ತುಳುರಾಜ್ಯ ಬೇಡಿಕೆಗೆ
ಚಿದಾನಂದ ಮೂರ್ತಿ ವಿರೋಧ
`ಕರಾವಳಿ ಜಿಲ್ಲೆಗಳು
ಉಪೇಕ್ಷಿಸಲ್ಪಟ್ಟಿಲ್ಲ'
ಬೆಂಗಳೂರು :
ಪ್ರತ್ಯೇಕ ತುಳುನಾಡು ರಚಿಸುವ ಕರಾವಳಿ ಜನತೆಯ ಬಹುದಿನಗಳ ಬೇಡಿಕೆಯನ್ನು
ಸಂಶೋಧಕ ಡಾ. ಚಿದಾನಂದಮೂರ್ತಿ ವಿರೋಧಿಸಿದ್ದಾರೆ.

ರಾಜ್ಯದಲ್ಲಿ ದಕ್ಷಿಣ ಕನ್ನಡ
ಮತ್ತು ಉಡುಪಿ ಜಿಲ್ಲೆಗಳು ಉಪೇಕ್ಷಿಸಲ್ಪಟ್ಟಿಲ್ಲ. ಹಾಗಿದ್ದರೂ ಪ್ರತ್ಯೇಕ ತುಳುನಾಡನ್ನು
ನಿರ್ಮಿಸಬೇಕು ಎಂಬ ಆಗ್ರಹ ಕರಾವಳಿ ಜನತೆಯಲ್ಲಿ ಯಾಕಿದೆ ಎಂಬುದು ಗೊತ್ತಾಗುತ್ತಿಲ್ಲ
ಎಂದು ಚಿದಾನಂದ ಮೂರ್ತಿ ಹೇಳಿದ್ದಾರೆ.
ಕಾಸರಗೋಡು
ದಕ್ಷಿಣಕನ್ನಡಕ್ಕೆ ಸೇರಿದಲ್ಲಿ, ಕಾಸರಗೋಡನ್ನೂ ಸೇರಿಸಿದಂತೆ ಉಡುಪಿ ಮತ್ತು ದಕ್ಷಿಣಕನ್ನಡ
ಜಿಲ್ಲೆಗಳನ್ನು ಒಳಗೊಂಡಂತೆ ತುಳುನಾಡಿನ ರಚನೆಯಾಗಬೇಕು ಎಂದು ಇತ್ತೀಚೆಗೆ ಕವಿ
ಕಯ್ಯಾರ ಕಿಞ್ಞಣ್ಣ ರೈ ಸರಕಾರವನ್ನು ಅಗ್ರಹಿಸಿದ್ದರು.
ಮಹಾಜನ್ ವರದಿಯೇ
ಅಂತಿಮ ಎಂದು ಸರಕಾರ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿರುವಾಗ, ಹಾಗೂ ಈ ಬಾರಿ
ರಾಜ್ಯವು ಸುವರ್ಣ ಕರ್ನಾಟಕ ವರ್ಷಾಚರಣೆಯನ್ನು ಮಾಡುತ್ತಿರುವಾಗ ತುಳುನಾಡು ಕರ್ನಾಟಕದಿಂದ
ಪ್ರತ್ಯೇಕವಾಗಬೇಕು ಎಂಬ ಅಪಸ್ವರವನ್ನು ಯಾರೂ ಎತ್ತಬಾರದು ಎಂದು ಚಿದಾನಂದ ಮೂರ್ತಿ
ಕರಾವಳಿ ಜನತೆಯಲ್ಲಿ ಮನವಿಮಾಡಿಕೊಂಡಿದ್ದಾರೆ.