ಕಟ್ಟಬೇಕು,
ಹಳೆಯದನ್ನ ಕೆಡವಬೇಕು,
ಕೆಡವಿದ್ದನ್ನು ಮತ್ತೆ ಕಟ್ಟಬೇಕು,
ಕಟ್ಟಿದ್ದು ಕೆಡವುತ್ತಾ, ಕೆಡವಿದ್ದು ಕಟ್ಟುತ್ತಾ
ಒಟ್ಟಾಗಿ ಕಟ್ಟಿ ಕುಟ್ಟಿ ಕೆಡವಿ ಮಟ್ಟ ಹಾಕಬೇಕು
ಬಾಬರಿಯನ್ನು ರಾಬರಿ ಮಾಡಿ,
ಗಾಬರಿ ಇಲ್ಲದೆ, ರಾಮನಿಗೊಂದು ಗೂಡು ಕಟ್ಟಬೇಕು.
ಎಂದು ಯಡಿಯೂರಪ್ಪ ರಾಗವಾಗಿ ಹಾಡಿ
ಕಣ್ಣೀರು ಒರೆಸಿಕೊಂಡರು. ಭಾವಾವೇಶದಲ್ಲಿ ಅವರಿಗೆ ಕಂಬನಿ ಉಕ್ಕಿ ಬಂದಿತ್ತು.
`ನಮ್ಮ ಸ್ವಯಂ ಸೇವಕರೊಬ್ಬರು ಮೊನ್ನೆ ಪೂಜ್ಯ ಸುದರ್ಶನ್ಜೀಯವರು
ಹೇಳಿದ ಮಾತುಗಳನ್ನು ಕೇಳಿ ಎದೆತುಂಬಿ ಬರೆದ ದೇಶಭಕ್ತಿಗೀತೆಯಿದು.
ಎಷ್ಟು ಹೃದಯಂಗಮವಾಗಿದೆ ನೋಡಿ...' ಎಂದು ಚಾಮಿಯ ಎದುರು
ಕೇಸರಿ ಬಣ್ಣದ ಹಾಳೆಗಳಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆದ ಆ
ಕಾವ್ಯವನ್ನು ತೋರಿಸಿದರು. ಚಾಮಿಗೂ ಹೃದಯ ತುಂಬಿಬಂತು. ದೇಶಭಕ್ತಿ
ಎಂದರೆ ಎಲ್ಲರಿಗೂ ಒಂದೇ ಅಲ್ಲವೇ?
`ಸಾರ್ ಈಗೊಂದು ಸಮಸ್ಯೆ ಸಾರ್... ಭಾರೀ
ತಲೆನೋವಿನ ಸಮಸ್ಯೆ...'
`ಛೆಛೆ ಎಂಥಾ ಪೇಪರ್ನವರ್ರೀ ನೀವು ಬಾಬರಿ ಬಿದ್ದ
ದಿನವೇ ನಮ್ಮ ದೊಡ್ಡ ಸಮಸ್ಯೆಯೊಂದು ಮುಗಿದೇಹೋಯ್ತು. ಭಾರೀ
ಹಳೆ ಬಿಲ್ಡಿಂಗು, ಎಲ್ಲಾದ್ರೂ ಮಳೆಗಿಳೆ ಬಂದು ಬಿದ್ದು ಹೋಗಿದ್ರೆ ಎಂಥಾ ಅಪಾಯ
ಆಗೋದು... ಅಂತೂ ನಮ್ಮ ಅಧ್ವಾನೀಜೀ, ಜೋಷೀಜೀ, ಆಚಾರ್ಯಜೀ
ಎಲ್ಲಾ ಸೇರಿ ಅಂತೂ ಅದನ್ನ ಕೆಡವಿ ಬಹಳ ಜನರನ್ನು ತೊಂದರೆಯಿಂದ ಪಾರು
ಮಾಡಿಬಿಟ್ರು...'
`ಸಾರ್, ಅದೇ ಸಾರ್... ಈಗ ನೋಡಿದ್ರೆ ಎಲ್ರೂ ನಾವು
ಕೆಡವಿದ್ದು, ನಾವು ಬಾಂಬು ಹಾಕಿದ್ದು, ನಾವೇ ಗುದ್ದಲೀ ಹಾಕಿ ಮೀಟಿದ್ದು
ಅಂತ ಹೇಳಿಕೊಳ್ತಾ ಇದಾರಲ್ಲ ಸಾರ್. ನಿಮ್ಮ ಸುದರ್ಶನ್ಜೀ ಬೇರೆ ಬಾಂಬು
ಗೀಂಬು ಅಂತ ಹೆದರಿಸ್ತಾ ಇದಾರಲ್ಲ ಸಾರ್...'
`ಅದು ಯಾರು ಮಾಡಿದ್ರೆ ನಿಮಗೇನ್ರೀ ಒಟ್ಟಿನಲ್ಲಿ
ಕೆಡವಿದ್ದೀವಿ ತಾನೆ? ಅದು ಮುಖ್ಯಾರೀ. ಬಾಂಬು ಹಾಕಿ ಕೆಡವಿದ್ವೋ, ಪಿಕಾಸಿ ಹಾಕಿ
ಅಗೆದೆವೋ ಅದು ಮುಖ್ಯವಲ್ಲ. ಹಳೆಯದನ್ನು ಕೆಡವಬೇಕು, ಅದನ್ನು
ಮತ್ತೆ ಕಟ್ಟಬೇಕು... ಅದು ಮುಖ್ಯ'
`ಸಾರ್ ಆದರೆ ಜನ ಎಲ್ಲಾ ಅದನ್ನು
ಕೆಡವಿರೋದು ಮತಾಂಧರು, ಜಾತೀವಾದಿಗಳು ಅಂತ ಕರೀತಿದಾರಲ್ಲ ಸಾರ್...'
`ರೀ ಚಾಮಿ, ಈ ಬುದ್ಧಿಜೀವಿಗಳು ಇದಾರೆ ನೋಡಿ
ಅವರಷ್ಟು ಜಾತೀವಾದಿಗಳು ಯಾರೂ ಇಲ್ಲ ಕಣ್ರೀ, ಹಾಗೆ ನೋಡಿದ್ರೆ ನಾವೇ
ಜಾತ್ಯಾತೀತರು. ಈಗ ನೀವೇ ನೋಡಿ ನಾವೆಲ್ಲಾದ್ರೂ ರಾಮ ಯಾವ ಜಾತಿ
ಅಂತ ಕೇಳಿದ್ದೀವಾ... ಕೃಷ್ಣ ಯಾವ ಜಾತಿ ಅಂತ ಕೊಶ್ಚನ್ ಹಾಕಿದೀವಾ?
ಸುಮ್ನೆ ಮಾತಾಡ್ತಾರೆ ಈ ಬುದ್ಧಿಜೀವಿಗಳು... ಹೋಗ್ಲಿ ಬಿಡಿ, ಹಳೆಯದನ್ನು
ಕೆಡವಬೇಕು, ಕೆಡವಿ ಕಟ್ಟಬೇಕು ಎಂದು ನಮ್ಮ ದೊಡ್ಡ ದೊಡ್ಡ
ಕವಿಗಳೇ ಹಾಡಿಲ್ಲವೇನ್ರೀ... ಈಗ ನಾವು ಕೆಡವಿದ್ರೆ ಮಾತ್ರ ಅದು
ಜಾತಿವಾದವಾಗುತ್ತಾ, ಇದೆಂಥಾ ನ್ಯಾಯ ಸ್ವಾಮಿ? ಇದು ನಿಜವಾಗಿಯೂ ಷಡ್ಯಂತ್ರ!
ಅಲ್ರೀ ಅಲ್ಲಿ ಆ ಬಾಬರ್ ಕಟ್ಟಿದ ಹಳೆ ಬಿಲ್ಡಿಂಗ್ ಕೆಡವಿ ನಾವೇನೂ ಸೈಟು ಮಾಡಿ
ಮಾರಿಕೊಂಡೆವೆ? ಇಲ್ಲವಲ್ಲ, ಸೊಗಸಾಗಿ ಶ್ರೀರಾಮಮಂದಿರ ಕಟ್ತಾ ಇಲ್ವೆ...?
`ಯಾರೋ ಹೇಳ್ತಿದ್ರು ಸಾರ್, ರಾಮನ ಮಂದಿರದ
ಬದಲು ಒಂದು ಪಾರ್ಕ್ ಕಟ್ಟಬಹುದಿತ್ತು ಅಂತ...'
`ಪಾರ್ಕು! ಯಾಕೆ? ಪಾರ್ಕು ಕಟ್ಟಿಸಿ ನಾಳೆ ನಮ್ಮ
ಮಕ್ಳು ಮರಿ ಅಲ್ಲಿ ಹೋಗಿ ಲವ್ ಮಾಡಿ ಅಪಚಾರ ಮಾಡೋಕಾ?
ಅಯೋಧ್ಯೆ ಲವರ್ಸ್ ಸ್ಪಾಟ್ ಆಯ್ತು ಅಂದ್ರೆ ಮುಂದಿನ ಪೀಳಿಗೆ
ಏನೆಂದುಕೊಳ್ಳುತ್ತೆ ಸ್ವಾಮಿ.... ಯುವ ಜನರನ್ನು ಹಾದಿ ತಪ್ಪಿಸೋಕಾ
ಅಯೋಧ್ಯೆಯಲ್ಲಿ ಪಾರ್ಕು?!.... ರಾಮ ಅಂದ ತಕ್ಷಣ ಹುಡುಗ್ರು
ಎರಡೂ ಕಣ್ಣು ಮುಚ್ಚಿ ಸ್ವಾಮಿ ಅಂತಾರೆ... ಅದು ಬಿಟ್ಟು ಪಾರ್ಕು
ಕಟ್ಟಿಸಿದ್ರೆ ಅಲ್ಲಿ ಬರೋ ಹುಡ್ಗೀರಿಗೆಲ್ಲಾ ಲವ್ಮೀ ಅಂತಾರೆ...'
ಸಿಟ್ಟಿನಿಂದ ಸಿಡಿಮಿಡಿಗೊಂಡ ಯಡಿಯೂರಪ್ಪ ಮತ್ತಷ್ಟು
ಕೆಂಪಾಗುತ್ತ ಹೇಳಿದರು: `ಒಂದು ಉದಾಹರಣೆ ಕೊಡ್ತೀನಿ...
ಶಿವಮೊಗ್ಗದ ಹತ್ರ ಒಂದು ದೊಡ್ಡ ಕೆರೆ ಇತ್ತು. ಅದ್ಯಾವಳೋ ಸೂಳೆ
ಆ ಕೆರೇನ ಕಟ್ಟಿಸಿದಳಂತೆ. ಅದ್ಕೆ ಜನ ಅದನ್ನ ಸೂಳೆಕೆರೆ ಅಂತಾನೇ
ಕರೀತಿದ್ರು... ನನಗಂತೂ ಕೇಳೋಕೆ ಮುಜುಗರ ಆಗೋದು.
ಕಿವಿಗೆಲ್ಲಾ ಕಾದ ಸೀಸದ ರಸ ಸುರಿದ ಹಾಗಾಗೋದು. ಒಂದು ದಿನ ನಾವೆಲ್ಲಾ
ನಾಗರೀಕ ಕಾರ್ಯಕರ್ತರು ಸೇರಿ ಆ ಕೆರೆಗೆ ಶಾಂತಿಸಾಗರ ಅಂತ ನಾಮಕರಣ
ಮಾಡಿದ್ವಿ... ಅದಾದ ಮೇಲೆ ಈಗ ನಾವು ಕಿವಿತುಂಬಾ ಕೇಳಬಹುದು. ಬಾಯಿ
ತುಂಬಾ ಕರೀಬಹುದು... ಶಾಂತಿಸಾಗರ!!!'
`ಅಲ್ಲಾ ಸಾರ್, ಅದಿರ್ಲಿ, ಅಲ್ಲಿ ರಾಮ ದೇವಸ್ಥಾನ
ಕಟ್ಟೋಬದಲು ಮಸೀದಿಯನ್ನೇ ಕಟ್ಟಬಹುದಿತ್ತು ಅಂತಾನೂ ಕೆಲವರು
ಹೇಳ್ತಾರೆ... ಸಾರ್.'
`ಹೇಳ್ತಾರೆ, ಹೇಳ್ದೆ ಏನು ಮಾಡ್ತಾರೆ... ನೋಡ್ರೀ
ಫಸ್ಟು ದೇವಸ್ಥಾನಗಳು ಪೂರ್ತಿ ಆಗ್ಲಿ... ಆಮೇಲೆ ಮಸೀದಿ, ಇಗರ್ಜಿ
ಯೋಚ್ನೆ ಮಾಡೋಣ. ನಮ್ಮ ಹಿಂದೂಗಳಲ್ಲಿ ಎಷ್ಟು ದೇವರುಗಳಿವೆ,
ಅವಕ್ಕೆಲ್ಲಾ ಒಂದೊಂದು ದೇವಸ್ಥಾನ ಕಟ್ಟಿದ ಮೇಲೆ ಬೇರೆ
ಕಟ್ಟಿದರಾಯ್ತು, ಆದರೆ ಇವಕ್ಕೇ ಇನ್ನೂ ನಮಗೆ ಜಾಗ ಸಾಕಾಗ್ತಾ
ಇಲ್ಲಾ... ಈಗ ನೋಡಿ ಗಣಪತಿ ದೇವಸ್ಥಾನ ಅಂತಲೇ ಇಟ್ಕೊಳ್ಳಿ... ಗಣಪತಿಗೊಂದು,
ಈಶ್ವರನಿಗೊಂದು, ಪಾರ್ವತಿಗೊಂದು, ಗಣಪತಿಯ ಜೊತೆಗಿರುವ
ಗಣಗಳಿಗೆ... ಒಂದು ದೇವಸ್ಥಾನ ಅಂದ್ರೆ ಎಷ್ಟು ಜಾಗ ಬೇಕಾಗುತ್ತೆ.
ಅದೇ ಮುಸ್ಲಿಂರಿಗೆ ಆ ಸಮಸ್ಯೆ ಇಲ್ಲ. ಮಸೀದಿ ಅಂದ್ರೆ ಒಳಗೆಲ್ಲ ಖಾಲಿ
ಜಾಗ. ಇಂಥ ಖಾಲಿ ಜಾಗಕ್ಕೆ ಅಷ್ಟೆಲ್ಲಾ ದೊಡ್ಡ ಜಾಗ ಯಾಕೆ? ಹಾಗಾಗಿ ನಮ್ಮ
ಸರ್ಕಾರ ಮನಸ್ಸು ಮಾಡಿದ್ರೆ ಇಂಥ ಅನವಶ್ಯಕ ಜಾಗಾನ ಖಾಲಿ ಮಾಡ್ಸಿ
ದೇವಸ್ಥಾನ ಮಾಡಿದ್ರೆ ನಮ್ಮ ದೇವರಿಗೂ ಒಂಚೂರು ಜಾಗ
ಸಿಕ್ಕಿದಂತಾಗುತ್ತೆ. ಅವ್ರು ಜಾಗ ಬಿಟ್ಟುಕೊಟ್ರೆ ಕೋಮು ಸಾಮರಸ್ಯನೂ
ಆಗಲ್ವೆ? ನಮ್ಮ ಪ್ಲಾನು, ಯೋಜನೆ ಇದೇ... ಇದ್ಯಾಕೆ ನಮ್ಮ ಬುದ್ಧಿಜೀವಿಗಳಿಗೆ
ಅರ್ಥಾ ಆಗೋಲ್ವೋ ನನಗಂಥೂ ಗೊತ್ತಾಗ್ತಿಲ್ಲ.'
`ಸಾರ್ ಸೂಳೆಕೆರೇನ ಶಾಂತಿಸಾಗರ ಮಾಡಿದ ಹಾಗೆ
ಬೇರೆ ಏನಾದ್ರೂ ಪ್ಲಾನ್ ಇದೆಯಾ... ಸಾರ್?'
`ಬೇಕಾದಷ್ಟಿವೆ... ಒಂದೊಂದು ಪೇಟೆಯಲ್ಲೂ ಬೇಕಾದಷ್ಟು
ಬೇರೆ ಹೆಸರಿನ ರೋಡುಗಳಿವೆ... ನಿಮಗೂ ಯಾವುದಾದರೂ
ಕಂಡುಬಂದರೆ ನಮಗೆ ಹೇಳಿಬಿಡಿ... ಮೇಲೆ ನಮ್ಮ ಸರ್ಕಾರ
ಇರೋದರೊಳಗೆ ಮಾಡಿಸಿ ಬಿಡೋಣ...'
`ಸಾರ್ ಒಂದಿದೆ... ಅದು ನಿಮ್ಮ ಕೈಲಿ ಆಗುತ್ತೋ
ಇಲ್ವೋ... ಡೌಟು ಸಾರ್'
`ಏನ್ರೀ ಅದೂ...?'
`ಅರಬ್ಬೀ ಸಮುದ್ರ ಹೆಸರು ಯಾಕೋ ಚೆನ್ನಾಗಿಲ್ಲ...
ಒಂಚೂರು ವಾಜಪೇಯಿಗೆ ಹೇಳಿ... ಅವರಿಗಿಂತಲೂ ಅಧ್ವಾನಿ, ಜೋಷಿಜೀಗೆ
ಹೇಳಿದ್ರೆ ಖಂಡಿತಾ ಹೆಸರು ಬದಲಾಯಿಸಬಹುದು ಸಾರ್... ಅರವಿಂದ ಮಹಾಸಾಗರ
ಅಂತನೋ ಅಲಕಾನಂದ ಸಮುದ್ರ ಅಂತಾನೋ ಮಾಡಿದ್ರೆ....?'
`ಗ್ರೇಟ್ ಐಡಿಯಾ... ಅಟಲ್ ಸಮುದ್ರ,
ಗೊಲ್ವಾಲ್ಕರ್ ಸಾಗರ ಅಂತಿಟ್ರೆ ಹೇಗೆ?' ಎಂದ ಯಡಿಯೂರಪ್ಪ
ಗಾಢವಾಗಿ ಯೋಚಿಸುತ್ತಾ ಕುಳಿತರು.