ಸೋನಿಯಾ
ನಗರಕ್ಕೆ ಬರೋವರೆಗೆ ಗೌಡರು ಮಾತಾಡಲ್ಲ!
`ಕುಮಾರ ಸ್ವಾಮಿ ಸರಕಾರ ಹೆಚ್ಚು ಕಾಲ ಮುಂದುವರೆಯೊಲ್ಲ'
ಬೆಂಗಳೂರು : ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ
ನಗರಕ್ಕೆ ಬಂದು ಹೋಗುವವರೆಗೂ ನಾನು ಯಾರ ಬಗ್ಗೆಯೂ ಪ್ರತಿಕ್ರಿಯೆ
ನೀಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ
ಹೇಳಿದ್ದಾರೆ.
ಸಂದರ್ಶನಕ್ಕಾಗಿ
ಅವರ ಮನೆಗೆ ತೆರಳಿದ್ದ ವಿಕ್ರಾಂತ ಕರ್ನಾಟಕ ಬಳಗದ ಜೊತೆ ಅವರು
ಹೇಳಿದ್ದಿಷ್ಟು:
ನಾನು
ಈಗ ಕೇವಲ ಪಕ್ಷದ ಸಂಘಟನೆಯಲ್ಲಿ ನನ್ನನ್ನು
ಜೋಡಿಸಿಕೊಂಡಿದ್ದೇನೆ. ನನಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದು
ಸದ್ಯಕ್ಕೆ ಸಾಧ್ಯವಿಲ್ಲ.
ಸದ್ಯದ
ಮಟ್ಟಿಗೆ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡದೇ ನಮ್ಮ
ಕೆಲಸ ಮಾಡಿಕೊಂಡು ಹೋಗುತ್ತೇವೆ. ಸೋನಿಯಾ ಗಾಂಧಿ ಬಂದು ಹೋಗಲಿ.
ಆಮೇಲೆ ಅದೇನಾಗುತ್ತದೋ ನೋಡೋಣ ಎಂದು ಗೌಡರು ಮುಗುಮ್ಮಾಗಿ
ನುಡಿದಿದ್ದಾರೆ.
ಎಂದಿನಂತೆ ಗೌಡರು ಪಕ್ಷದವರೊಡನೆ ಚರ್ಚೆ ನಡೆಸುತ್ತಿದ್ದ ದೃಶ್ಯ
ಮನೆಯಲ್ಲಿ ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ರಾಜಕೀಯ ಘಟನೆಗಳೂ
ಅವರನ್ನೂ ನಲುಗಿಸಿದೆ ಎನ್ನುವ ಸ್ಪಷ್ಟ ಚಿತ್ರಣ ಸಿಗುತ್ತಿತ್ತು.
ತಮ್ಮ ಮಾತಿನ ಮಧ್ಯೆದಲ್ಲೇ ತಮ್ಮ ಮಗನ ನೇತೃತ್ವದ ಸರಕಾರದ
ಬಗ್ಗೆ ಅಗಾಗ ಕಿಡಿ ಕಾರುತ್ತಿದ್ದರು. `ಇವರೇನು ಅಚಾನಕ್ಕಾಗಿ ಅಧಿಕಾರಕ್ಕೆ
ಬಂದು ಬಿಟ್ಟಿದ್ದಾರೆ. ಆದರೆ ಅದನ್ನು ಉಳಿಸಿಕೊಂಡು ಹೋಗುವಂತೆ ನಂಗಂತೂ
ಕಾಣ್ತಾ ಇಲ್ಲ' ಎಂದು ತಮ್ಮ ದುಃಖವನ್ನು ಆಪ್ತರೆದುರು
ತೋಡಿಕೊಳ್ಳುತ್ತಿದ್ದರು.