ವಿಧಾನ ಸಭೆಯಲ್ಲಿ
ಮಾತುಕತೆ, ಲೇವಡಿಗಳು
ಸಿದ್ದರಾಮಯ್ಯ
ಅವರ ಪತ್ರ ಸದನದಲ್ಲಿ ಬಹಿರಂಗ
ಬೆಂಗಳೂರು: ಭಾರತೀಯ
ಜನತಾ ಪಕ್ಷದ ವಿಧಾನ ಪರಿಷತ್ ಸದಸ್ಯ ಜನಾರ್ಧನ ರೆಡ್ಡಿ ಅವರು ಮಾಡಿದ್ದ `ಮುಖ್ಯಮಂತ್ರಿ
ಗಣಿ-ಲಂಚ ಪ್ರಕರಣದ' ಮೇಲಿನ ಚರ್ಚೆಗೆ ಉತ್ತರಿಸುವಾಗ ಮುಖ್ಯಮಂತ್ರಿ
ಎಚ್.ಡಿ.ಕುಮಾರ ಸ್ವಾಮಿ ಅವರು ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ಗಣಿ ಉದ್ಯಮಕ್ಕೆ ಸಂಬಂಧಿಸಿದಂತಹ ತಮಗೆ ಬೇಕಾದವರೊಬ್ಬರಿಗೆ ಅನುಕೂಲ ಮಾಡಿಕೊಡುವಂತೆ
ಬರೆದಿದ್ದಾರೆನ್ನಲಾದ ಪತ್ರವೊಂದನ್ನು ವಿಧಾನ ಸಭೆಯಲ್ಲಿ ಪ್ರದರ್ಶಿಸಿದ ಸಂದರ್ಭದಲ್ಲಿ
ಪ್ರತಿ ಪಕ್ಷದ ಸದಸ್ಯರು ಹಾಗೂ ಆಡಳಿತ ಪಕ್ಷದ ಮಧ್ಯೆ ತೀವ್ರ ವಾಗ್ವಾದಕ್ಕೆ ಎಡೆ ಮಾಡಿತು.
ಸಿದ್ದರಾಮಯ್ಯ
ಅವರು ಬರೆದಿದ್ದರೆನ್ನಲಾದ ಪತ್ರವನ್ನು ತೋರಿಸಿದ ಮುಖ್ಯಮಂತ್ರಿ ಅವರು
`ಸಿದ್ದರಾಮಯ್ಯ ಅವರು ನಮ್ಮ ನಾಯಕರಾಗಿದ್ದವರು. ಈಗ ನಮ್ಮಿಂದ ಬೇರೆಯಾಗಿ
ಕಾಂಗ್ರೆಸ್ಗೆ ಹೋಗುವವರಿದ್ದಾರೆ. ಕಾಂಗ್ರೆಸ್ನವರಾದರೂ ಅವರನ್ನು ಮುಖ್ಯಮಂತ್ರಿಯನ್ನಾಗಿಸಲಿ
ಸಂತೋಷ' ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯನವರಂತೆಯೇ,
ಕಾಂಗ್ರೆಸ್ ಪಕ್ಷದ ನಾಯಕರಾದ ಹಾಗೂ ಮಾಜಿ ಸಚಿವರುಗಳಾದ ಎಚ್.ಡಿ.ರೇವಣ್ಣ, ಕೆ.ಎನ್.ಗಡ್ಡಿ
ಹಾಗೂ ಅಲ್ಲಂ ವೀರಭದ್ರಪ್ಪ ಅವರು ಸಹ ಮೈಸೂರು ಮಿನರಲ್ಸ್ ಸಂಸ್ಥೆಗೆ
ತಮ್ಮ-ತಮ್ಮ ಕಡೆಯವರ `ಗಣಿ ಉದ್ಯಮಕ್ಕೆ' ಸಂಬಂಧಿಸಿದಂತೆ ಅನುವು ಮಾಡಿಕೊಡುವಂತೆ
ಕೋರಿ ಪತ್ರಗಳನ್ನು ಬರೆದಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಈ ಹಂತದಲ್ಲಿ
ಕೆರಳಿದ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಸದಸ್ಯರು ಹಾಗೂ
ಆಡಳಿತ ಪಕ್ಷದ ಸದಸ್ಯರ ಮಧ್ಯೆ ತೀವ್ರ ವಾಗ್ವಾದ ನಡೆದು ಸದನದಲ್ಲಿ ಗೊಂದಲ ವಾತಾವರಣ
ನಿರ್ಮಾಣವಾಗಿತ್ತು.
ಗೊಂದಲದ ನಡುವೆಯೇ
ಕುಮಾರ ಸ್ವಾಮಿ ತಮ್ಮ ಉತ್ತರವನ್ನು ಮುಂದುವರೆಸಿ, ಕಾಂಗ್ರೆಸ್ ಪಕ್ಷದ ಮಾಜಿ ಸಚಿವ
ವಿ.ಕೃಷ್ಣಪ್ಪ ಅವರ ಮೇಲೆ ಪರೋಕ್ಷವಾಗಿ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ
ಕೆಲವು ಪುರಸಭೆಗಳ ಮೇಲಿನ ಲೋಕಾಯುಕ್ತ ದಾಳಿಗಳ ಬಗ್ಗೆ ಪ್ರಸ್ತಾಪಿಸಿದಾಗ
ಕೃಷ್ಣಪ್ಪ ಕೆರಳಿ ಕೆಂಡವಾದರು.
"ಈ ಅಕ್ರಮಗಳಲ್ಲಿ
ನಾನ್ಯಾವತ್ತೂ ಭಾಗಿಯಾಗಿಲ್ಲ, ಇಲ್ಲಸಲ್ಲದ್ದನ್ನು ಹೇಳಿ ಸದನದ ದಾರಿ ತಪ್ಪಿಸುವುದು ಸರಿಯಲ್ಲ"
ಎಂದು ಕೃಷ್ಣಪ್ಪ ಅವರು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರನ್ನು ತರಾಟೆಗೆ
ತೆಗೆದುಕೊಂಡರು.
ಈ ಹಂತದಲ್ಲಿ
ಕುಮಾರ ಸ್ವಾಮಿ ಅವರ ರಕ್ಷಣೆಗೆ ಅವರ ಅಣ್ಣ ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರು
ಧಾವಿಸಿ, "ರೀ ನಿಮ್ಮ ಮೇಲೆ ಆರೋಪ ಬಂದಾಗ ತಾಕತ್ತಿದ್ದರೆ ರಾಜೀನಾಮೆ
ಕೊಡಬೇಕಿತ್ತು, ಅದು ಬಿಟ್ಟು ಇಲ್ಲಿ ಬಂದು ಹೇಳಿಕೆ ಕೊಟ್ಟರೇನು ಪ್ರಯೋಜನ" ಎಂದು
ಟೀಕಿಸಿದರು.
ಇದೇ ರೀತಿ ರೇವಣ್ಣ
ಅವರೂ ಡಿ.ಕೆ.ಶಿವಕುಮಾರ್ ಬಗ್ಗೆಯೂ ತನಿಖೆಯಾಗಲಿ ಎಂದಾಗ, ಶಿವಕುಮಾರ್ ಅವರು
"ನಾನು ಗಣಿಗಾರಿಕೆ ಮಾಡುತ್ತಿರುವುದು ಕಾನೂನು ರೀತ್ಯಾ ಮಾಡ್ತಾ ಇದ್ದೇನೆ ಯಾರಿಗೂ
ಹೆದರಬೇಕಾಗಿಲ್ಲ" ಎಂದು ರೇವಣ್ಣ ಅವರಿಗೆ ಎದಿರೇಟು ನೀಡಿದರು.