|
ಕೃಷ್ಣಾ ಮೇಲ್ದಂಡೆ ಆರೋಪಕ್ಕೆ ಕೆಪಿಸಿಸಿ ಕಿಡಿಕಿಡಿ
ಬೆಂಗಳೂರು : ಕೃಷ್ಣಾ ಮೇಲ್ದಂಡೆ ಯೋಜನೆ ತುಂಡು
ಗುತ್ತಿಗೆ ಅವ್ಯವಹಾರ ಕುರಿತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ
ಜರುಗಿಸಲಾಗುವುದು ಎಂದು ಸರ್ಕಾರದ ವತಿಯಿಂದ ಸಲ್ಲಿಸಲಾಗಿರುವ ಪ್ರಮಾಣ ಪತ್ರ
ಕೇವಲ ಆಗ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ದೇವೇಗೌಡರ ತಪ್ಪನ್ನು ಮುಚ್ಚಿಹಾಕಲು ಮಾಡಿರುವ
ಕೆಲಸ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆರೋಪ ಮಾಡಿದೆ.
ಆಗ ಕೃಷ್ಣಾ ಮೇಲ್ದಂಡೆ ಯೋಜನೆ ಅವ್ಯವಹಾರದ ಸಂಬಂಧ ತನಿಖೆ
ನಡೆಸಿದ ಸದನ ಸಮಿತಿಯು ಆಗಿನ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಸೇರಿದಂತೆ
ಕೆಲವು ರಾಜಕಾರಣಿಗಳು ಇದರಲ್ಲಿ ಭಾಗಿಯಾಗಿದ್ದಾರೆಂದು ವರದಿ ಸಲ್ಲಿಸಿಯಾಗಿದೆ.
ಇದರ ಜೊತೆಗೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಬೇಡಿಕೆಯೂ
ಇದೆ. ಈ ಮಧ್ಯೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಈ ಸಂಬಂಧ ಸಲ್ಲಿಸಿರುವ ಅರ್ಜಿಗೆ ಮುಖ್ಯ
ಕಾರ್ಯದರ್ಶಿಗಳ ಮೂಲಕ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ದೇವೇಗೌಡರ ಹೆಸರನ್ನು
ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ವಿ.ಎಸ್.ಉಗ್ರಪ್ಪ, ಪ್ರಕಾಶ್
ರಾಥೋಡ್ ಹಾಗೂ ಪಿ.ಎಂ. ಅಶೋಕ್ ಅವರು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ತುಂಡು ಗುತ್ತಿಗೆಯನ್ನು
೧೯೯೬ರಲ್ಲಿ ನೀಡಿದ್ದಾಗ ಸಾಕಷ್ಟು ಅವ್ಯವಹಾರಗಳು ನಡೆದಿದ್ದವು. ಈ ಕುರಿತು ಕೇವಲ
ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಮಾಣ ಪತ್ರ ನೀಡುವ
ಮೂಲಕ ಗೌಡರನ್ನು ರಕ್ಷಿಸುವ ಹುನ್ನಾರ ನಡೆದಿದೆ ಎಂದು ಅವರು ಸರ್ಕಾರದ ವಿರುದ್ಧ
ವಾಗ್ದಾಳಿ ನಡೆಸಿದ್ದಾರೆ.
|