ಬೆಂಗಳೂರಲ್ಲಿ
ತಲೆಯೆತ್ತಲಿರುವ ೫ ಉಪನಗರಗಳು
ರಾಮನಗರ, ಸಾತನೂರು,
ಮಾಗಡಿ, ಬಿಡದಿ,ನಂದಗುಡಿಯಲ್ಲಿ ಹೊಸ ಟೌನ್ಶಿಪ್
ಬೆಂಗಳೂರು :
ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್ಡಿಎ) ವತಿಯಿಂದ ಸುಮಾರು
೬೬ ಸಾವಿರ ಎಕರೆ ಪ್ರದೇಶದಲ್ಲಿ ಐದು ಉಪನಗರಗಳನ್ನು ನಗರದ ಹೊರವಲಯದಲ್ಲಿ
ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು
ತಿಳಿಸಿದ್ದಾರೆ.
ಬಿಎಂಆರ್ಡಿಎ ವತಿಯಿಂದ
ನಿರ್ಮಿಸಲಾಗಿದ್ದ ವರ್ತುಲರಸ್ತೆ, ಮಂಧ್ಯಂತರ ರಸ್ತೆ ಹಾಗೂ ರೆಡಿಯಲ್ ರಸ್ತೆಗಳ ಸಮಿಕ್ಷಾ
ಕಾರ್ಯವನ್ನು ಸೋಮವಾರ ಉದ್ಘಾಟಿಸಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾತನಾಡುತ್ತಿದ್ದರು.
ಸರ್ಕಾರ ಈಗಾಗಲೇ
ಐದು ಉಪನಗರಗಳನ್ನು ರಾಮನಗರ, ಸಾತನೂರು, ಮಾಗಡಿ, ಬಿಡದಿ ಹಾಗೂ ನಂದಗುಡಿಯಲ್ಲಿ
ನಿರ್ಮಿಸಲು ಉದ್ದೇಶಿಸಿದೆ. ಇದಕ್ಕಾಗಿ ಅತ್ಯಾಧುನಿಕ ಉಪಗ್ರಹ ತಂತ್ರಜ್ಞಾನ ಬಳಸಿಕೊಂಡು ಸಮೀಕ್ಷಾ
ಕಾರ್ಯ ಕೈಗೊಳ್ಳಲಾಗಿದ್ದು ಪ್ರತಿ ಉಪನಗರದಲ್ಲೂ ಸಕಲ ಸೌಲಭ್ಯಗಳನ್ನು
ಒದಗಿಸುವುದರ ಬಗ್ಗೆ ಸಮಗ್ರ ಯೋಜನೆಯೊಂದನ್ನು ರೂಪಿಸಲಾಗುತ್ತದೆ ಎಂದು
ಅವರು ಹೇಳಿದರು.
ಈ ನಿಟ್ಟಿನಲ್ಲಿ ಬಿಡದಿಯಲ್ಲಿ
೧೨,೦೦೦ ಎಕರೆ, ಸಾತನೂರ ಬಳಿ ೧೮,೦೦೦ ಎಕರೆ, ಮಾಗಡಿಯಲ್ಲಿ ೧೩,೦೦೦ ಎಕರೆ ಹಾಗೂ ನಂದಗುಡಿಯ
ಬಳಿ ೧೧,೦೦೦ ಎಕರೆ ಪ್ರದೇಶದಲ್ಲಿ ಐದು ಬೃಹತ್ ಉಪನಗರಗಳು ತಲೆ ಎತ್ತಲಿವೆ ಎಂದು
ಅವರು ತಿಳಿಸಿದರು.
`ಯಾವುದೇ ಕಾರಣದಿಂದಲೂ
ರೈತರಿಂದ ಭೂಮಿಯನ್ನು ವಶಪಡಿಸಿಕೊಂಡಾಗ ಯಾವುದೇ ಅನುಮಾನ ಹಾಗೂ ಸಂಶಯಗಳಿಗೆ
ಎಡೆಮಾಡಿಕೊಡದಂತೆ ಭೂಮಿಯನ್ನು ವಶಪಡಿಸಿಕೊಳ್ಳಬೇಕಾಗಿದೆ. ಅಲ್ಲದೇ ರೈತರಿಗೂ
ಅನ್ಯಾಯವಾಗದಂತೆ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡುವುದು
ಅಗತ್ಯವಾಗಿದೆ'' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜನ ಸಾಂದ್ರತೆ
ಹೆಚ್ಚುತ್ತಿದ್ದಂತೆಯೇ ಇನ್ನು ಐದು ಉಪನಗರಗಳನ್ನು ನಿರ್ಮಿಸುವುದರ ಬಗ್ಗೆ ಸರ್ಕಾರ
ಗಂಭೀರ ಚಿಂತನೆ ನಡೆಸಿದೆ ಎಂದು ಘೋಷಿಸಿದರು.
ಬಿಎಂಆರ್ಡಿಎ
ಅಧಿಕಾರಿಗಳಿಗೆ ಆನೇಕಲ್, ಕನಕಪುರ, ಹೊಸಕೋಟೆ, ನೆಲಮಂಗಲ ಮತ್ತು ಮಾಗಡಿ ಪ್ರದೇಶಗಳನ್ನೊಳಗೊಂಡ
ಮತ್ತೈದು ಉಪನಗರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಮಹಾಯೋಜನೆ ರೂಪಿಸಲು
ಈಗಾಗಲೇ ಆದೇಶ ನೀಡಲಾಗಿದೆ ಎಂದು ತಿಳಿಸಿದರು.