`ಕನ್ನಡಕ್ಕೆ ಇಂಥ ದುಬಾರಿ ಪತ್ರಿಕೆ
ಬೇಕೆ?'

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಎರಡು
ವಾರಗಳ ಹಿಂದೆ `ಮುಗಿದ ಐತಿಹಾಸಿಕ ಯುಗ' ಸಂಚಿಕೆ ಹೊರಬಿದ್ದಾಗ ನಮ್ಮ
ನಿರೀಕ್ಷೆಗೂ ಮೀರಿದ ಅಚ್ಚರಿ ಬಂದುದು ಓದುಗರಿಂದ. ಡಾ. ರಾಜ್ ಮತ್ತು
ಭಾರತಿಯವರ ಕಪ್ಪುಬಿಳುಪಿನ ಆ ಚಿತ್ರ ಕಂದು ಬಣ್ಣದ ಛಾಯೆಯಲ್ಲಿ
ಕಂಗೊಳಿಸಿದಾಗ ಹಲವು ಓದುಗರಿಗೆ ಆ ಕಾಲದ ನೆನಪಾಗಿರಬೇಕು. `ಕೃಷ್ಣದೇವರಾಯ'
ಚಿತ್ರ ನೀಡಿದ ಆ ಭಾವನಾತ್ಮಕ ಸಂವೇದನೆಯೇ ಅಂಥದು. ರಾಜ
ಅಂದರೆ ಹೀಗಿರಬೇಕು; ರಾಣಿಯರ ವೈಭವ ಕಣ್ಣು
ಕುಕ್ಕುವಂತಿರಬೇಕು; ಸಕಲ ವಿದ್ಯಾಪಾರಂಗತನಾದ ಮಂತ್ರಿ ಚಾಣಾಕ್ಷನಾಗಿರಬೇಕು
- ಹೀಗೆ ಒಂದು ಕಾಲದ ಆದರ್ಶವನ್ನು ಬಹಳಷ್ಟು ಜನ ನೆನಪು ಮಾಡಿಕೊಂಡು
ಮಾತನಾಡಿದರು.
ನೋಡುಗರ
ಜತೆ ಆತ್ಮೀಯತೆಯ ಬಂಧ ಬೆಸೆಯುವ ಪಂತುಲು ಅವರಂಥ ಜಾಣ ನಿರ್ದೇಶಕ
ಹಾಗೆಯೇ ಅವರ ಶಿಷ್ಯ ಪುಟ್ಟಣ್ಣ ಕಣಗಾಲ್ ಅವರನ್ನೂ ನೆನೆದವರು
ಬಹಳ ಮಂದಿ. ಆ ಲೇಖ
ದಲ್ಲಿ ಬಿಟ್ಟುಹೋದ `ಒನಕೆ ಓಬ್ಬವ್ವ'ನ ಪ್ರಸಂಗವೇ
ಇದಕ್ಕೆ ಕಾರಣ.
ನಿಜ. `ನಾಗರಹಾವು' ಚಿತ್ರದಲ್ಲಿ
ಇಡೀ ಚಿತ್ರ ಒಂದು ತೂಕವಾದರೆ, ಚಿತ್ರದುರ್ಗದ ಕೋಟೆ ಮತ್ತು ಒನಕೆ
ಓಬವ್ವನ ಹಾಡು ಹಾಗೂ ಚಿತ್ರಣ ಇನ್ನೊಂದು ತೂಕ. ಚಿತ್ರದುರ್ಗದ
ಕೋಟೆ ಹೇಗೆ ಚಿತ್ರದ ಒಂದು ಪಾತ್ರವಾಯಿತೋ ಹಾಗೆ ಓಬವ್ವನ ಆ ಕಥನ
ಕವನ ನೀಡಿದ ಅನುಭವ ಎಂದು ಮರೆಯದಂಥದು. ಬಹುಶಃ ನಾವು
ಕಿತ್ತೂರು ಚೆನ್ನಮ್ಮ, ಕೃಷ್ಣದೇವರಾಯನನ್ನು ಸರೋಜಾದೇವಿ,
ರಾಜ್ಕುಮಾರ್
ಮುಖದಲ್ಲಿ ಕಂಡರೆ, ಓಬವ್ವನನ್ನು ಜಯಂತಿಯಾಗಿಯೇ
ನೆನಪಿಟ್ಟುಕೊಳ್ಳುತ್ತೇವೆ.
ಇದನ್ನೆಲ್ಲ ನೆನಪಿಸಲು
ಕಾರಣವಿದೆ. ನಮ್ಮೆಲ್ಲರ ಬರಹಗಳಿಗಿಂತಲೂ ಓದುಗರ
ತಿಳುವಳಿಕೆ
ಅಗಾಧವಾದುದು. ಅವರ ನೆನಪಿನ ಶಕ್ತಿ, ಅಳೆಯುವ ಗುಣ, ಪತ್ರಿಕೆಯ
ಅಂತಃಸ್ಸತ್ವವನ್ನು ತೂಗಿ ನೋಡುವ ಖಚಿತತೆ ಅಪ್ರತಿಮವಾದುದು.
ಸಿನಿಮಾಗೆ ಸಂಬಂಧಿಸಿದ ಆ ಸಂಚಿಕೆ ಬರುವ ಮೊದಲೇ ಅವರು ಬೇರೆ ಬೇರೆ
ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು. ಒಂದೊಂದು ಸಂಚಿಕೆಯ ಬಗ್ಗೆಯೂ
ಮೆಚ್ಚುಗೆ, ಸಲಹೆ, ಮಾತುಕತೆ, ಪ್ರೋತ್ಸಾಹ, ಟೀಕೆ ಆರಂಭದ ಸಂಚಿಕೆಯಿಂದಲೂ
ನಿರಂತರವಾಗಿ ನಡೆದು ಬಂದಿದೆ. ಮೆಚ್ಚಿದಾಗ ಇನ್ನಷ್ಟು ಒಳ್ಳೆಯದಾಗಿ
ರೂಪಿಸುವ; ಟೀಕಿಸಿದಾಗ ತಪ್ಪನ್ನು ಸರಿಪಡಿಸಿಕೊಳ್ಳುವ; ಸಲಹೆ ಮಾಡಿದಾಗ
ಮೌನವಾಗಿ ಸ್ವೀಕರಿಸುವ; ಬೆನ್ನು ತಟ್ಟಿದಾಗ ಖುಷಿಪಡುವ ನಮ್ಮ
ಬಳಗಕ್ಕೆ ಅಂದಿನಿಂದಲೂ ಎದುರಾಗುತ್ತಿರುವುದು ಒಂದು `ಸಾಮಾನ್ಯ' ಪ್ರಶ್ನೆ;
`ಕನ್ನಡಕ್ಕೆ ಇಂಥ ದುಬಾರಿ ಪತ್ರಿಕೆ ಬೇಕೆ?'
ಈ ಪ್ರಶ್ನೆ ಬಂದಾಗೆಲ್ಲ ಸಹಜವಾಗಿ
ಮಾತು ನಿಲ್ಲುತ್ತಿತ್ತು. ಒಂದೇ ಪ್ರಶ್ನೆಯಲ್ಲೇ ಎರಡು ಪ್ರಶ್ನೆಗಳು:
ಇಂಥ ದುಬಾರಿ ಪತ್ರಿಕೆ ಬೇಕಿತ್ತ? ಅದರಲ್ಲೂ ಕನ್ನಡಕ್ಕೆ ಇಂಥದು ಬೇಕಿತ್ತ?-
ವಾರದ ಹಿಂದೆ ಕನ್ನಡದ ಖ್ಯಾತ ರಂಗಭೂಮಿ ನಟ ಸಿ.ಆರ್. ಸಿಂಹ
ಕೂಡ ಇದೇ ಪ್ರಶ್ನೆ ಕೇಳಿದ್ದರು.
ಇಲ್ಲಿ ಬೇರೆ ಯಾವ
ಒಳಅರ್ಥವನ್ನೂ ಹುಡುಕುವ ಅಗತ್ಯವಿಲ್ಲ. `ಪತ್ರಿಕೆ ಮಾಡುವುದೆಂದರೆ
ಕೈಸುಟ್ಟುಕೊಳ್ಳುವ ಕೆಲಸ, ಮತ್ತೆ ನಾವೆಲ್ಲ ದುಸ್ಸಾಹಸಕ್ಕೆ ಕೈಹಾಕಿ
ನೋವು ಅನುಭವಿಸಿದರೇ' ಎಂಬುದಷ್ಟೇ ಇಲ್ಲಿನ ಅರ್ಥ. ಆದಷ್ಟು ಖರ್ಚು
ಕಡಿಮೆ ಮಾಡಿ, ಪತ್ರಿಕೆ ಒಂದು ಹಂತ ತಲುಪಿದೆ ಮೇಲೆ ದುಬಾರಿ ಸಾಹಸ
ಮಾಡಬಹುದಿತ್ತು ಎನ್ನುವುದು ಅವರ ಕಾಳಜಿ ಎಂಬುದು ನಮಗೂ
ಗೊತ್ತು.
ಸಿಂಹ ಹೇಳಿದ್ದಾಗಲೀ ಬೇರೆ
ಓದುಗರ ಆತಂಕದ ಮಾತುಗಳಾಗಲಿ ಸುಳ್ಳಲ್ಲ. ನಮ್ಮ ಪತ್ರಿಕೆಯ
ಮಾರುಕಟ್ಟೆಯ ಬೆಲೆಗೂ ನಾವು ಮಾರುವ ಬೆಲೆಗೂ ಸಂಬಂಧವೇ
ಇಲ್ಲ. ಪ್ರತಿ ಸಂಚಿಕೆಯ ಪ್ರತಿಯೊಂದು ಪ್ರತಿಯ ಮೇಲೂ ನಾವು ಸುಮಾರು
ಐದೂವರೆ ರೂಪಾಯಿಗಳಷ್ಟು ಕಳೆದುಕೊಳ್ಳುತ್ತಿದ್ದೇವೆ. ಆದರೆ ಈ ನಷ್ಟವನ್ನು
ಜಾಹೀರಾತಿನ ಮೂಲಕ ತುಂಬಿಕೊಂಡು ಓದುಗರಿಗೆ ಹೊರೆಯಾಗದ ಸುಂದರ
ಪತ್ರಿಕೆ ನೀಡುವ ಸಂಕಲ್ಪ ನಮ್ಮದು.
`ವಿಕ್ರಾಂತ ಕರ್ನಾಟಕ'ವೆಂಬ ವಾರಪತ್ರಿಕೆಯನ್ನು
ತರಲೇಬೇಕೆಂದು ನಾವು ನಿರ್ಧರಿಸಿದಾಗ ಮೊದಲು ನಮ್ಮ ಎದುರಿದ್ದ ಪತ್ರಿಕೆಯ
ಸ್ವರೂಪ ಇದೇ. `ಗುಣಮಟ್ಟದಲ್ಲಾಗಲಿ, ಹೂರಣದಲ್ಲಾಗಲಿ, ವಿನ್ಯಾಸದಲ್ಲಾಗಲೀ
ಯಾವುದೇ ರಾಜಿ ಬೇಡ; ಜನರ ಕೈಸುಡುವಷ್ಟು ದುಬಾರಿ ಬೇಕಿಲ್ಲ'
ಎಂಬ ತೀರ್ಮಾನದೊಂದಿಗೆ ಬೇರೆಬೇರೆ ರೀತಿಯಲ್ಲಿ ಸಿದ್ಧರಾದೆವು. ನಮ್ಮ
ಯೋಚನೆ ಇದ್ದುದು, ಎಲ್ಲರ ಮನೆಯ ಟೀಪಾಯಿಯ ಮೇಲೆ ನಮ್ಮ
ಸುಂದರ ಮ್ಯಾಗಜಿನ್ ಇಡುವಂತಿರಬೇಕು. ಮಕ್ಕಳಿಂದ
ದೊಡ್ಡವರವರೆಗೆ ಓದುವಂತಿರಬೇಕು.
ತೇಜಸ್ವಿಯವರು
ಹೇಳುವಂತೆ `ಪತ್ರಿಕೆಗೆ ಯಾವತ್ತೂ
ಇದರ ನಡುವೆ ಕನ್ನಡಕ್ಕೆ
ಇಂಥದೊಂದು ಪತ್ರಿಕೆಯ ಅಗತ್ಯವಿತ್ತು ಎಂಬ ನೂರಾರು ಕರೆಗಳು ಪ್ರತಿದಿನ
ನಮ್ಮ ಕಚೇರಿಯೊಳಗೆ ಪ್ರತಿಧ್ವನಿಸುತ್ತಿವೆ. ಇಲ್ಲಿ ಅಂಥ ಪತ್ರವೊಂದಿದೆ.
ಬೆಂಗಳೂರಿನ ಹೊಸಕೆರೆಹಳ್ಳಿಯ ಎನ್. ಗೋಪಾಲ್ ರಾವ್ ಅವರ ಪತ್ರ
ಇದು:
ಮಾನ್ಯರೇ,
ಇಷ್ಟು ಒಳ್ಳೆಯ ನುಣುಪಿನ ಹಾಳೆಯಲ್ಲಿ ಒಂದು ಕನ್ನಡ ವಾರಪತ್ರಿಕೆ
ಓದಿ ಸಂತಸವಾಯಿತು. `ಮುಗಿದ ಐತಿಹಾಸಿಕ ಯುಗ' ಲೇಖನ ಸಮಯೋಚಿತವಾಗಿದೆ.
ಪ್ರಸ್ತುತ ಈ ಪತ್ರಿಕೆಯು ಹೆಚ್ಚು ರಾಜಕೀಯ ಸುದ್ದಿಗಳೊಂದಿಗೆ
ತುಂಬಿದೆ. ಕನ್ನಡದಲ್ಲಿ ಇಂತಹ ಪತ್ರಿಕೆಗಳು ಅತಿ ಕಡಿಮೆ. ಕರ್ನಾಟಕದಾದ್ಯಂತ
ಕನ್ನಡಿಗರು ಈ ಪತ್ರಿಕೆಯನ್ನು ಕೊಂಡು-ಓದಿ ಯಶಸ್ವಿ ಪತ್ರಿಕೆಯನ್ನಾಗಿ
ಮಾಡಲೆಂದು ಹಾರೈಸುವೆ.
ಕೊಲೆಗಡುಕ ಮನಸ್ಸು
ಒಂದು ವಾರದಿಂದ
ಬೆಂಗಳೂರು ತತ್ತರಿಸಿದೆ. ದಿನಕ್ಕೆ ಎರಡು-ಮೂರು ಹೆಣಗಳು
ಉರುಳುತ್ತ, ನಾಗರಿಕರ ಪಾಲಿಗೆ ನರಕವಾಗುತ್ತಿದೆ. ಪ್ರತಿ ಆಫೀಸು,
ಮನೆ, ನಗರ ಸಾರಿಗೆ ಬಸ್ಸುಗಳಲ್ಲಿ, ಆಟೋಗಳಲ್ಲಿ ಇದೇ ಮಾತು,
ದಿನಂಪ್ರತಿ ಕೊಲೆಯ ಸುದ್ದಿ, ಚಿತ್ರ ಹೊತ್ತ ಪತ್ರಿಕೆಗಳು
ಬೆಳ್ಳಂಬೆಳಗ್ಗೆಯೇ ಜನರನ್ನು ತಲ್ಲಣದಲ್ಲಿ ನೂಕುತ್ತಿವೆ.
ಕಳೆದ ಒಂದೂವರೆ ವರ್ಷದ
ಬೆಂಗಳೂರನ್ನು ಗಮನಿಸಿದರೆ ಇದರ ಹಿನ್ನೆಲೆ ಅರ್ಥವಾಗುತ್ತದೆ.
ರಾಜಕಾರಣಿಗಳು, ಪೊಲೀಸರು, ಐಎಎಸ್ ಅಧಿಕಾರಿಗಳು ಹಾಗೂ
ಗೂಂಡಾಗಳು - ಇವರ ನಡುವೆ ಬೆಳೆದ ಅಂತರಂಗದ ಬೆಸುಗೆಯೇ
ಇದಕ್ಕೆ ಕಾರಣ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಸುಗುಟ್ಟುತ್ತಾರೆ.
ಇದು ಎಷ್ಟರಮಟ್ಟಿಗೆ ನಿಜ ಎಂಬುದಕ್ಕೆ ರಾಜಾರೋಷವಾಗಿ ನಾಗರಿಕರ ಹತ್ಯೆ
ನಡೆಯುತ್ತಿರುವುದೇ ಉದಾಹರಣೆ.
ಪೊಲೀಸರ ಪ್ರಕಾರ ಭೂಗಳ್ಳತನ ಅಥವಾ ಭೂಮಾಫಿಯಾ
ಇದಕ್ಕೆ ಕಾರಣ. ಇದರ ಜೊತೆಗೇ ಕೇಬಲ್ ದಂಧೆಯ ಹಿಂದೆ ಇರುವ
ಗೂಂಡಾಗಳ ಸ್ವೇಚ್ಛಾವರ್ತನೆಯೂ ಈ ಕೊಲೆಗಡುಕತನಕ್ಕೆ
ಕಾರಣವಂತೆ. ಈ ಕೇಬಲ್ ಮಾಫಿಯಾದ ಹಿಂದೆ ಅಧಿಕಾರಿಗಳಿರುವುದು;
ಅವರನ್ನು ಪೊರೆಯುವ ರಾಜಕಾರಣಿಗಳಿರುವುದು ಯಾರಿಗೂ
ತಿಳಿಯದ ಸಂಗತಿಯೇನಲ್ಲ.
ಕೇವಲ ಎರಡು ವರ್ಷದಿಂದ ಬೆಂಗಳೂರಿನ ನೆಲಕ್ಕೆ
ಚಿನ್ನದ ಬೆಲೆ ಬಂದಿದೆ. ಬೆಂಗಳೂರು ಹೊರಗಿನಿಂದ ಬಂದ ವಲಸಿಗರ ಪಾಲಾಗುತ್ತಿದೆ
ಎಂಬ ಕೂಗು ಎಷ್ಟು ನಿಜವೋ ಇಲ್ಲಿಯ ನಾಗರಿಕರಿಗೆ ಪುಟ್ಟದೊಂದು ಸೂರು
ಕಟ್ಟಿಕೊಳ್ಳುವ ಆಸೆ ಇರುವುದೂ ಅಷ್ಟೇ ಸಹಜ. ಆದರೆ ಮಂತ್ರಿಗಳ, ಅಧಿಕಾರಿಗಳ ಭ್ರಷ್ಟತೆ, ನೆಲಕಬಳಿಕೆಯ ದಾಖಲೆಗಳು
ನಗ್ನಸತ್ಯಗಳಾಗಿ ಹೊರಬಿದ್ದು ಜನರನ್ನು ದಿನನಿತ್ಯ ಕಾಡುತ್ತಿರುವಾಗ
ಸಾಮಾನ್ಯರು ಯಾರ ಬಳಿ ಮೊರೆಯಿಡಬೇಕು?
ಪತ್ರಿಕೆಗೆ ಬಂದ ಒಂದು ಪತ್ರದ
ಒಕ್ಕಣೆ ಹೀಗಿದೆ; `ಸಚಿವ ಚೆನ್ನಿಗಪ್ಪರಂಥವರನ್ನು ನಾವು ಇನ್ನೆಷ್ಟು
ದಿನ ಸಹಿಸಬೇಕು? ನಾವು ಇಷ್ಟೊಂದು ಅಸಹಾಯಕರಾಗುವ ಅನಿವಾರ್ಯತೆ
ಇದೆಯೇ?'
- ಇದಕ್ಕೆ ವಿವರಣೆ ಬೇಕಿಲ್ಲ
ಅಲ್ಲವೇ?
ಬೆಳಕಿನ ಹಬ್ಬಕ್ಕೆ ವಿಶೇಷ ಸಂಚಿಕೆ
ಕನಿಷ್ಠ ಪತ್ರಿಕೆಗೆ ಒಂದು ವರ್ಷವಾದರೂ
ತುಂಬಬೇಕು. ಹಾಗಂತ ಯಾವ ನಿಯಮಾವಳಿಯೇನೂ ಇಲ್ಲ. ಸಾಮಾನ್ಯವಾಗಿ
ಒಂದು ವರ್ಷ ತುಂಬಿದ ಪತ್ರಿಕೆ ಮಾತ್ರ ವಿಶೇಷ ಸಂಚಿಕೆಯ ಬಗ್ಗೆ
ಯೋಚಿಸಲು ಸಾಧ್ಯ. ನಮ್ಮ ನಿಮ್ಮ ಪತ್ರಿಕೆ ಇದೇ ದೀಪಾವಳಿಗೆ ವಿಶೇಷ
ಸಂಚಿಕೆಯೊಂದನ್ನು ಹೊರತರಲಿದೆ. ಇದು ಮತ್ತೊಂದು ದುಸ್ಸಾಹಸ
ಅನ್ನಿಸಬಹುದು. ಆದರೆ ಅದಕ್ಕೆ ಕಾರಣಕರ್ತರು ನೀವು.
ಪತ್ರಿಕೆಗೆ ಬಂದ ಈ ಒಂದು ಬೆಂಬಲವೇ
ನಮ್ಮನ್ನು ಮೂರೇ ತಿಂಗಳಲ್ಲಿ ವಿಶೇಷ ಸಂಚಿಕೆಯನ್ನು ರೂಪಿಸಲು ಹುರುಪುಗೊಳಿಸಿದ್ದು.
ನಿಜ. ಈ ಬಾರಿಯ ದೀಪಾವಳಿಗಾಗಿ ಪತ್ರಿಕೆ ಹೆಚ್ಚು ಪುಟಗಳುಳ್ಳ ವಿಶೇಷಾಂಕವನ್ನು
ಹೊರತರಲಿದೆ. ಸುಮಾರು ನೂರು ಪುಟಗಳಿಗೂ ಹೆಚ್ಚು ವರ್ಣರಂಜಿತ
ಪುಟಗಳಿದ್ದರೂ ಅದರ ಬೆಲೆಯಲ್ಲಿ ಹೆಚ್ಚಳ ಇರುವುದಿಲ್ಲ.
ಅದರ ಬದಲಿಗೆ ನೀವೆಲ್ಲರೂ ಈ
ದೀಪಾವಳಿ ಸಂಚಿಕೆಯಲ್ಲಿ ಪಾಲುಗೊಳ್ಳಬೇಕು. ಲೇಖಕರಾಗಿ, ಕವಿಗಳಾಗಿ,
ಕತೆಗಾರರಾಗಿ... ಹೀಗೆ ಎಲ್ಲ ರೀತಿಯಲ್ಲೂ ನಿಮ್ಮ ಭಾಗವಹಿಸುವಿಕೆ
ಅತ್ಯಂತ ಅಗತ್ಯ. ಯುವಕ ಯುವತಿಯರಿಗೆಂದೇ `ಎಸ್ಎಂಎಸ್ ಪ್ರಣಯ'
ಎಂಬ ಅಂಕಣವಿರುತ್ತದೆ. ಭಾವಚಿತ್ರದೊಂದಿಗೆ ನಿಮ್ಮ ಪ್ರಣಯ ವಿಹಾರವನ್ನು
ದಾಖಲಿಸಬಹುದು. ಹಾಗೆಯೇ ಓದಿನ ಜೊತೆಗೇ ಗಳಿಸುವ ವಿದ್ಯಾರ್ಥಿಗಳಿಗೆ
`ಕಲಿಕೆಯ ಜೊತೆಗೆ ಗಳಿಕೆ' ಅಂಕಣವಿದೆ.
ಇದೆಲ್ಲದರ ಜೊತೆ ಮಹಿಳೆಯರಿಗಾಗಿ, ಅದರಲ್ಲೂ
ಮನೆಯ ಹೊರಗೂ ಒಳಗೂ ದುಡಿಯುವ ಹೆಂಗೆಳೆಯರಿಗಾಗಿ ಒಂದು
ವಿಶೇಷ ಅಂಕಣವಿದೆ. `ಒತ್ತಡದ ಬದುಕಿಗೊಂದು ಸಾಂತ್ವನ'. ಸೆಪ್ಟೆಂಬರ್
೩೦ರ ಒಳಗೇ ನಿಮ್ಮ ಲೇಖನ, ಬರಹ, ನಮ್ಮ ಕೈಸೇರಿದರೆ ಉತ್ತಮ
ಸಂಚಿಕೆ ರೂಪಿಸಲು ನೆರವಾದಂತಾಗುತ್ತದೆ.
ಇದೆಲ್ಲದರ ಜೊತೆ
ಅತ್ಯುತ್ತಮ ಕತೆ, ಕಾವ್ಯ, ಸುಂದರ ಚಿತ್ರಗಳು, ನಗೆ ಉಕ್ಕಿಸುವ ಹಾಸ್ಯ
ಬರಹಗಳು, ಚುಟುಕ... ಸಿನಿಮಾ - ಹೀಗೆ ದೀಪಾವಳಿಯ ಸುಂದರಿ ನಿಮ್ಮ
ಮನೆ, ಮನವನ್ನು ತುಂಬಲಿದ್ದಾಳೆ.
ನೀವೇನಂತೀರಿ?
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ