ಸಿದ್ಧರಾಮಯ್ಯ ಕಷ್ಟಗಳು ನೂರೆಂಟು...
(೧೫ ಸೆಪ್ಟೆಂಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಇದು ನಿಜವಿರಬಹುದು.
ಅವತ್ತು ಹೀಗೇ ನಡೆದ ಒಂದು ಚರ್ಚೆಯಲ್ಲಿ ಬರಹಗಾರ, ವಿಮರ್ಶಕ
ಡಾ.ಕೆ.ಎಂ. ಮರುಳಸಿದ್ಧಪ್ಪ ಒಂದು ಮಾತು ಹೇಳಿದರು: `ಒಂದು
ಕಾಲದಲ್ಲಿ ದೇವರಾಜ ಅರಸರಿಗೆ ಯಾವ ರೀತಿಯ ಮನ್ನಣೆ ಇತ್ತೋ ಆ
ಮನ್ನಣೆ ಇವತ್ತು ಸಿದ್ಧರಾಮಯ್ಯ ಅವರಿಗಿದೆ. ಜನನಾಯಕನೊಬ್ಬ ವ್ಯಕ್ತ್ತಿಗತವಾಗಿ
ಸಂಪಾದಿಸುವ ವರ್ಚಸ್ಸು ಅದು. ಹಾಗಾಗಿ ನಮಗೆ ಇವತ್ತು
ಸಿದ್ಧರಾಮಯ್ಯ ಬಹುಮುಖ್ಯರಾಗಿ ಕಾಣುತ್ತಾರೆ.
ಅಲ್ಲಿ ಹಲವರಿದ್ದರು, ಬುದ್ಧಿಜೀವಿಗಳೇ
ಬಹುಪಾಲು. ದೇವನೂರು, ಪುಟ್ಟಣ್ಣಯ್ಯ, ಶೂದ್ರ ಶ್ರೀನಿವಾಸ್, ಕೇಶವರೆಡ್ಡಿ
ಹಂದ್ರಾಳ, ಎನ್.ಎಸ್. ಶಂಕರ್, ಇಂದೂಧರ ಹೊನ್ನಾಪುರ, ಅಗ್ನಿ
ಶ್ರೀಧರ್, ಬಸವಲಿಂಗಯ್ಯ - ಹೀಗೆ ಬೇರೆ ಬೇರೆ ಕ್ಷೇತ್ರದ
ಚಿಂತಕರಿದ್ದರು. ಕರ್ನಾಟಕದಲ್ಲಿ ಮೂರನೇ ಶಕ್ತಿಯೊಂದರ
ರಾಜಕೀಯ ಸಾಧ್ಯತೆಗಳ ಜೊತೆಗೆ ಪ್ರಸಕ್ತ ರಾಜಕಾರಣದ ಬದಲಾದ ಸನ್ನಿವೇಶದ
ಕುರಿತು ಗಂಭೀರ ಮಾತುಕತೆ ನಡೆದಿತ್ತು.
ಈ ಚರ್ಚೆ ನಡೆದ ದಿನ
ಸಿದ್ಧರಾಮಯ್ಯ ವಿಧ್ಯುಕ್ತವಾಗಿ ಕಾಂಗ್ರೆಸ್ ಪಕ್ಷವನ್ನು ಸೋನಿಯಾ
ಸಮ್ಮುಖದಲ್ಲಿ ಸೇರುವವರಿದ್ದರು. ಕಾರ್ಯಕರ್ತರನ್ನು ಹೊತ್ತು
ತರುವ ಬಸ್ಸುಗಳ ಭರಾಟೆಯ ನಡುವೆ ಇಂಥದೊಂದು ಚರ್ಚೆ ಸಾಗಿತ್ತು.
ಮರುಳಸಿದ್ಧಪ್ಪನವರ ಮಾತಿಗೆ ಕೆಲವರು ಹೌದೆಂದರು; ಇನ್ನೂ
ಕೆಲವರು ಅದನ್ನೇ ತುಸು ಬದಲಾಯಿಸಿದರು. ಆ ಕಾರಣ ಕಾಂಗ್ರೆಸ್ ಪಕ್ಷದ
ಮೇಲೆ ನಿರಂತರವಾಗಿ ಹೊಗೆಯಾಡಿದ ಸಿಟ್ಟು.
ಅದೇನೇ ಇರಲಿ, ಇವತ್ತು
ಸಿದ್ಧರಾಮಯ್ಯ ಕಾಂಗ್ರೆಸ್ ದಡ ಸೇರಿದ್ದರೂ ಅವರ ಕಷ್ಟಗಳು ಹಲವಾರು.
ಅವರು ನಂಬಿರುವ ಸೈದ್ಧಾಂತಿಕ ನಿಲುವುಗಳು ಇನ್ನು ಅವರವಲ್ಲ.
ಅವರ ಹೋರಾಟದ ಹಾದಿ ಇನ್ನು ಅವರದಲ್ಲ; ಹಾಗೆಯೇ ಇದುವರೆಗೆ
ಅವರು ಕಾಪಾಡಿಕೊಂಡು ಬಂದಿರುವ ವ್ಯಕ್ತಿತ್ವದ ಬಹುಪಾಲು ಅವರದಾಗಿ
ಉಳಿಯಲು ಸಾಧ್ಯವಿಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಜನಾಂಗದ ನಾಯಕ
ಎಂದು ಬಿಂಬಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಸಿದ್ಧರಾಮಯ್ಯ
ಅವರದು.
ಇದೆಲ್ಲವನ್ನೂ ಕಳೆದ ಭಾನುವಾರದ
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಸಾರಿ ಹೇಳುವಂತಿತ್ತು.
ಸಿದ್ಧರಾಮಯ್ಯನವರಂಥ ನಾಯಕ ಇವತ್ತು ದೇವರಾಜ ಅರಸರಂತೆ
ಖಚಿತ ರಾಜಕೀಯ ಧೋರಣೆ ತಳೆಯುವ ಅನಿವಾರ್ಯತೆ
ಅವರೊಳಗಿಂದಲೇ ಆರಂಭವಾಗಬೇಕಿದೆ. ನಿಜಲಿಂಗಪ್ಪನವರಿಗೆ ಕರ್ನಾಟಕ
ಏಕೀಕರಣದ ಬದ್ಧತೆ ಇದ್ದಂತೆಯೇ ದೇವರಾಜ ಅರಸರಿಗೆ ಬಲಾಢ್ಯ
ಕೋಮುಗಳ ಪ್ರಾಬಲ್ಯ ಮುರಿಯುವುದರ ಮೂಲಕ ಹಿಂದುಳಿದವರಿಗೆ
ಪ್ರಾತಿನಿಧ್ಯ ನೀಡುವ ಛಲವಿತ್ತು.
ಈಗ ಸಿದ್ಧರಾಮಯ್ಯ ಅಂಥ
ರಾಜಕೀಯ ಇಚ್ಛಾಶಕ್ತಿಯನ್ನು ರೂಪುಗೊಳಿಸಿಕೊಳ್ಳುವ ಅಗತ್ಯ
ಅವರಿಗಿದೆ. ಒಂದೇ ಒಂದು ವ್ಯತ್ಯಾಸ ಎಂದರೆ, ನಿಜಲಿಂಗಪ್ಪ ಹಾಗೂ
ದೇವರಾಜ ಅರಸು ಕಾಂಗ್ರೆಸ್ ಒಳಗಿಂದಲೇ ಬೆಳೆದವರು.
ಸಿದ್ಧರಾಮಯ್ಯ ಈಗತಾನೆ ಕಾಂಗ್ರೆಸ್ ಸಾಗರಕ್ಕೆ ಧುಮುಕಿದವರು.
ಕಾಂಗ್ರೆಸ್ ಎಷ್ಟು ದೊಡ್ಡ ಪಕ್ಷ ಎಂದರೆ ಇಲ್ಲಿ ಮಹಾನ್ ನಾಯಕರಾಗಿ
ಬೆಳೆದವರಂತೆಯೇ ಹೇಳಹೆಸರಿಲ್ಲದೆ ಅಧಃಪತನವಾದವರೂ
ಇದ್ದಾರೆ. ವ್ಯಕ್ತಿಪೂಜೆಗೆ ಬೆಲೆ ಇರುವಂತೆಯೇ ಪಕ್ಷದ ಮುಂದೆ
ಯಾರೂ ದೊಡ್ಡವರಲ್ಲ ಎಂಬ ನಿಯಮಾವಳಿಗೆ ಸಿಲುಕಿ ನಾಶವಾದವರ ನಿದರ್ಶನಗಳೂ
ಇವೆ.
ಹಾಗಾಗಿ ಸಿದ್ಧರಾಮಯ್ಯ ಸುರಕ್ಷಿತ ದಡ ಸೇರಿದಂತೆ
ಕಂಡರೂ ಸಾಕಷ್ಟು ಅಡ್ಡಗಾಲುಗಳನ್ನು ದಾಟಿ ಹೋಗಬೇಕಿದೆ. ಪಕ್ಷದ
ಹೊರಗಿನಿಂದ ಹೇಗೋ, ಒಳಗಿನಿಂದಲೂ ಅಡೆತಡೆಗಳು ನೂರಾರಿವೆ...
ಅವರ ಅಗ್ನಿಪರೀಕ್ಷೆ ಈಗ ಆರಂಭವಾಗಿದೆ.
ಇನ್ನಷ್ಟು
ಹೊನ್ನ
ರಾಶಿಯಲ್ಲ; ಬೊಗಸೆ ಪ್ರೀತಿ
ನಿಮ್ಮ
ಪತ್ರಿಕೆಯ ಸ್ಪೆಷಾಲಿಟಿ ಏನು?
ಹಾರುವ
ಕುದುರೆಯ ಬೆನ್ನ ಏರಿ ...