯಕತೆಯಿಂದ ಅಳುತ್ತಿದ್ದ ಅವನಿಗೆ ಆಮ್ಲಜನಕವನ್ನು
ಪೂರೈಸುವುದರ ಜೊತೆಗೆ ಆಗಾಗ ತಿಂಡಿ-ತಿನಿಸುಗಳನ್ನು ಕಳಿಸಿ, ಸಮಾಧಾನ ಪಡಿಸುತ್ತಿದ್ದ
ದೃಶ್ಯ ಮನಕಲುಕುವಂತಿತ್ತು.
ಜನತೆಗೆ
ಕೃತಜ್ಞತೆ :
ನನ್ನ ಮಗ ಸುರಕ್ಷಿತವಾಗಿ
ಮೇಲೆ ಬರುವಂತಾಗಲು ಕಳೆದೆರಡು ದಿನಗಳಿಂದ ಪ್ರಾರ್ಥಿಸುತ್ತಿದ್ದ ರಾಷ್ಟ್ರದ ಜನತೆಗೆ
ನಾನು ಕೃತಜ್ಞಳಾಗಿದ್ದೇನೆ ಎಂದು ಪ್ರಿನ್ಸ್ನ ತಾಯಿ ಕರಂಜಿತ್ ಹೇಳಿದ್ದಾರೆ.