ಗಣಿ ವಿವಾದ: ನ್ಯಾಯಾಂಗ ತನಿಖೆಗೆ ತೀರ್ಮಾನ
ಬೆಂಗಳೂರು :
ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೆಬ್ಬಿಸಿರುವ ಗಣಿ ಲಂಚ ಪ್ರಕರಣದ ಬಗ್ಗೆ ಸಮಗ್ರ
ತನಿಖೆ ನಡೆಸುವುದಕ್ಕೆ ತೀರ್ಮಾನಿಸಿ, ರಾಜ್ಯ ಸಚಿವ ಸಂಪುಟ ಸಭೆ ನ್ಯಾಯಾಂಗ ತನಿಖೆ
ನಡೆಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಗಣಿಗಾರಿಕೆ
ಆರಂಭವಾದ ದಿನದಿಂದ ಹಿಡಿದು, ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರ ಮೇಲೆ
ಭಾರತೀಯ ಜನತಾ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ಜನಾರ್ಧನ ರೆಡ್ಡಿ ಅವರು ಮಾಡಿರುವ
ಆರೋಪಗಳ ವರಗಿನ ಎಲ್ಲಾ ವಿದ್ಯಮಾನಗಳೂ ಸಹ ನ್ಯಾಯಾಂಗ ತನಿಖೆಯ ವ್ಯಾಪ್ತಿಗೆ
ಒಳಪಡಲಿದೆ.
ನ್ಯಾಯಾಂಗ ತನಿಖೆಯು
ಅಮೂಲಾಗ್ರ ಸ್ವಜನ ಪಕ್ಷಪಾತ, ಲಂಚ ಹಾಗೂ ಭ್ರಷ್ಟಾಚಾರ ಕುರಿತು ಹೆಚ್ಚಿನ ಒತ್ತು ನೀಡಲಿದೆ.
ಇದಲ್ಲದೇ ಬೇರೆ ಎಲ್ಲಾ ವಿಷಯಗಳ ಬಗ್ಗೆ ತನಿಖೆ ನಡೆಸುವುದರ ಬಗ್ಗೆ ಹಾಗೂ ನ್ಯಾಯಾಂಗ
ತನಿಖೆಯ ವ್ಯಾಪ್ತಿಯ ಬಗ್ಗೆ ಸರ್ಕಾರ ಸಧ್ಯದಲ್ಲೇ ತೀರ್ಮಾನ ಕೈಗೊಳ್ಳಲಿದೆ.
ಬಳ್ಳಾರಿ ಗಣಿ ಮಾಲೀಕರಿಂದ
ಮುಖ್ಯಮಂತ್ರಿ ಕುಮಾರ ಸ್ವಾಮಿ ಅರಣ್ಯ ಸಚಿವ ಚೆನ್ನಿಗಪ್ಪ ಹಾಗೂ ಗೃಹ ಸಚಿವ ಎಂ.ಪಿ.ಪ್ರಕಾಶ್
ಅವರು ೧೫೦ ಕೋಟಿ ರೂ.ಗಳಷ್ಟು ಲಂಚ ಸಂಗ್ರಹಿಸಿದ್ದಾರೆನ್ನುವ ರೆಡ್ಡಿಯವರು ಮಾಡಿದ
ಆರೋಪದ ಹಿನ್ನೆಲೆಯಲ್ಲಿ ವಿಧಾನ ಮಂಡಲದಲ್ಲಿ ೧೫ ದಿನಗಳಿಗಿಂತಲೂ ಹೆಚ್ಚಿನ ದಿನ
ಉಭಯ ಸದನಗಳಲ್ಲೂ ಚರ್ಚೆ ನಡೆಸಿದ ನಂತರ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ
ಕುಮಾರ ಸ್ವಾಮಿ ಭರವಸೆ ನೀಡಿದ್ದರು.
ರೆಡ್ಡಿ ಮಾಡಿರುವ
ಆರೋಪದಿಂದಾಗಿ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೆಬ್ಬಿಸಿರುವ ಹಿನ್ನೆಲೆಯಲ್ಲಿ
ಜ್ಯಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷದವರು ಸಂಪುಟ ಸಭೆಗೂ ಮುನ್ನ
ಸಮನ್ವಯ ಸಮಿತಿಯ ಸಭೆ ನಡೆಸಿ ನ್ಯಾಯಾಂಗ ತನಿಖೆಗೆ ಒಮ್ಮತದ ಒಪ್ಪಿಗೆ ನೀಡಿತ್ತು.
ಇದಕ್ಕೂ ಮುನ್ನ, ಸರ್ಕಾರದ
ಪಾಲುದಾರ ಪಕ್ಷಗಳು ಸಹ ಪ್ರತ್ಯೇಕವಾಗಿ ಶಾಸಕಾಂಗ ಸಭೆ ನಡೆಸಿ `ಅಕ್ರಮ
ಗಣಿಗಾರಿಕೆ' ಬಗ್ಗೆ ತನಿಖೆ ನಡೆಸುವುದೇ ಸೂಕ್ತ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿತ್ತು.