|
ಜಿಲ್ಲೆಗಳಿಗೂ ವ್ಯಾಪಿಸಿದ ಕನ್ನಡ ಸಾಹಿತ್ಯ.ಕಾಂ
ಇತ್ತೀಚಿಗೆ ತುಮಕೂರು ನಗರದ ಸರ್ಕಾರಿ ನೌಕರರ ಸಂಘದ
ಸಭಾಂಗಣದಲ್ಲಿ ನಡೆದ ಕನ್ನಡಸಾಹಿತ್ಯ. ಕಾಂ ಬೆಂಬಲಿಗರ ಬಳಗ
ಸಭೆಯ ಮೂಲಕ ತನ್ನ ಚಟುವಟಿಕೆಗಳನ್ನು ಕರ್ನಾಟಕದ
ಜಿಲ್ಲಾಮಟ್ಟದವರೆಗೆ ವ್ಯಾಪ್ತಿಯನ್ನು ವಿಸ್ತರಿಸುವತ್ತ ಹೆಜ್ಜೆ ಹಾಕಿದೆ.
`ಪ್ರಜಾಪ್ರಗತಿ' ಕನ್ನಡ ದಿನಪತ್ರಿಕೆಯ ಸಂಪಾದಕ ಕೋಟೆ
ನಾಗಭೂಷಣ್, ಆರ್.ಎಸ್.ಅಯ್ಯರ್ರವರು ಆಯೋಜಿಸಿದ್ದ ಈ
ಸಭೆಯಲ್ಲಿ ಕನ್ನಡಸಾಹಿತ್ಯ.ಕಾಂನ ಬೆಂಗಳೂರಿನ ಪ್ರತಿನಿಧಿಗಳಾದ
ಶೇಖರಪೂರ್ಣ ಮತ್ತು ಅರೇಹಳ್ಳಿ ರವಿ ಭಾಗವಹಿಸಿದ್ದರು. ಈ
ಸಭೆಯ ಅಧ್ಯಕ್ಷತೆಯನ್ನು ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ
ಪ್ರಾಂಶುಪಾಲರಾದ ಎನ್.ಪಿ. ರವೀಂದ್ರನಾಥ್ರವರು ವಹಿಸಿದ್ದರು.
ಕಂಪ್ಯೂಟರಿನ ಸವಲತ್ತುಗಳು ಪ್ರಜಾಸತ್ತಾತ್ಮಕವಾದ ಆಶಯವನ್ನು
ಗಳಿಸಿಕೊಳ್ಳುತ್ತಾ ಹೇಗೆ ಕಾರ್ಯಶೀಲವಾಗಬೇಕು ಎನ್ನುವುದನ್ನು
ಶೇಖರಪೂರ್ಣ ತಮ್ಮ ಮಾತುಗಳಲ್ಲಿ ಹಿಡಿದಿಟ್ಟ ಇದೇ ಸಭೆಯಲ್ಲಿ
ಕಂಪ್ಯೂಟರ್ ಪರಿಸರದಲ್ಲಿ ಸ್ಥಳೀಯ ಭಾಷೆಯ ಅಗತ್ಯಕ್ಕೆ
ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸರ್ಕಾರದಿಂದ
ಆದೇಶವನ್ನು ಬಯಸಿ ಕನ್ನಡಸಾಹಿತ್ಯ. ಕಾಂ ಸಲ್ಲಿಸಲಿರುವ
ಮನವಿಯನ್ನು ಶೇಖರಪೂರ್ಣ ಪ್ರಸ್ತಾವನೆಗಿಟ್ಟಾಗ ಸಭೆ ಒಕ್ಕೊರಲಿನ
ಬೆಂಬಲವನ್ನು ಸೂಚಿಸಿತು. ಮನವಿಗೆ ಸರ್ಕಾರದಿಂದ ಸಕಾರಾತ್ಮಕವಾದ
ಪ್ರತಿಕ್ರಿಯೆ ಬಾರದಿದ್ದಲ್ಲಿ ಕನ್ನಡಸಾಹಿತ್ಯ. ಕಾಂ ಆಶ್ರಯದಲ್ಲಿ
ನಡೆಯಬಹುದಾದ ಆಂದೋಳನದಲ್ಲಿ ಪಾಲ್ಗೊಳ್ಳುವ ಉತ್ಸಾಹ ಮತ್ತು
ಭರವಸೆಯನ್ನು ಇದೇ ಸಭೆ ನೀಡಿತು.
`ಮುಂದಿನ ತಿಂಗಳು ತುಮಕೂರಿನಲ್ಲಿ ಕನ್ನಡಸಾಹಿತ್ಯ. ಕಾಂ
ಬೆಂಬಲಿಗರ ಬಳಗದ ವಿಧ್ಯುಕ್ತ ಉದ್ಘಾಟನೆ, ವಿಚಾರ ಸಂಕಿರಣ, ಕನ್ನಡ
ತಂತ್ರಾಂಶಗಳ ಪ್ರಾತ್ಯಕ್ಷಿತೆಯ ಕಾರ್ಯಕ್ರಮದ
ಆಯೋಜನೆಯನ್ನು ತುಮಕೂರಿನ ಗಣ್ಯರು ವಹಿಸಿಕೊಳ್ಳುವುದಾಗಿ
ಭರವಸೆ ನೀಡಿದ್ದಾರೆ' ಎಂದು ಅರೇಹಳ್ಳಿ ರವಿ ಹೇಳಿದರು.
ಸಭೆಯಲ್ಲಿ ನೀರಾವರಿ ತಜ್ಞ ಸಂಪಿಗೆ ಜಗನ್ನಾಥ, ಸಿದ್ಧಗಂಗಾ ಕಾಲೇಜಿನ
ಕನ್ನಡ ವಿಭಾಗದ ಮುಖ್ಯಸ್ಥರಾದ ಎನ್. ಶಿವರುದ್ರಯ್ಯ,
`ತುಮಕೂರು ವಾರ್ತೆ' ಸಂಪಾದಕ, ಹಿರಿಯ ಪತ್ರಕರ್ತರಾದ
ಎಚ್.ಎಸ್. ರಾಮಣ್ಣ, ಗೌಡನಕಟ್ಟೆ ತಿಮ್ಮಯ್ಯ, ವಕೀಲರಾದ
ಟಿ.ಎಸ್.ನಿರಂಜನ್ ಮುಂತಾದವರೊಂದಿಗೆ ಸರ್ಕಾರದ ನಾನಾ ಇಲಾಖೆಗಳ
ಅಧಿಕಾರಿಗಳು ಭಾಗವಹಿಸಿದ್ದರು.
ನಗರದಲ್ಲೂ ಕನ್ನಡಸಾಹಿತ್ಯ.ಕಾಂ ಕಂಪು
ಬೆಂಗಳೂರು ನಗರದ ಪ್ರತಿಷ್ಠಿತ ಸಂಸ್ಥೆಯಾದ ಸ್ಯಾಪ್ ಲ್ಯಾಬ್ಸ್(ಎಸ್
ಎ ಪಿ)ನಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರು ರಚಿಸಿಕೊಂಡಿರುವ
ಗೆಳೆಯರ ಬಳಗ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ
ರಾಜ್ಯೋತ್ಸವ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬ್ಲೂಟೂತ್
ತಂತ್ರಜ್ಞಾನದ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮುನ್ನಡೆಯಲಿರುವ
`ಅದಮ್ಯ' ಸಂಸ್ಥೆಯ ಸಂಸ್ಥಾಪಕ ಪಾಲುದಾರರಲ್ಲೊಬ್ಬರಾದ ಶರಧಿ
ಚಂದ್ರ ಬಾಬುರವರು ಹಾಗು ಶೇಖರಪೂರ್ಣರವರು ಮುಖ್ಯ
ಅತಿಥಿಗಳಾಗಿದ್ದರು.
ಸಂಸ್ಥೆಯ ನಿರ್ವಹಣೆಯಲ್ಲಿ ಕನ್ನಡವನ್ನು ವ್ಯಾಪಕವಾಗಿ
ಅಳವಡಿಸಿಕೊಂಡಿರುವ ಕ್ರಮಗಳನ್ನು ಶರಧಿ ಚಂದ್ರ ಬಾಬುರವರು
ವಿವರಿಸಿದಾಗ ಸಮಾರಂಭದಲ್ಲಿ ನೆರೆದಿದ್ದವರು
ಬೆರಗುಗೊಂಡದ್ದಲ್ಲದೆ ಅಪಾರವಾದ ಮೆಚ್ಚುಗೆ ಹಾಗೂ
ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಸ್ಥಳೀಯ ಭಾಷೆಗಳ
ಅಗತ್ಯವನ್ನು ವ್ಯಾಖ್ಯಾನಿಸುತ್ತಾ ಹೋದ ಶೇಖರಪೂರ್ಣ, ಸರ್ಕಾರಕ್ಕೆ
ಸಲ್ಲಿಸಲಿರುವ ಮನವಿಯ ಬಗೆಗೆ ಈ ಸಭೆಯಲ್ಲಿಯೂ
ಪ್ರಸ್ತಾಪಿಸಿದ್ದರು. ತೆರೆದಿಟ್ಟ ಮನವಿಗೆ ಪೂರಕವಾಗಿ ಅಪಾರವಾದ ಬೆಂಬಲ
ಕಂಡುಬಂದದ್ದಲ್ಲದೆ ಬೆಂಬಲದ ಸೂಚನೆಯಾಗಿ ಅದೇ
ಸಮಾರಂಭದಲ್ಲಿ ಸುಮಾರು ೬೮ ಸಹಿಗಳಾದವು.
ಮೊದನೆಯವರಾಗಿ ಶರಧಿ ಚಂದ್ರಬಾಬುರವರು ಸಹಿ ಹಾಕಿದ್ದು
ವಿಶೇಷವಾಗಿತ್ತು. ಜೊತೆಗೆ, ಈ-ಕವಿ ಬಳಗದ ಮುಂಚೂಣಿಯಲ್ಲಿರುವ
ಸತೀಶ್ಗೌಡ ಮತ್ತು ಮಿತ್ರರು ಸಹಿ ಮಾಡಿ ಬೆಂಬಲ ಸೂಚಿಸಿದರು.
ಕನ್ನಡಸಾಹಿತ್ಯ. ಕಾಂ ಬೆಂಬಲಿಗರ ಬಳಗದ ಸದಸ್ಯರೂ ಆಗಿರುವ
ಅರುಣ್ ಮೈಸೂರು ಹಾಗು ಗೆಳೆಯರ ಬಳಗದ ಉತ್ಸಾಹಿಗಳು
ಏರ್ಪಡಿಸಿದ್ದ ಈ ಕಾರ್ಯಕ್ರಮ ಕನ್ನಡ ಸಂಸ್ಕೃತಿಯ ನಾನಾ
ಮಜಲುಗಳನ್ನು ಪರಿಚಯಿಸುವಂತಿದ್ದು ನೆರೆದಿದ್ದವರಿಗೆ ಹೊಸ
ಹುರುಪನ್ನು ತಂದುಕೊಟ್ಟಿತು.
ಮಾಹಿತಿ: ಅರೇಹಳ್ಳಿ ರವಿ, ಕನ್ನಡಸಾಹಿತ್ಯ.ಕಾಂ
arehalliravi@kanlit.com
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
|