ಸೋನಿಯಾ ಮೇಡಂ ಕಾಯುತ್ತಲೇ ಇದ್ದರು.
ಕರ್ನಾಟಕಕ್ಕೆ ಮಂತ್ರಿಗಳ ಓರಲ್ ಪರೀಕ್ಷೆಗೆಂದು ಹೋದವರು ಇನ್ನೂ
ಮಾವನ ಮನೆಯ ಔತಣದ ಮೋಜು ಮಾಡುವವರಂತೆ ಅಲ್ಲೇ
ಠಿಕಾಣಿ ಹೂಡಿದ್ದರು. ಒಬ್ಬರೂ ಬಂದಿರಲಿಲ್ಲ. ಆ ಗುಲಾಂ ನಬಿಯಾದರೂ
ಒಂಚೂರು ಮೋಜಿನ ಮನುಷ್ಯನಾಗಿದ್ದರಿಂದ ಅವರ ಸ್ವಭಾವ ಮೇಡಮ್ಗೆ
ಮೊದಲೇ ತಿಳಿದಿತ್ತು. ಹಿಂದೆ ಕೃಷ್ಣರನ್ನು ಮುಖ್ಯಮಂತ್ರಿ ಮಾಡಲು ಹೋದವರು
ತಿಂಗಳಾದರೂ ವಾಪಸು ಬಂದಿರಲಿಲ್ಲ. ಬರುವಾಗ ಅವರ ತೂಕ ಹನ್ನೆರಡು
ಕೇಜಿ ಜಾಸ್ತಿಯಾಗಿತ್ತು. ಅವರ ವಿಚಾರ ಹಾಗಿರಲಿ, ಈ ಶಾಸ್ತ್ರೀಗೇನಾಗಿದೆ?
ಎಂದು ಅವರು ಚಡಪಡಿಸತೊಡಗಿದರು. ಇವರು ಹೀಗೇ ಮಾಡುತ್ತಿದ್ದರೆ
ಪಾರ್ಟಿಯ ಗತಿ ಏನು ಎಂಬುದು ಮೇಡಂ ಆತಂಕ.
ಅಷ್ಟರಲ್ಲಿ ಒಂದೊಂದೇ ಸೂಟ್ಕೇಸುಗಳು
ಬರಲಾರಂಭಿಸಿದವು. ಅವುಗಳ ಮೇಲೆ ವಿದೇಶಕ್ಕೆ ಹೋಗಿ ಬಂದವರ ಲಗ್ಗೇಜಿಗೆ
ಹಾಕುವ ಹಾಗೆ ಲೇಬಲ್ಲುಗಳು! ಖರ್ಗೆ, ಕೃಷ್ಣ, ಶಿವಕುಮಾರ್, ಮೋಟಮ್ಮ,
ಶ್ರೀಕಂಠಯ್ಯ, ಚಿಂಚನಸೂರ್, ಮಲಕ ರೆಡ್ಡಿ... ಹೀಗೆ ಹೆಸರುಗಳು
ಕೊನೆಯದಾಗಿ ಬಂದವರು ಗುಲಾಂ ನಬಿ ಆಜಾದ್.
`ನಬೀ, ಏ ಸಬೀ ಕ್ಯಾ ಹೈ?' ಮೇಡಂ ಏನೂ
ಅರ್ಥವಾಗದೇ ಕೇಳಿದರು.
`ನೀವು ಈಗ ತಾನೆ ಕಾಂಗ್ರೆಸ್ ಅಧ್ಯಕ್ಷರಾಗಿ
ಆಯ್ಕೆಯಾಗಿದ್ದೀರಿ ಮೇಡಂ, ನಿಮಗೇನೂ ಅರ್ಥವಾಗಲ್ಲ. ಇವೆಲ್ಲ ಆನ್ಸರ್
ಬುಕ್ಗಳು. ಈಗ ನಾವು ಇವನ್ನು ವಾಲ್ಯುವೇಷನ್ ಮಾಡಿ ಅವರನ್ನು
ಕ್ಯಾಬಿನೆಟ್ನಲ್ಲಿ ಇಟ್ಟುಕೊಳ್ಳಬೇಕೋ ಬೇಡವೋ ಅಂತ ನಿರ್ಧರಿಸಬೇಕು.
ಇದು ಕಾಂಗ್ರೆಸ್ನಲ್ಲಿ ನಿಮ್ಮ ಅತ್ತೆಯವರ ಕಾಲದಿಂದಲೂ ನಡೆದುಕೊಂಡು
ಬಂದಿರುವ ಪದ್ಧತಿ ಮೇಡಂ...' ಎಂದು ನಬಿ ಏನೋ ವಿವರಿಸ
ತೊಡಗಿದರು.
`ಅದು ಸರಿ, ಶಾಸ್ತ್ರಿ ಎಲ್ಲಿ? ವೇರೀಸ್ ಶಾಸ್ತ್ರೀ?'
`ಅವರಿಗೆ ಸ್ವಲ್ಪ ಉಪಚಾರ ಜಾಸ್ತಿ ಆಯ್ತೂಂತ
ಕಾಣುತ್ತೆ, ಮೇಡಂ. ಅಜೀರ್ಣವಾಗಿ ಜಿಂದಾಲ್ನಲ್ಲಿ ರೆಸ್ಟ್ ತಗೋತಿದಾರೆ...'
`ಹೋಗಲಿ ಹೋದ ಕೆಲಸ ಏನಾಯ್ತು? ಹ್ಯಾಗಿದೆ
ಕೃಷ್ಣಾ ರೂಲಿಂಗ್?'
`ವೆರಿ ಕ್ಯೂಟ್! ಇನ್ನು ಒಂದು ವರ್ಷ
ಯಾವುದೇ ಯೋಚನೆ ಇಲ್ಲದೇ ನಾವು ಮುಂದುವರಿಸಬಹುದು.
ಅಷ್ಟು ಪ್ರೋಗ್ರೆಸ್ ತೋರಿಸಿದ್ದಾರೆ... ನೋಡಿ ಬೇಕಾದ್ರೆ, ಅದು ಅವರ
ಸೂಟ್ಕೇಸಿನಲ್ಲಿದೆ'. ಮೇಡಂ ಸೂಟ್ಕೇಸ್ ತೆಗೆದರು. `ಕೃಷ್ಣ
ಎರಡು ಸೂಟ್ಕೇಸಿನಷ್ಟು ಪ್ರೋಗ್ರೆಸ್ ಕಳಿಸಿದ್ದೀನಿ ಅಂದಿದ್ರಲ್ಲ, ಒಂದನ್ನು
ನಬೀ ಹೊಡೆದು ಕೊಂಡರಾ?' ಎಂಬ ಸಂಶಯ ಸುಳಿದಾಡಲಾರಂಭಿಸಿತು.
`ಏನ್ರೀ ನಬಿ, ವೇರೀಸ್ ಎನದರ್ ಓನ್' ಎಂದು
ಕೇಳಿಬಿಟ್ಟರು. ಒಂದು ಸಾರಿ ನಬೀಗೆ ಶಾಕ್ ಆದಂತಾಯ್ತು. ಎಲಾ ಕೃಷ್ಣ ನಾನು
ಬರುವ ಮೊದಲೇ ಮೇಡಮ್ಗೆ ಗುಟ್ಟಾಗಿ ನನ್ನ ಬಗ್ಗೆಯೇ ವರದಿ
ಒಪ್ಪಿಸದಾರಲ್ಲ! ನೆಕ್ಸ್ಟ್ ಟೈಂ ಹೋದಾಗ ಸರಿಯಾಗಿ ಮಾಡ್ತೀನಿ
ಅಂದುಕೊಳ್ಳುತ್ತಲೇ, ಉಗುಳು ನುಂಗುತ್ತಾ `ಮದರ್ ಪ್ರಾಮಿಸ್ ಇಲ್ಲ
ಮೇಡಂ, ಅವ್ರು ಒಂದೇ ಸೂಟ್ಕೇಸ್ ಕೊಟ್ಟಿದ್ದು... ಅದ್ಕೆ ನಾನು
ಹೇಳಿದ್ದು ಒಂದು ವರ್ಷದ ಮಟ್ಟಿಗೆ ಮುಂದುವರಿಸಬಹುದು ಅಂತ...'
`ಸರಿ ಬಿಡಿ, ವಾಟ್ ಎಬೌಟ್ ಶಿವಕುಮಾರ್...?'
`ಅವರ್ದೂ ರಿಪೋರ್ಟ್ ಚೆನ್ನಾಗಿದೆ ಮೇಡಂ.
ಒಳ್ಳೇ ಕೋ ಆಪರೇಟೀವ್ ಮಂತ್ರಿ. ನಾನು ಹೋದಾಗ ಎಷ್ಟು ಚೆನ್ನಾಗಿ
ಕೋ-ಆಪರೇಟ್ ಮಾಡಿದ್ರು, ಪ್ರತಿ ಸ್ಟೇಟಿನಲ್ಲೂ ಅಂಥ ಒಬ್ಬೊಬ್ಬರು
ಇದ್ರೆ ಸಾಕು ಪಾರ್ಟಿನ ಫುಲ್ ಕೋ-ಆಪರೇಷನ್ನಲ್ಲಿ ಕಟ್ಟಬೌದು. ನಿಮ್
ಎದುರು ಆ ಜಿತೇಂದ್ರ ಪ್ರಸಾದ್ ಇಲ್ಲೆಲ್ಲಾದರೂ ಸಭೆ ಗಿಭೆ ಮಾಡಿದ್ರೆ
ಸಾತನೂರಿಂದ ರೌಡಿಗಳನ್ನು ಕರೆಸಿ, ಗ್ರಾನೈಟ್ ಕಲ್ಲಲ್ಲಿ ಹೊಡೆಸ್ತೀನಿ
ಅಂತ ಸಿಟ್ಟಿನಿಂದ ಕುದಿತಿದ್ರು, ಅವತ್ತು ಅವರ ಫಾರಂ ಹೌಸಿನಲ್ಲಿ ಕೊಟ್ಟ ಪಾರ್ಟಿ
ದಿನ.... ತುಂಬಾ ಆನೆಸ್ಟು... ರಿಪೋರ್ಟ್ ಕೊಡೋದ್ರಲ್ಲೂ ಕೂಡ
ತುಂಬಾ ಪಂಕ್ಚುವಲ್ಲು...'
`ಹೋಗ್ಲಿ, ಹೌ ಈಸ್ ಖರ್ಗೆ ನೌ...? ದೊಡ್ಡ
ಜವಾಬ್ದಾರಿ ಇರೋ ಡಿಪಾರ್ಟ್ಮೆಂಟ್ ಕೊಡಿ ಅಂತ ಯಾವಾಗ್ಲೂ ಹೇಳೋರು
ಪಾಪ, ಹೇಗಿದೆ ಅವರ ಹೋಮು?'
`ಗುಲ್ಬರ್ಗಾದೂ ಚೆನ್ನಾಗಿದೆ... ಹಾಗೆ ಆರ್ಟಿ ನಗರದ್ದೂ
ಬ್ಯೂಟಿಫುಲ್ ಆಗಿದೆ... ಆ ವ್ಯಕ್ತಿಗೆ ಎಷ್ಟೇ ಕೊರಗಿರ್ಲಿ... ಹೋಂ ಮಾತ್ರ
ತುಂಬಾ ಚೆನ್ನಾಗಿಟ್ಕಂಡಿದ್ದಾರೆ. ಅಲ್ಲೇ ನಮಗೆ ಪಾರ್ಟಿಕೊಟ್ಟು ಈ ರಿಪೋರ್ಟ್
ಮೇಡಂ ಕೈಲೆ ಕೊಡಿ ಅಂತ ಸೂಟ್ಕೇಸ್ನಲ್ಲಿ ತುಂಬಿ ಕೊಟ್ರು...'
ಎಂದು ಏನೇನೋ ಹೇಳಲು ಹೋದ ನಬಿಯನ್ನು ತಡೆದ ಮೇಡಂ, `ಶಟಪ್!
ಆ ಹೋಂ ಅಲ್ರೀ ನಾನು ಕೇಳಿದ್ದು... ಅವರ ಡಿಪಾರ್ಟ್ಮೆಂಟ್ ಕಣ್ರೀ...?'
ಎಂದರು ತುಸು ಖಾರವಾಗಿ.
`ಅದ್ಯಾಕೆ ಕೇಳ್ತೀರಿ... ಅವ್ರಿಗೆ ಈಗ ಕೆಲಸವೇ
ಇಲ್ಲ. ಬರೀ ಸ್ಟೇಟ್ಮೆಂಟ್ ಕೊಟ್ಟು ಕೊಟ್ಟು ಅವರಿಗೆ ಬೇಜಾರಾಗಿದೆ.
ಇವತ್ತು ಪೊಲೀಸ್ನೋರು ಕಾಡಿಗೆ ಹೋಗಿದಾರೆ, ನಾಳೆ ಕೋವಿಗೆ ಮದ್ದುಗುಂಡು
ತುಂಬಿಕೊಳ್ತಾರೆ, ನಾಡಿದ್ದು ಕಾಡಲ್ಲಿ ಡಂ ಡಂ ಅನಿಸ್ತಾರೆ, ಆಚೆನಾಡಿದ್ದು ವೀರಪ್ಪನ್
ತಪ್ಪಿಸಿಕೋತಾನೆ... ಹೀಗೆ ದಿನಕ್ಕೊಂದು ಸ್ಟೇಟ್ಮೆಂಟ್ ಕೊಡೋದಷ್ಟೇ
ಅವರ ಕೆಲಸ ಆಗಿದೆ. ಪಾಪ, ತುಂಬಾ ಬೋರು, ಈ ಹೋಂ ಬದ್ಲು ಮುಖ್ಯಮಂತ್ರಿ
ಥರದ ಯಾವುದಾದರೂ ದೊಡ್ಡ ಜವಾಬ್ದಾರಿ ಕೊಟ್ಟಿದ್ರೆ ಚೆನ್ನಾಗಿ ನಿಭಾಯಿಸಬೌದಿತ್ತು
ಅಂತ ನನ್ನತ್ರ ಹೇಳ್ಕೊಂಡು ಗೊಳೋ ಅಂತ ಅತ್ಬಿಟ್ರು... ಪೂರ್ ಫೆಲೋ!
ನಾನೋ ನೋಡೋಣ ಅಂದಿದೀನಿ.... ಕೃಷ್ಣ ಸರಿಯಾಗಿ ಪ್ರೋಗ್ರೆಸ್ ರಿಪೋರ್ಟ್
ಕಳಿಸದಿದ್ರೆ ಖರ್ಗೆಗೆ ಜಾಸ್ತಿ ಕೆಲಸ ಕೊಟ್ಟರಾಯ್ತು...'
`ಯಾಕೆ ಕೆಲಸ ಇಲ್ಲ... ಕರ್ನಾಟಕದಲ್ಲಿ
ಕ್ರೈಂ ಅಷ್ಟೊಂದು ಕಡಿಮೆಯಾಗಿದೆಯಾ?'
`ಖಂಡಿತಾ ಮೇಡಂ. ಯಾಕೆಂದ್ರೆ ಅಲ್ಲಿ ಈಗ ಪೊಲೀಸ್ನೋರೇ
ಇಲ್ಲ, ಇನ್ನು ಕ್ರೈಂ ಎಲ್ಲಿಂದ ಬಂತು. ಇರೋ ಪೊಲೀಸ್ನೋರಲ್ಲಿ,
ಒಂದಷ್ಟು ಜನ ವೀರಪ್ಪನ್ ಹಿಡಿಯೋಕಂತ ಕಾಡಿಗೆ ಹೋಗಿದಾರೆ,
ಉಳಿದೋರು ಅದ್ಯಾವುದೋ ಕರ್ನಾಟಕದಲ್ಲೊಂದು ಬಾಬರಿ ಮಸೀದಿ
ಇದೆಯಂತೆ. ಬಾಬಾ ಬುಡನ್ಗಿರಿ ಅಂತ ಅಲ್ಲಿಗೆ ಹೋಗಿದಾರೆ. ಪಾಪ
ಬೆಂಗಳೂರಲ್ಲಿ ಈಗ ಖರ್ಗೆ ಒಬ್ಬರೇ.... ಮೇಡಂ ಅಂದಹಾಗೆ ಆ ಮೋಟಮ್ಮ
ಅಂತ ಒಂಚೂರು ನಖರಾ ಮಾಡಿದ್ರು ಮೇಡಂ... ರಿಪೋರ್ಟ್ಕೊಡಲ್ಲ, ಬೇಕಾದ್ರೆ
ಮೇಡಮ್ಗೆ ಕೊಡ್ತೀನಿ ಅಂತ ಹೇಳ್ತಾ ಇದ್ರು...'
`ಶಟಪ್! ನೀವೇನೋ ಅಲ್ಲಿ ತಕರಾರು ಮಾಡಿದ್ರಂತೆ...
ಅದೇನೋ ಎಷ್ಟು ಸೂಟ್ಕೇಸ್ ರಿಪೋರ್ಟ್ ಕೊಡ್ತೀರಿ ಅಂತಾ
ಕೇಳಿದ್ರಂತೆ... ಹೀಗಾದರೆ ಪಾರ್ಟಿ ಉಳಿಯುತ್ತೇನ್ರಿ... ನೀವು ಏನೇನೋ
ಕೇಳಿದ್ದು ನಿಜವೇನ್ರೀ....?
ಮತ್ತೆ ನಬಿ ಉಗುಳು ನುಂಗಿಕೊಂಡರು. ಆದರೆ
ಧೈರ್ಯಗೆಡಲಿಲ್ಲ ನಬಿ. `ಏನ್ ಮೇಡಂ ಆಯಮ್ಮ ಇರೋದು ಮಹಿಳಾ
ಮತ್ತು ಮಕ್ಕಳ ಕಲ್ಯಾಣ ಇಲಾಖೇಲಿ. ಅಲ್ಲಿ ಏನಾದ್ರೂ ಕೇಳೋಕೆ ಅದೇನು
ಬೋಫೋರ್ಸಾ...?' ಎಂದು ಒಂದು ಬಾಣ ಬಿಟ್ಟೇ ಬಿಟ್ಟರು.
`ಶಟಪ್!' ಎಂದವರೇ ಮೇಡಂ ಅಲ್ಲಿಗೆ ಮಾತು
ಕಟ್ ಮಾಡಿದರು.
ಅಷ್ಟರಲ್ಲಿ ಯಾರೋ ಕ್ಷೀಣದನಿಯಲ್ಲಿ ಮೇಡಂ
ಮೇಡಂ ಅಂತಾ ಕೂಗೋದು ಕೇಳಿಸಿತು. ಎಲ್ಲಿ ಹುಡುಕಿದರೂ ಯಾರೂ
ಕಾಣಲಿಲ್ಲ. ಯಾಕೋ ಒಂದು ದೊಡ್ಡ ಸೂಟ್ಕೇಸ್ ಅಲ್ಲಾಡಿದ ಹಾಗಾಯಿತು.
ಅದನ್ನು ಮೇಡಂ ಎದುರಿನಲ್ಲಿ ನಬೀ ತೆರೆದಾಗ ಇಬ್ಬರಿಗೂ ಆಘಾತವಾಯಿತು.
`ಎಷ್ಟು ಸೂಟ್ಕೇಸ್ ರಿಪೋರ್ಟ್ ಬೇಕಾದ್ರೂ
ಕೊಡ್ತೀನಿ. ನನ್ನನ್ನು ಏನಾದ್ರೂ ಮಾಡಿ ಕ್ಯಾಬಿನೆಟ್ ಮಂತ್ರಿ ಮಾಡಿ ಮೇಡಂ'
ಎಂದು ಸೂಟ್ಕೇಸ್ ಒಳಗಿಂದ ಎದ್ದು ನಿಂತ ವ್ಯಕ್ತಿ ಹಾಗೇ ಸರ್ರನೆ ಮೇಡಂ
ಕಾಲಿಗೆ ದೊಪ್ಪಂತ ಬಿದ್ದಿತು. ಮೇಡಂ ಮತ್ತು ನಬಿ ಇಬ್ಬರೂ ಆಶ್ಚರ್ಯದ
ಉದ್ಗಾರ ತೆಗೆದರು:
`ಚಿಂ...ಚ...ನ...ಸೂ...ರ್!!!'