ಗಂಡು ಪೂಜಾರಿ ಹೆಣ್ಣುದೇವತೆಯನ್ನು
ಮುಟ್ಟಬಹುದೇ ?
ಶಬರಿಮಲೆ ಪ್ರಕರಣಕ್ಕೆ
ವಿಚಾರವಾದಿಗಳ ವಿರೋಧ
ಬೆಂಗಳೂರು :
ಇತ್ತೀಚೆಗೆ ಖ್ಯಾತ ನಟಿ ಜಯಮಾಲಾ ಅವರು ಕೇರಳದ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ
ನೀಡಿ, ದೇವರ ವಿಗ್ರಹದ ಪಾದಸ್ಪರ್ಶ ಮಾಡಿರುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ,
ಕೇರಳ ರಾಜ್ಯ ಪೊಲೀಸರು ಜಯಮಾಲಾ ಅವರ ವಿಚಾರಣೆ ನಡೆಸಲು ಆಗಮಿಸಿರುವುದನ್ನು
ರಾಜ್ಯದ ಪ್ರಗತಿಪರ ಚಿಂತಕರು ತೀವ್ರವಾಗಿ ಖಂಡಿಸಿದ್ದಾರೆ.
ನಗರದ ಭಾರತಯಾತ್ರಾ
ಕೇಂದ್ರ ಆಯೋಜಿಸಿದ್ದ "ದೇವಾಲಯ ಪ್ರವೇಶ ಹಾಗೂ ಮಹಿಳೆಯ ಹಕ್ಕುಗಳು"
ಕುರಿತ ವಿಚಾರ ಸಂಕಿರಣವೊಂದರಲ್ಲಿ ಪಾಲ್ಗೊಂಡ ಹಿರಿಯ ಚಿಂತಕ ಡಾ|| ವಿಜಯ ಅವರು ವಿಚಾರವಾದಿಯೆನಿಸಿಕೊಂಡಿರುವ
ಕಮ್ಯುನಿಸ್ಟ್ ಸರ್ಕಾರವಿರುವ ಹಾಗೂ ದೇಶದಲ್ಲೇ ಅತಿ ಹೆಚ್ಚಿನ ಅಕ್ಷರಸ್ಥರಿಂದ ಕೂಡಿದ
ರಾಜ್ಯದಲ್ಲಿ ಇಂಥ ಪ್ರಮಾದವೊಂದನ್ನೆಸಗಬಾರದಿತ್ತು ಎಂದು ಟೀಕಿಸಿದ್ದಾರೆ.
"ಯಾವುದೇ
ಕಾರಣಕ್ಕೂ ಜಯಮಾಲಾ ಅವರು ಕೇರಳ ಸರ್ಕಾರದ ಕ್ಷಮೆಯಾಚನೆಯ ಮನವಿಯನ್ನು
ಪುರಸ್ಕರಿಸಬಾರದು. ಬದಲಾಗಿ ಇಂತಹ ಮನವಿಯ ವಿರುದ್ಧ ರಾಜ್ಯದ ಜನತೆ ತೀವ್ರವಾಗಿ ಪ್ರತಿಭಟಿಸಬೇಕು"
ಎಂದು ಅವರು ಆಗ್ರಹ ಪಡಿಸಿದರು.
ಇದೇ ಸಂದರ್ಭದಲ್ಲಿ
ಮಾತನಾಡಿದ ಹಿರಿಯ ಸಾಹಿತಿ ಹಾಗೂ ನಾಟಕಕಾರ ಡಾ||ಎಚ್.ಎಸ್.ಶಿವಪ್ರಕಾಶ್ ಅವರು ಹೆಣ್ಣು
ದೇವತೆಗಳನ್ನು ಗಂಡು ಪೂಜಾರಿಗಳು ಸ್ಪರ್ಶಿಸಿ ಪೂಜೆ ಮಾಡುವಾಗ ಗಣನೆಗೆ ಬರದ ಸಂಪ್ರದಾಯಗಳು
ಹೆಣ್ಣು ಮಕ್ಕಳು ಕೇವಲ ದೇವರ ಪಾದಸ್ಪರ್ಶ ಮಾಡುವಾಗ ಹೇಗೆ ಅಡ್ಡ ಬರುತ್ತದೆ
?, ಇದೇ ಕಾರಣಕ್ಕಾಗಿ ಗಂಡು ಪೂಜಾರಿಗಳು ಮಹಿಳೆಯರನ್ನು ಕ್ಷಮೆ ಕೋರುವಂತೆ ಮಾಡುವುದು
ತಪ್ಪಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.
ತಾಂತ್ರಿಕವಾಗಿ ಮಹಿಳೆ
ಬಹಳಷ್ಟು ಪ್ರಗತಿ ಸಾಧಿಸಿದ್ದರೂ ಕೂಡಾ ಧಾರ್ಮಿಕ ಹಕ್ಕಿನಿಂದ ಇನ್ನೂ ವಂಚಿತಳಾಗಿದ್ದಾಳೆ
ಎಂದು ಅವರು ಅಭಿಪ್ರಾಯಪಟ್ಟರು.