ಕನ್ನಡಿಗರಲ್ಲಿ ಸ್ವಾಭಿಮಾನ
ಹೆಚ್ಚಿಸಲು ಬಳ್ಳಾರಿಗೆ ಬನ್ನಿ :ರಕ್ಷಣಾ ವೇದಿಕೆ
ಕನ್ನಡಿಗರನ್ನು
ಒಗ್ಗೂಡಿಸಿ, ಅವರಲ್ಲಿ ಜಾಗೃತಿ ಮೂಡಿಸಿ ಕನ್ನಡಿಗರು ಕರ್ನಾಟಕದ ಸಾರ್ವಭೌಮರು
ಎಂದು ರಾಜಕೀಯ ನಾಯಕರಿಗೆ ಹಾಗೂ ಇಲ್ಲಿ ವಲಸೆ ಬಂದು ನಮ್ಮನ್ನು
ಆಳಲು ಪ್ರಯತ್ನಿಸಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನದಟ್ಟು ಮಾಡುವ
ಕೆಲಸ ಮಾಡುತ್ತಿರುವ ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನಿ ಕನ್ನಡ
ಸಮಾವೇಶಕ್ಕೆ ಆಹ್ವಾನ ನೀಡಿದೆ.
ಕನ್ನಡಿಗರು ಸಹನಶೀಲರು, ಸೌಮ್ಯತೆಯ ಪ್ರತೀಕ,
ಎಲ್ಲರನ್ನು ಒಪ್ಪಿಕೊಳ್ಳುವ ಮನೋಭಾವದವರು ಎಂಬ ನಾನಾ ರೀತಿಯ
ಬೇರೆಯವರ ಹೊಗಳಿಕೆಗಳು ಕರ್ನಾಟಕದಲ್ಲಿ ಇಂದು ಕನ್ನಡಿಗರಿಗೆ ಬದುಕಲು
ಕ್ಲಿಷ್ಟಕರ ಪರಿಸ್ಥಿತಿಯನ್ನು ತಂದೊಡ್ಡಿದೆ. ಎಲ್ಲಿ ನೋಡಿದರಲ್ಲಿ ಕನ್ನಡಿಗರ
ಮೇಲೆ ದಬ್ಬಾಳಿಕೆ, ದೌರ್ಜನ್ಯ. ಕರ್ನಾಟಕದ ರಾಜಧಾನಿಯಾದ
ಬೆಂಗಳೂರಿನಲ್ಲಿ ಕನ್ನಡದ ಮಾತು ಕೇಳುವುದೇ ಕಷ್ಟ, ಇನ್ನು ನಮ್ಮ
ಗಡಿ ಪ್ರದೇಶಗಳಲ್ಲಿ ನೆರೆ ರಾಜ್ಯದವರದೇ ಕಾರುಬಾರು. ಹೀಗಿರುವಾಗ
ಕನ್ನಡಕ್ಕೆ, ಕನ್ನಡಿಗರಿಗೆ ಎಲ್ಲೇ ಅನ್ಯಾಯವಾದರೂ ಅದರ ವಿರುದ್ಧ
ತೀವ್ರವಾಗಿ ಪ್ರತಿಭಟಿಸಿ ಕನ್ನಡಿಗರಿಗೆ ಆದ ಅನ್ಯಾಯವನ್ನು ಸರಿಪಡಿಸಲು
ಸದಾ ಸನ್ನದ್ಧವಾಗಿರುವ ಸಂಘಟನೆ -ಕರ್ನಾಟಕ ರಕ್ಷಣಾ ವೇದಿಕೆ(
ಕ.ರ.ವೇ).
`ಸ್ವಾಭಿಮಾನಿ ಕನ್ನಡಿಗರ ಸಮಾವೇಶ'ವನ್ನು
ಕ.ರ.ವೇಯು ನಮ್ಮ ಗಡಿ ಭಾಗದಲ್ಲಿರುವ ಬಳ್ಳಾರಿ ಜಿಲ್ಲೆಯಲ್ಲಿ
ಆಗಸ್ಟ್ ೧೯ ಮತ್ತು ೨೦ ರಂದು ಹಮ್ಮಿಕೊಂಡಿದೆ. ಈ ಸಮಾವೇಶ ನಮ್ಮ
ಹೆಮ್ಮೆಯ ಹಂಪಿ ಇರುವ ಬಳ್ಳಾರಿ ಜಿಲ್ಲೆಯ ಕನ್ನಡಿಗರಲ್ಲಿ ಆತ್ಮ ವಿಶ್ವಾಸ
ತುಂಬುವುದು ಹಾಗೂ ಅಖಂಡ ಕರ್ನಾಟಕದ ಕನ್ನಡಿಗರು ಬಳ್ಳಾರಿ ಕನ್ನಡಿಗರ
ನೋವು ನಲಿವಿಗೆ ಸ್ಪಂದಿಸಲಿದ್ದಾರೆ ಎಂಬುದನ್ನು ಎಂದು ತೋರಿಸುವ
ಒಂದು ಪ್ರಯತ್ನ. ಹಾಗೆ ಈ ಜಿಲ್ಲೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ
ಅನ್ಯಾಯವನ್ನು ವಿಶ್ವದಾದ್ಯಂತ ಕನ್ನಡಿಗರು ಪ್ರತಿಭಟಿಸಿ,
ಬಳ್ಳಾರಿಯು ಎಂದೆಂದೂ ಕನ್ನಡಿಗರದ್ದೇ ಎಂದು ನಿರೂಪಿಸಬೇಕಾಗಿದೆ.
ಈ ಪ್ರಯುಕ್ತ ಕನ್ನಡ ರಕ್ಷಣಾ ವೇದಿಕೆಯ ಎಲ್ಲ ಶಾಖೆಗಳ ಪ್ರತಿನಿಧಿಗಳು
ಹಾಗೂ ವಿಶ್ವದಾದ್ಯಂತ ಇರುವ ಕ.ರ.ವೇ ಕಾರ್ಯಕರ್ತರು ಇದರಲ್ಲಿ
ಭಾಗವಹಿಸಿ ಕನ್ನಡಿಗರ ಒಗ್ಗಟ್ಟಿನ ಶಕ್ತಿಯನ್ನು ತೋರಿಸಲಿದ್ದಾರೆ. ಈ
ಕಾರ್ಯಕ್ರಮದಲ್ಲಿ ಸಕಲ ಕನ್ನಡಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ
ಕನ್ನಡ ರಕ್ಷಣಾ ವೇದಿಕೆಯು ಕೋರಿದೆ. ಈ ಬೃಹತ್ ಸಮಾವೇಶಕ್ಕೆ
ಯಾವುದೇ ರೀತಿಯ ಸಹಾಯ ಮಾಡಲಿಚ್ಛಿಸುವ ಕನ್ನಡಾಭಿಮಾನಿಗಳು
kannada@karnatakarakshanavedike.org
ಸಂಪರ್ಕಿಸಬೇಕಾಗಿ ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
http://www.karnatakarakshanavedike.org/
ಕರ್ನಾಟಕ ರಕ್ಷಣಾ ವೇದಿಕೆ
ಕೇಂದ್ರ ಕಛೇರಿ ಸಮಿತಿ
ಗಾಂಧಿನಗರ
ಬೆಂಗಳೂರು