|
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಬೆಂಗಳೂರು: ರಾಜ್ಯ ಲೋಕ ಸೇವಾ ಆಯೋಗ ಈ ಸಾಲಿನ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟಿಸಿದೆ. ಡಿಸೆಂಬರ್೯ರಿಂದ
ಕೆಎಎಸ್ ಮುಖ್ಯ ಪರೀಕ್ಷೆ ಪ್ರಾರಂಭವಾಗಲಿದ್ದು ಡಿಸೆಂಬರ್ ೨೦ರತನಕ
ನಡೆಯಲಿದೆ.
ಒಟ್ಟು ೩೦ ಐಚ್ಛಿಕ ವಿಷಯಗಳಿಗೆ ನಡೆಯುವ ಮುಖ್ಯ ಪರೀಕ್ಷೆ
ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಲ್ಲಿ ಏಕಕಾಲಕ್ಕೆ
ನಡೆಯಲಿದೆ ಎಂದು ಆಯೋಗದ ಅಧ್ಯಕ್ಷ ಡಾ.ಎಚ್.ಎನ್. ಕೃಷ್ಣ
ಸುದ್ದಿಗಾರರಿಗೆ ಬುಧವಾರ ತಿಳಿಸಿದರು.
೧೦೧ ಹುದ್ದೆಗಳಿಗೆ ನಡೆಯುತ್ತಿರುವ ಮುಖ್ಯ ಪರೀಕ್ಷೆಗೆ ೨,೧೩೫
ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅರ್ಹತೆ ಪಡೆದವರಿಗೆ ನ. ೨೦ರಿಂದ
ಪ್ರವೇಶ ಪತ್ರ ರವಾನಿಸಲಾಗುವುದು. ನ. ೧೬ರ ನಂತರ ಅನರ್ಹ
ಅಭ್ಯರ್ಥಿಗಳಿಗೆ ಹಿಂಬರಹ ಮತ್ತು ವೆಬ್ಸೈಟ್ನಲ್ಲಿ ವಿವರ
ನೀಡಲಾಗುವುದು. ಪ್ರವೇಶ ಪತ್ರ ತಲುಪದ ಅಭ್ಯರ್ಥಿಗಳು ನ.
೨೭ರ ನಂತರ ಆಯೋಗವನ್ನು ಸಂಪರ್ಕಿಸಬಹುದು ಎಂದು
ವಿವರಿಸಿದರು.
ಮೊದಲ ಬಾರಿಗೆ ಅಂಧ ಅಭ್ಯರ್ಥಿ ಒಬ್ಬರಿಗೆ ಒಂದು ತಹಸೀಲ್ದಾರ್
ಹುದ್ದೆಯನ್ನು ಮೀಸಲಿಡಲಾಗಿದೆ. ೮೩ ಅಂಧ ಅಭ್ಯರ್ಥಿಗಳು
ಪೂರ್ವಭಾವಿ ಪರೀಕ್ಷೆ ತೆಗೆದುಕೊಂಡಿದ್ದರು. ಇವರಲಿ ೨೦ ಅಂಧ
ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ೧೩ ಮಂದಿ
ಸಹಾಯಕರೊಂದಿಗೆ ಮತ್ತು ೭ ಮಂದಿ ಸಹಾಯಕರಿಲ್ಲದೆ ಪರೀಕ್ಷೆ
ಬರೆಯಲಿದ್ದಾರೆ.
ಈ ಬಾರಿ ಉತ್ತರ ಪತ್ರಿಕೆ ಸ್ವರೂಪ ಬದಲಿಸಲಾಗಿದೆ. ಮೌಲ್ಯಮಾಪಕರು
ಅಂಕಗಳನ್ನು ದಾಖಲಿಸುವ ಜತೆಗೆ `ಎನ್ಕೋಡಿಂಗ್' ಮಾಡುವ ಪದ್ಧತಿ
ಜಾರಿಗೊಳಿಸಲಾಗುತ್ತಿದೆ. ಇದು ಮೊದಲ ಪ್ರಯತ್ನವಾಗಿದ್ದು, ಅಕ್ರಮ
ತಡೆಗೆ ನೆರವಾಗಲಿದೆ. ಮೂರು ಮಂದಿ ಮೌಲ್ಯಮಾಪನ ಮಾಡಲು
ಅವಕಾಶ ವಾಗುವಂತೆ ಉತ್ತರ ಪತ್ರಿಕೆಗಳನ್ನು ಸಿದ್ಧಗೊಳಿಸಲಾಗಿದೆ.
ತಾಂತ್ರಿಕ ದೋಷದಿಂದ ೭೦೦ ಉಪನ್ಯಾಸಕರ ಹುದ್ದೆಗಳ ಆಯ್ಕೆ
ಪ್ರಕ್ರಿಯೆ ಆರಂಭಿಸಿಲ್ಲ. ಯುಜಿಸಿ ಮಾರ್ಗಸೂಚಿಗೆ ಅನುಗುಣವಾಗಿ
ನಿಯಮಗಳನ್ನು ಮಾರ್ಪಡಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿ
ಪ್ರಸ್ತಾವನೆ ಹಿಂದಕ್ಕೆ ಕಳುಹಿಸಲಾಗಿದೆ. ನಿಯಮಗಳನ್ನು ಸರಿಪಡಿಸಿ
ಕಳುಹಿಸಿದ ನಂತರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು
ಎಂದು ತಿಳಿಸಿದರು.
ಒಂದು ಸಾವಿರ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ
ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆ ಡಿಸೆಂಬರ್ ಅಂತ್ಯದೊಳಗೆ
ಪೂರ್ಣಗೊಳ್ಳಲಿದೆ. ಮೀಸಲು ಮತ್ತು ಮೆರಿಟ್ ಆಧಾರದ ಮೇಲೆ
ಎರಡು ಸಾವಿರ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ
ಆಹ್ವಾನಿಸಲಾಗುವುದು. ಹೊಸದಾಗಿ ೨೦೦ ಮಂದಿ ಪ್ರಥಮ ದರ್ಜೆ
ಸಹಾಯಕರ ಆಯ್ಕೆಗೆ ಸರಕಾರ ಪ್ರಸ್ತಾವನೆ ಕಳುಹಿಸುವುದಾಗಿ
ತಿಳಿಸಿದೆ. ಈಗಾಗಲೇ ನಡೆಸಿರುವ ಆಯ್ಕೆ ಪರೀಕ್ಷೆಯಲ್ಲೆ ದ್ವಿತೀಯ
ದರ್ಜೆ ಸಹಾಯಕರ ಹುದ್ದೆಗಳನ್ನು ಆಯ್ಕೆ ಮಾಡಲಾಗುವುದು.
ಹೊಸದಾಗಿ ಪರೀಕ್ಷೆ ನಡೆಸುವುದಿಲ್ಲ ಎಂದು ಎಚ್. ಎನ್ ಕೃಷ್ಣರವರು
ಸ್ಪಷ್ಟಪಡಿಸಿದರು.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|