ಸಿಡಿ ಮತ್ತು ಫೋನ್ ಮಾತುಕತೆಗಳನ್ನು
ತಮ್ಮ ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತುತಪಡಿಸಿದ ಜನಾರ್ದನ ಸ್ವಾಮಿ,
ಲಂಚಕೊಡುವಂತೆ ತಮಗೆ ಕುಮಾರಸ್ವಾಮಿ ಒತ್ತಡ ಹೇರಿರುವ ಬಗ್ಗೆ
ಮೂವರು ರಫ್ತುದಾರರು ಪರಸ್ಪರ ದೂರುತ್ತಿರುವ ದೂರವಾಣಿ ಸಂಭಾಷಣೆಯನ್ನೂ
ಮಾಧ್ಯಮದವರಿಗೆ ಕೇಳಿಸಿದರು.
ಕುಮಾರಸ್ವಾಮಿ ತಮ್ಮ ಅತ್ತಿಗೆ ಕವಿತಾರ ಮುಖಾಂತರ
ಲಂಚದ ಮೊತ್ತವನ್ನು ಉಲ್ಲೇಖಿಸುವ ಚೆಕ್ ನಂಬರ್ಗಳನ್ನೂ ರೆಡ್ಡಿ
ಉಲ್ಲೇಖಿಸಿದರು.
ಕವಿತಾರನ್ನು ರಿಸರ್ವ್ ಬ್ಯಾಂಕ್ಗೆ ಹೋಲಿಸಿದ
ರೆಡ್ಡಿ, ಆಕೆಯ ಖಾತೆಗೆ ಹಣ ಜಮಾ ಆದ ಕೂಡಲೇ ಮಾಜಿ ಪ್ರಧಾನಿ
ದೇವೇಗೌಡರ ಸಂಬಂಧಿಗಳ ಹೆಸರಲ್ಲಿ ಆಸ್ತಿ ಖರೀದಿಯಾಗುತ್ತದೆ. ೫
ಕೋಟಿ ರೂಪಾಯಿಗಳನ್ನು ಕವಿತಾರ ತಾಯಿ ಜಯಮ್ಮರಿಗೆ ನೀಡಿರುವುದಕ್ಕೆ
ಚೆಕ್ ನಂಬರ್ಗಳು ಸಾಕ್ಷಿಯಾಗಿವೆ ಎಂದು ಆರೋಪಿಸಿದರು.
ಬಹು ನಿರೀಕ್ಷೆಯಿಂದ ಕಾದಿದ್ದ ಮಾಧ್ಯದವರು
ಸ್ಪಷ್ಟವಿಲ್ಲದ ಸಿಡಿಗಳನ್ನು ಪರದೆಯ ಮೇಲೆ ವೀಕ್ಷಿಸಿ ನಿರಾಶೆಗೊಂಡರು.
ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಟ್ರಸ್ಟ್ ಹೆಸರಲ್ಲಿ ೨೫
ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಭವನದ ಬಗ್ಗೆ
ಅರಣ್ಯ ಸಚಿವ ಚೆನ್ನಿಗಪ್ಪರ ಮಗ ಹೇಳಿಕೆ ನೀಡುತ್ತಿರುವ ಸಿಡಿ ಮಾತ್ರ
ಸ್ಪಷ್ಟವಾಗಿ ಕಾಣಿಸಲ್ಪಡುತ್ತಿತ್ತು. ಮತ್ತಷ್ಟು ದಾಖಲೆಗಳನ್ನು ತಾವು
ಮುಂದಿನ ದಿನಗಳಲ್ಲಿ ನೀಡುವುದಾಗಿ ರೆಡ್ಡಿ ಮತ್ತೊಮ್ಮೆ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮೊದಲಿಗೆ ತಮ್ಮ
ಕುಟುಂಬದ ಹಿನ್ನೆಲೆ ಹಾಗೂ ತಮ್ಮ ಕರ್ನಾಟಕ ಪ್ರೀತಿಯ ಬಗ್ಗೆ ರೆಡ್ಡಿ
ವಿವರಿಸಿದರು. ತಾವು ಬಹಿರಂಗಪಡಿಸುತ್ತಿರುವ ಗಣಿಲಂಚ ಪ್ರಕರಣದ
ಸಾಕ್ಷ್ಯಗಳು ಭ್ರಷ್ಟಾಚಾರ ವಿರುದ್ಧದ ಹೋರಾಟವಾಗಿದ್ದು ಇದರಿಂದ ಬಿಜೆಪಿ
ಪಕ್ಷಕ್ಕೆ ಇನ್ನಷ್ಟು ಬಲ ಬರಲಿದೆ. ಪ್ರಕರಣದ ತನಿಖೆಯ ನಂತರ
ತಮ್ಮ ಉದ್ದೇಶವು ಬಿಜೆಪಿ ಹಿರಿಯರಿಗೆ ಮನವರಿಕೆಯಾಗಿ ಅವರು
ತಮ್ಮನ್ನು ಪಕ್ಷಕ್ಕೆ ಮತ್ತೆ ಕರೆಸಿಕೊಳ್ಳುವ ಭರವಸೆಯೂ
ತಮಗಿದೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.