|
ಭದ್ರಾ ಮೇಲ್ದಂಡೆ ಯೋಜನೆಗೆ ಸಂಪುಟ ಒಪ್ಪಿಗೆ
ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ
ಒಂದಾದ `ಭದ್ರಾ ಮೇಲ್ದಂಡೆ' ನೀರಾವರಿ ಯೋಜನೆಗೆ
ಶುಕ್ರವಾರ(ನ.೧೦)ದಂದು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕೆ.ಸಿ.ರೆಡ್ಡಿ ನೇತೃತ್ವದ ತಜ್ಞರ ಸಮಿತಿ ನೀಡಿದ ವರದಿ ಆಧಾರದ
ಮೇಲೆ ಈ ಯೋಜನೆ ಜಾರಿಯಾಗಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ
ಹುಟ್ಟುವ ಭದ್ರಾ ನದಿಯಿಂದ ಏತ ನೀರಾವರಿಯ ಮೂಲಕ ನೀರು
ಪಡೆದು ಕಾಲುವೆಯ ಮೂಲಕ ಚಿತ್ರದುರ್ಗ, ತುಮಕೂರು,
ಕೋಲಾರ, ದಾವಣಗೆರೆ ಇನ್ನಿತರ ಬರಪೀಡಿತ ಜಿಲ್ಲೆಗಳಿಗೆ ಹರಿಸುವುದು
ಈ ಯೋಜನೆಯ ಉದ್ದೇಶ.
ಇದಲ್ಲದೆ ತುಂಗಾ ಮೇಲ್ದಂಡೆ ಯೋಜನೆಯಿಂದ
ಮುಳುಗಡೆಯಾಗಿರುವ ಲಿಂಗಾಪುರ ಮಾತ್ತು ಕಣಗಾಲು ಕೊಪ್ಪ
ಗ್ರಾಮಗಳ ಸ್ಥಳಾಂತರ ಯೋಜನೆಗೆ ಸಂಪುಟ ಸಮ್ಮತಿಸಿದೆ.
ಪುನರ್ವಸತಿಗಾಗಿ ಸುಮಾರು ೨.೪೭ ಕೋಟಿ ರೂ. ಗಳನ್ನು ಕರ್ನಾಟಕ
ನೀರಾವರಿ ನಿಗಮ ನೀಡುತ್ತಿದೆ.
ರೈತರಿಗಾಗಿ ವಿಶೇಷ ಪ್ಯಾಕೇಜ್ :
ಬರ, ಬೆಳೆಹಾನಿ ಮುಂತಾದ ಅನಾಹುತದಿಂದ ಬೇಸತ್ತು ಪ್ರಾಣ
ಕಳೆದುಕೊಂಡ ರೈತರಿಗಾಗಿ ಪ್ಯಾಕೇಜ್ ಘೋಷಿಸಲಾಗಿದೆ.
ಪ್ರಧಾನಮಂತ್ರಿ ಪರಿಹಾರಧನದಿಂದ ಬಂದ ಹಣವನ್ನು ಬಳಸಿ
ರೈತರಿಗಾಗಿ ವಿಶೇಷ ಪ್ಯಾಕೇಜ್ ನೀಡಲು ಸಂಪುಟ ನಿರ್ಧರಿಸಿದೆ. ಇದಕ್ಕಾಗಿ
ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು ಲೋಕೋಪಯೋಗಿ
ಸಚಿವ ಎಚ್.ಡಿ. ರೇವಣ್ಣ, ಜಲಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪ,
ಡಿ.ಎಚ್. ಶಂಕರಮೂರ್ತಿ, ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶೆಂಪುರ
ಹಾಗೂ ಶಶಿಕಾಂತ ಅಕ್ಕಪ್ಪ ನಾಯಿಕ ಸಮಿತಿಯಲ್ಲಿದ್ದಾರೆ.
ರಾಜ್ಯದ ಆರು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಬೆಳಗಾವಿ,
ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು
ಕೊಡುಗು ಜಿಲ್ಲೆಗಳಲ್ಲಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವುದಾಗಿ
ಸಚಿವ ಬಸವರಾಜ ಹೊರಟ್ಟಿ ಸುದ್ದಿಗಾರರಿಗೆ ಹೇಳಿದರು.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
|