ಒಂದು ಆತ್ಮ ವಿಶ್ವಾಸದ ಕೋಲ್ಮಿಂಚು
(೨೦ ಅಕ್ಟೋಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಕಡೆಗೂ ಸರ್ಕಾರ ಧೈರ್ಯವಾಗಿ ತೀರ್ಮಾನ ತೆಗೆದುಕೊಂಡಿದೆ.
ಕರ್ನಾಟಕದ ಶಾಲೆಗಳಲ್ಲಿ ಮಕ್ಕಳಿಗೆ ಒಂದನೇ ತರಗತಿಯಿಂದಲೇ
ಇಂಗ್ಲಿಷ್ ಹೇಳಿಕೊಡುವ ವಿಚಾರವಾಗಿ ಸುಮಾರು ಆರೇಳು ತಿಂಗಳಿಂದಲೂ
ಒಂದು ಬಗೆಯ ಬೇಕು-ಬೇಡಗಳ ವಾದವಿವಾದಗಳು ದೊಡ್ಡವರ
ಮಟ್ಟದಲ್ಲಿ ನಡೆಯುತ್ತಲೇ ಇತ್ತು. ಇಂಗ್ಲಿಷ್ ನಮ್ಮನ್ನು ಆಳಿದ
ಭಾಷೆ; ಇಂಗ್ಲಿಷಿನಿಂದ ಕನ್ನಡಕ್ಕೆ ತೊಂದರೆ; ಮಕ್ಕಳ ಮೇಲೆ
ಭಾಷೆಯ ಹೇರಿಕೆ; ಮತ್ತೆ ಕನ್ನಡಕ್ಕೆ ಕುತ್ತು... ಇತ್ಯಾದಿ
ಮಾತುಗಳು, ಕೆಲವೊಮ್ಮೆ ತೀರಾ ಕೈಕೈ ಮಿಲಾಯಿಸಿದ ದೊಡ್ಡವರ
ಪ್ರಕರಣಗಳು ನಡೆದಿರುವುದನ್ನು ಎಲ್ಲರೂ ಗಮನಿಸಿದ್ದೇವೆ.
ಆದರೆ ವಸ್ತು ಸ್ಥಿತಿಯನ್ನು ನಾವ್ಯಾರೂ ಗಮನಿಸಿಲ್ಲ. ಭಾಷೆ ಎಂದಾಕ್ಷಣ
ಭಾವುಕರಾಗುವ, ಕನ್ನಡ ಎಂದಕೂಡಲೆ ಎದೆಯುಬ್ಬಿಸಿ ನಡೆಯುವ
ನಾವೆಲ್ಲ ಮಾತೃಭಾಷೆಯ ಪ್ರೀತಿಯಿಂದ ಹೊರತಾದವರೇನಲ್ಲ. ಆದರೆ
ಇಂಗ್ಲಿಷ್ ನಮ್ಮನ್ನು ಕುಬ್ಜರಾಗಿಸಿದೆ, ಎನ್ನುವಂತೆಯೇ ಇಂಗ್ಲಿಷ್
ಕಲಿಯಲು ಸಾಧ್ಯವಾಗದೆ ಕುಬ್ಜರಾಗಿ ಕೊಳೆತುಹೋದ
ಪ್ರತಿಭೆಗಳನ್ನು ನಾವು ಮರೆಯಕೂಡದು. ಇಂಗ್ಲಿಷ್ ವಿಚಾರ
ಬಂದಾಗಲೆಲ್ಲ ನಾವು ಕನ್ನಡದಲ್ಲಿ ಬೆಳಗಿದ ಪ್ರತಿಭಾವಂತರ ಬಗ್ಗೆ
ಮಾತನಾಡುತ್ತೇವೆ. ಇಂಗ್ಲಿಷ್ ನೆರವಿಲ್ಲದೆ ಅವರೆಲ್ಲ ಇಡೀ ಜಗತ್ತಿಗೇ
ಅಚ್ಚರಿ ಮೂಡಿಸುವಂತೆ ತಮ್ಮ ಪ್ರತಿಭೆಯನ್ನು ಬೆಳಗಲಿಲ್ಲವೆ?
ಎಂದು ಪ್ರಶ್ನಿಸುತ್ತೇವೆ.
ನಿಜ. ಡಿವಿಜಿಯವರು ಯಾವುದೇ ದೊಡ್ಡ ಪದವಿ ಓದಿದವರಲ್ಲ.
ಅನಕೃ, ರಾಜ್ಕುಮಾರ್, ತರಾಸು ಮುಂತಾದವರು ತಮ್ಮಷ್ಟಕ್ಕೆ
ತಾವೇ ಇಂಗ್ಲಿಷ್ ಓದಿಕೊಂಡವರೇ ವಿನಹ ಸ್ಕೂಲು ಕಾಲೇಜುಗಳಲ್ಲಿ
ಕಲಿತವರಲ್ಲ. ಅದೂ ಅಲ್ಲದೆ ಇಂಗ್ಲಿಷ್ ಹಂಗಿನಿಂದ ಬೇರೆಯೇ ಆಗಿ ತಮ್ಮ
ಶಕ್ತಿಯನ್ನು ತೋರಿದವರು. ಇದೆಲ್ಲವೂ ನಿಜವೇ...
ಆದರೆ ಇಂಗ್ಲಿಷ್ ಬಾರದ ಕಾರಣದಿಂದಾಗಿ, ಕೀಳರಿಮೆಯಿಂದಾಗಿ,
ಬೇರೆಯವರ ಎದುರು ಸ್ಪರ್ಧಿಸಲು ಸಾಧ್ಯವಿದ್ದರೂ
ಅಸಹಾಯಕರಾಗಿ ಕಮರಿಹೋಗಿರುವ ರಾಜ್, ಡಿವಿಜಿ, ಅನಕೃಗಳನ್ನು
ನಾವು ಲೆಕ್ಕ ಹಾಕಿದ್ದೇವೆಯೆ? ಗೆದ್ದವರ ಲೆಕ್ಕ ಇಡುವುದು,
ಉದಾಹರಣೆ ನೀಡುವುದು ಸುಲಭ. ಅಸಂಖ್ಯಾತ ಸೋತವರ ಮಾಹಿತಿ,
ಲೆಕ್ಕಾಚಾರ ನಮ್ಮ ಊಹೆಗೂ ನಿಲುಕುವಂಥದಲ್ಲ.
ಮೀಸಲಾತಿ, ಕೃಪಾಂಕ ಮುಂತಾದ ಪ್ರವೃತ್ತಿಗಳು
ಹುಟ್ಟಿಕೊಂಡಿರುವುದೇ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರದ
ಅಸಮಾನತೆಯ ಕಾರಣದಿಂದಾಗಿ. ಈಗ ಬೆಂಗಳೂರಿನ ಶಾಲೆಗಳನ್ನೇ
ಗಮನಿಸಿ. ಎಲ್ಲ ಖಾಸಗಿ ಶಾಲೆಗಳೂ ನರ್ಸರಿಯಿಂದಲೇ ಎಬಿಸಿಡಿಗೆ
ತಳಪಾಯ ಹಾಕುತ್ತಿರುತ್ತವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಅದು
ಮಾಮೂಲಿಯಾಗಿ ಐದನೆ ತರಗತಿಯಿಂದ ಮಾತ್ರ. ಅಂದರೆ ಒಂದನೇ
ತರಗತಿಯಲ್ಲಿ ಕಲಿತ ಖಾಸಗಿ ಶಾಲೆಯ ವಿದ್ಯಾರ್ಥಿಗಳ ಎದುರು ಐದನೇ
ತರಗತಿಯ ವಿದ್ಯಾರ್ಥಿಗೆ ಅಲ್ಲಿಂದಲೇ ಕೀಳರಿಮೆ ಆರಂಭವಾಗುತ್ತದೆ.
ಕಾಲೇಜು ಹಂತ ತಲುಪುವಾಗ ಇದು ಹೆಮ್ಮರವಾಗಿ ಬೆಳೆದಿರುತ್ತದೆ.
ಇವತ್ತಿನ ಮಕ್ಕಳ ಬೌದ್ಧಿಕ ಲೋಕವನ್ನು ವಿಶ್ಲೇಷಿಸುವ
ಮನೋವಿಜ್ಞಾನಿಗಳು `ಐದು ವರ್ಷ ತುಂಬಿದ ಮಗುವಿನ ಮನಸ್ಸು
ಐದಾರು ಭಾಷೆ ಕಲಿಯುವಷ್ಟು ಶಕ್ತವಾಗಿರುತ್ತದೆ'ಎನ್ನುತ್ತಾರೆ.
ಅಂದರೆ ಮಗುವೊಂದಕ್ಕೆ ಇಂಗ್ಲಿಷ್ ಭಾಷೆಯನ್ನು ಒಂದನೇ
ತರಗತಿಯಿಂದ ಕಲಿಸಿದರೆ ಅದು ಹೇರಿಕೆ ಆಗುತ್ತದೆ ಎನ್ನುವುದು
ಮೂರ್ಖತನ ಅಲ್ಲವೇ?
ಹಾಗೆಯೇ ಇಂಗ್ಲಿಷ್ನಿಂದ ಕನ್ನಡ ಹಾಳಾಗುತ್ತದೆ ಎನ್ನುದಕ್ಕೂ ಅದೇ
ಮಾತನ್ನು ಹೇಳಬೇಕಾಗುತ್ತದೆ. ಒಂದು ಭಾಷೆಯಿಂದ ಇನ್ನೊಂದು
ಭಾಷೆ ಸಾಯುತ್ತದೆ ಎನ್ನುವ ವಾದವೇ ತಪ್ಪು ಎನ್ನುತ್ತಿದ್ದಾರೆ
ಭಾಷಾವಿಜ್ಞಾನಿಗಳು. ಭಾಷೆಯೊಂದು ಸಾಯುವುದು ಅದರ ಬಳಕೆ
ನಿರುಪಯುಕ್ತ ಎನಿಸಿದಾಗ. ನಮ್ಮನ್ನು ಆಳುವ ಸರ್ಕಾರಗಳು
ಅದನ್ನು ನಿರುಪಯುಕ್ತಗೊಳಿಸಬಾರದು ಅಷ್ಟೇ. ಕನ್ನಡ ಕಲಿತರೆ
ಲಾಭವೂ ಇದೆ ಎಂಬ ಆಶಾಕಿರಣವನ್ನು ಮೂಡಿಸಬೇಕು.
ಇಂಗ್ಲಿಷ್ ಕಲಿಕೆಯ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ
ತೀರ್ಮಾನದಿಂದ ಕನಿಷ್ಠ ದಲಿತರು, ಹಿಂದುಳಿದವರು, ಹಳ್ಳಿಗಾಡಿನ
ಮಕ್ಕಳಾದರೂ ಕೀಳರಿಮೆಯಿಂದ ಕುಬ್ಜರಾಗುವುದು ತಪ್ಪಿದರೆ, ಅವರ
ಬದುಕಿಗೆ ಈ ಆತ್ಮವಿಶ್ವಾಸವೇ ಊರುಗೋಲಾದರೆ ಅದಕ್ಕೆ ಬೆಲೆ
ಕಟ್ಟಲಾದೀತೆ...?...ಏನೇ ಅಂದರೂ ಭಾಷೆ, ಪ್ರತಿಷ್ಠೆ, ಎಲ್ಲಕ್ಕಿಂತಲೂ
ಬದುಕೇ ಮುಖ್ಯ.
ಇನ್ನಷ್ಟು
ನಕಲಿಗೆ
ಹಾಳಾದ ಅಸಲೀ ಸಮಯ
ಇತಿಹಾಸದ
ಗಾಯ ಕೆರೆಯುವ ಮುನ್ನ
ಎಲ್ಲ
ತತ್ವದ ಎಲ್ಲೆ ಮೀರಿ...
ಮಾಗಿದ
ಮನಸ್ಸು; ಹರೆಯದ ಹುಮ್ಮಸ್ಸು
ಸಿದ್ಧರಾಮಯ್ಯ
ಕಷ್ಟಗಳು ನೂರೆಂಟು...
ಹೊನ್ನ
ರಾಶಿಯಲ್ಲ; ಬೊಗಸೆ ಪ್ರೀತಿ
ನಿಮ್ಮ
ಪತ್ರಿಕೆಯ ಸ್ಪೆಷಾಲಿಟಿ ಏನು?
ಹಾರುವ
ಕುದುರೆಯ ಬೆನ್ನ ಏರಿ ...