ಆಗ ರಾಜ್ಯದ ಮುಖ್ಯಮಂತ್ರಿಯಾಗಿ
ಎಸ್ಸೆಂ ಕೃಷ್ಣ ಇದ್ದರು. ಅವರ ಸಚಿವ ಸಂಪುಟದಲ್ಲಿದ್ದ ಟಿ.ಜಾನ್ ಎಂಬ ಮಂತ್ರಿ
ಜಿಲ್ಲೆಗೊಂದು ವಿಮಾನ ನಿಲ್ದಾಣ ನೀಡುವ ಆಶ್ವಾಸನೆ ಕೊಟ್ಟೇಬಿಟ್ಟರು!
ಡಿಸೆಂಬರ್ ೧೨, ೧೯೯೯
ರಲ್ಲಿ.
ಹಕ್ಕಿಯಂತೆ ಮೇಲೆ
ಹಾರಾಡಿ...
ಚುಕ್ಕಿಯಂತೆ
ಗಾಳಿಯಲ್ಲಿ ತೇಲಾಡಿ
ಎಂದು ಒಮ್ಮೆ ಗುನುಗಿದರೆ
ಇನ್ನೊಮ್ಮೆ,
ನಲ್ಲೇ ಎಲ್ಲಿರುವೆ ಮನವ
ಕಾಡುವ ರೂಪಸಿಯೇ.....
ಎಂಬ ಹಾಡು ಆಗ
ಚಾಮಿಯ ನಿತ್ಯದ ಭಜನೆಯಾಗಿತ್ತು. ಬಾತ್ ರೂಮಿಗೆ ಹೋಗಲಿ, ಅಥವಾ ನಿತ್ಯ ಬೆಳಗಿನ
ಯಾವುದೇ ಕೆಲಸದಲ್ಲಿರಲಿ ಸದಾ ಹಾರಾಡುವ ಹಾಡು ಅವನ ಬಾಯಲ್ಲಿ ಗುನುಗುತ್ತಿತ್ತು.
ಚಾಮಿಗೆ ಆಗೆಲ್ಲಾ ಸರಿಯಾಗಿ
ನಿದ್ದೆ ಕೂಡ ಬರುತ್ತಿರಲಿಲ್ಲ ದಿನವೂ ಆಕಾಶದಲ್ಲಿ ಹಾರಾಡುವ ಕನಸುಗಳು, ಗಾಳಿಯಲ್ಲಿ
ತೇಲಿದ ಹಾಗೆ, ಮೋಡಗಳನ್ನು ಕೈಯಲ್ಲಿ ಆತು ಹಿಡಿಯುವ ಹಾಗೆ, ಹಾರಾಡುತ್ತಲೇ ತನ್ನ
ಪ್ರೇಯಸಿಗೆ ಗಾಳಿಯಲ್ಲೇ ಟಾಟಾ ಮಾಡುವ ಹಾಗೆ ನಿರಂತರ ಕನಸುಗಳು. ಇದಕ್ಕೆ
ಕಾರಣವೂ ಇಲ್ಲದಿರಲಿಲ್ಲ. ಯಾಕೆಂದರೆ ಕೃಷ್ಣರ ಮಂತ್ರಿಮಂಡಲದಲ್ಲಿ ವಿಮಾನ ಮಂತ್ರಿಯಾಗಿದ್ದ
ಜಾನ್ ಎಂಬುವವರು ಜಿಲ್ಲೆಗೊಂದು ವಿಮಾನ ನಿಲ್ದಾಣ ಎಂದು ಹೇಳಿದ್ದ ದಿನದಿಂದಲೇ ಅವನ
ಕನಸಿನ ಲೋಕ ಯದ್ವಾತದ್ವ ಬಿಚ್ಚಿಕೊಂಡಿತ್ತು.
ಜಿಲ್ಲೆಗೊಂದು ವಿಮಾನ
ನಿಲ್ದಾಣ, ದಿನನಿತ್ಯ ಹಾರಾಡುವ ನೂರಾರು ವಿಮಾನಗಳು, ಇನ್ನು ಮೇಲೆ ಈ ಸರ್ಕಾರಿ ಬಸ್ಸಿನ
ರಂಪವಂತೂ ತಪ್ಪಿತಲ್ಲ ಎಂಬಂಥ ನೂರಾರು ಖುಷಿಯ ಸಂಗತಿಗಳು ಅವನ ಮನಸ್ಸನ್ನು
ದಿನನಿತ್ಯ ತುಂಬುತ್ತಿದ್ದವು. ಇಂಥದ್ದೊಂದು ಅವಕಾಶ ಕಲ್ಪಿಸುತ್ತಿರುವ ಮಂತ್ರಿವರೇಣ್ಯ ಜಾನ್ರನ್ನು
ಎಂದು ನೋಡುವೆನೋ ಎಂಬ ಮನದಾಸೆ ಅಂದು ಕೈಗೂಡಿತ್ತು. ಅವರಿಗೊಂದು ಸಿಹಿತಿಂಡಿಯ ಪ್ಯಾಕ್
ಕಟ್ಟಿಸಿಕೊಂಡು ಭೇಟಿಗಾಗಿ ಹೋದ.
`ಸಾರ್, ಮೊದಲು ನಿಮ್ಮ
ಬಾಯಿಗೆ ಸ್ವೀಟ್ ಹಾಕಬೇಕು, ಇಂಥ ಭರ್ಜರಿ ಐಡಿಯಾವನ್ನು ಇದುವರಗೆ ಯಾವ ಮಂತ್ರಿಯೂ
ಮಾಡಿರಲಿಲ್ಲ. ನಾವೆಲ್ಲಾ ಇನ್ನೂ ಬಸ್ಸ್ಟ್ಯಾಂಡು, ಒಳ್ಳೆ ಬಸ್ಸು ಅಂತನೇ ಪರದೇಸಿಗಳ ಹಾಗೆ
ಬಡಿದಾಡ್ತಾ ಇರೋವಾಗ ನೀವು ವಿಮಾನ ಕೊಡ್ತೀರೊದು ನಿಜಕ್ಕೂ ಗ್ರೇಟ್ ಸಾರ್....'
`ಛೆ, ಛೆ ಬಸ್ ಸ್ಟ್ಯಾಂಡೆಲ್ಲಾ
ಹಳೇ ಕತೆಯಾಯ್ತು ಕಣ್ರೀ. ಬಸ್ಸಿನಲ್ಲಿ ಯಾರಾದ್ರೂ ಓಡಾಡೋಕೆ ಸಾಧ್ಯ ಏನ್ರಿ? ಮಡಿಕೇರಿಯಿಂದ
ಬೆಂಗಳೂರಿಗೆ ಬರಬೇಕಾದ್ರೆ ಎಂಟು ಗಂಟೆ. ನನಗಂತೂ ಸಾಕು ಬೇಕಾಗಿದೆ. ವಿಮಾನ ಇದ್ರೆ
ಕೇವಲ ಅರ್ಧ ಗಂಟೆಗೆ ಬೆಂಗ್ಳೂರ್!
`ನನಗಂತೂ ಇದನ್ನು
ಕಲ್ಪಿಸಿಕೊಳ್ಳೋಕೇ ಆಗ್ತಾ ಇಲ್ಲ ಸಾರ್, ನೀವು ಹೇಳ್ದಂಗೆ ಬಸ್ನಲ್ಲಂತೂ ಓಡಾಡೋಕೆ ಸಾಧ್ಯಾನೇ
ಇಲ್ಲ ಸಾರ್, ಮೊನ್ನೆ ಊರಿಂದ ಬರೋವಾಗ ನನ್ನ ಪ್ಯಾಂಟು ಸೀಟಿನ ಮೊಳೆಗೆ ಸಿಕ್ಕಿ ಪೂರ್ತಿ ಹರಿದೇ
ಹೋಯ್ತು ಸಾರ್, ಅದನ್ನು ಮುಚ್ಚೋಕಾಗೇ ನಾನು ಈಗ ಬರೀ ಜುಬ್ಬಾ ಹಾಕಬೇಕಾಗಿದೆ ಸಾರ್.
ದರಿದ್ರ ವ್ಯವಸ್ಥೆ!' ಎಂದು ಚಾಮಿ ಹಿಡಿ ಶಾಪ ಹಾಕತೊಡಗಿದ.
`ಏನೂ ಯೋಚ್ನೆ ಮಾಡ್ಬೇಡಿ
ಚಾಮಿ, ಇನ್ನೊಂದೆರಡು ವರ್ಷದಲ್ಲಿ ಇಡೀ ರಾಜ್ಯದಲ್ಲಿ ಎಲ್ರೂ ಜುಂ ಅಂತಾ ಏರೋಪ್ಲೇನ್ನಲೇ ಸುತ್ತಾಡಬಹ್ದು'.
`ಸಾರ್, ನನಗೊಂದು
ಡೌಟು. ಹಿಂದಿನ ಸರ್ಕಾರ ಎಲ್ಲಾ ಜಿಲ್ಲೆಗೂ ರೈಲು ಕೊಡ್ತೀವಿ ಅಂತ ಹೇಳಿದ್ರು, ಅದೇ ರೀತಿ ನೀವೂ
ಮಾಡಲ್ಲ ತಾನೇ?
`ಅವ್ರಿಗೆ ಪ್ಲಾನ್ ಇಲ್ಲ
ಕಣ್ರೀ... ಈಗ ನೋಡಿ ಹೊಸ ಬಸ್ ದಾರಿ ಮಾಡ್ಬೇಕಾದ್ರೆ, ರೈಲು ರಸ್ತೆ ಹಾಕಬೇಕಾದ್ರೆ
ಎಷ್ಟೋಂದು ಖರ್ಚಾಗುತ್ತೆ ಗೊತ್ತಾ? ಕಾಡು ಕಡೀಬೇಕಾದ್ರೆ ಫಾರೆಸ್ಟ್ ಡಿಪಾರ್ಟ್ಮೆಂಟ್ ಪರ್ಮಿಷನ್
ಬೇಕು, ಗದ್ದೆ ತೋಟದಲ್ಲಿ ಟ್ರಾಕ್ ಹಾಕಬೇಕಾದ್ರೆ ರೈತರ ಮನ ಒಲಿಸಬೇಕು. ಹೆಚ್ಚು
ಕಡಿಮೆ ಸಾವಿರಾರು ಎಕರೆ ಜಾಗ ತಗೊಳ್ಳೋ ಸಮಸ್ಯೆ ಇರುತ್ತೆ. ಇದಾದ್ರೆ ಹಾಗೇನಿಲ್ಲ, ಆಕಾಶದಲ್ಲಿ
ಹಾರಾಡೋಕ್ಕೆ ಯಾರ ಪರ್ಮಿಷನ್ನೂ ಬೇಕಾಗಿಲ್ಲ. ಏಕ್ದಂ ಹಾರೋದೊಂದೇ ಕೆಲ್ಸ'.
`ಹೌದಲ್ವಾ ಸಾರ್, ಆಕಾಶಕ್ಕೆ
ರಸ್ತೇನೇ ಬೇಕಾಗಿಲ್ಲ! ಸಾರ್ ಆದ್ರೆ ವಿಮಾನ ನಿಲ್ದಾಣ ಮಾಡೋಕೆ ಒಂದೊಂದು ಕಡೆಗೂ
ಐವತ್ತು ಎಕರೆನಾದ್ರೂ ಬೇಕಲ್ವ ಸಾರ್? ಅಲ್ಲಿ ಮತ್ತೆ ಕಾಡು, ಗುಡ್ಡ ಕಡಿದು ಸಮ ಮಾಡ್ಬೇಕಲ್ವ
ಸಾರ್?'
`ಅದೆಲ್ಲಾ ಒಂದು ಸಮಸ್ಯೆನೇ
ಅಲ್ಲ. ಕಾಡು ಕಡಿದು ನೆಲಸಮ ಮಾಡೋಕೆ ನಮ್ಮಲ್ಲಿ ಎಕ್ಸ್ಪರ್ಟ್ಗಳಿದ್ದಾರೆ. ಮಡಿಕೇರೀಲಿ
ಎಂಥ ಪರಿಣಿತರು ಇದಾರೆಂದ್ರೆ ಇಡೀ ಮಡಿಕೇರೀನೇ ಬೇಕಾದ್ರೂ ಏರ್ಪೋರ್ಟ್ ಮಾಡಿಬಿಡ್ತಾರೆ.
ಅದಿರ್ಲಿ ಇದರಲ್ಲಿ, ನಾವು ರಾಜ್ಯದ ಎಕನಾಮಿಕ್ಸ್ ಬಗ್ಗೆನೂ ಸ್ವಲ್ಪ ಯೋಚ್ನೆ ಮಾಡ್ಬೇಕಾಗಿದೆ'.
`ಏನ್ಸಾರ್ ಅದು?'
`ಈಗ ನೋಡ್ರಿ, ಒಟ್ಟು
ಇಪ್ಪತ್ತೇಳು ಜಿಲ್ಲೆಗಳಲ್ಲಿ ಏರ್ಪೋರ್ಟ್ ನಿರ್ಮಾಣ ಅಂದ್ರೆ ಕಡಿಮೆ ಅಂದ್ರೂ ಹತ್ತು ಸಾವಿರ
ಜನಕ್ಕೆ ಕೆಲ್ಸ ಸಿಗೋದಿಲ್ವ? ಅಷ್ಟರಮಟ್ಟಿಗೆ ನಿರುದ್ಯೋಗ ಸಮಸ್ಯೆ ಪರಿಹಾರ ಆಯ್ತಾ?
ಒಂದೈದು ವರ್ಷ ಜಿಲ್ಲಾಕೇಂದ್ರಗಳಲ್ಲಿ ಮರಕಡಿದು, ನೆಲಸಮ ಮಾಡಿ ನಿಲ್ದಾಣ ಮಾಡ್ತಾ
ಇದ್ರೆ ಆಮೇಲೆ ತಾಲೂಕಿಗೊಂದು ನಿಲ್ದಾಣ ಶುರು ಮಾಡಬಹ್ದು. ಆಗ ಹೆಚ್ಚು ಕಡಿಮೆ ಐದು ಲಕ್ಷ
ಜನರಿಗೆ ದಿನನಿತ್ಯ ಕಾಡು ಕಡಿಯೋದು, ಅದನ್ನು ಸಾಗಿಸೋದು, ಒಟ್ನಲ್ಲಿ ಇಡೀ ಕರ್ನಾಟಕದಲ್ಲಿ
ಲಕ್ಷಾಂತರ ಜನರನ್ನು ಟಿಂಬರ್ ಬ್ಯುಸಿನೆಸ್ನಲ್ಲಿ ತೊಡಗಿಸಬಹುದಾ? ಅದು ಮುಗಿತಿದ್ದಂಗೆ
ಹೋಬಳಿ, ಗ್ರಾಮ ಮಟ್ಟದಲ್ಲಿ ವಿಮಾನ ನಿಲ್ದಾಣ ಮಾಡ್ತಾ ಇಡೀ ಕರ್ನಾಟಕದ ಜನರಿಗೆ ಕೊಡಲಿ,
ಗರಗಸ ಕೊಡಬಹುದಾ? ಆಮೇಲೆ ನಿರುದ್ಯೋಗ ಇಲ್ಲವೇ ಇಲ್ಲ!'
`ವಂಡರ್ ಫುಲ್ ಸಾರ್,
ಆಮೇಲೆ ಈ ಬಸ್ಸುಗಿಸ್ಸು ಇರುತ್ತಾ ಸಾರ್?'
`ಹ್ಯಾಗ್ರಿ ಇರೋಕೆ ಸಾಧ್ಯ?
ಇಡೀ ತಾಲೂಕು, ಡಿಸ್ಟಿಕ್ಟಿನಿಂದ ಜನ ಓಡಾಡೋದು ಬರೀ ವಿಮಾನದಲ್ಲೇ ಅಲ್ವೇನ್ರೀ... ಬಸ್ಸಿಗೆ
ಕಾಯೋದು ತಪ್ಪುತ್ತೆ, ಫುಟ್ಬೋರ್ಡ್ ಮೇಲೆ ನಿಲ್ಲೋದು ಟಾಪ್ ಮೇಲೆ ಹತ್ತೋದು
ತಪ್ಪುತ್ತೆ, ಟೈರ್ ಪಂಕ್ಚರ್ ಆಗೋದು, ಬ್ರೇಕ್ ಫೈಲ್ ಆಗೋದು ಇವೆಲ್ಲಾ ಕಿರಿಕಿರಿನೂ ನಿಂತು
ಹೋಗುತ್ತೆ... ಅಂದಹಾಗೆ ಇದರಲ್ಲಿ ಇನ್ನೂ ಒಂದು ಇಕನಾಮಿಕ್ ಪಾಯಿಂಟ್ ಇದೆ. ಅದನ್ನು
ಕೇಳಿದ್ರೆ ನೀವು ಇನ್ನೂ ಸಂತೋಷ ಪಡ್ತೀರಿ...'
`ಸಾರ್ ದಯವಿಟ್ಟು ಬೇಗ
ಹೇಳಿ ಸಾರ್, ನನಗಂತೂ ಖುಷಿ ತಡ್ಕೊಳ್ಳೋಕಾಗ್ತಿಲ್ಲ....'
`ಕೂಲ್ ಡೌನ್, ಕೂಲ್
ಡೌನ್! ಒಂದು ವೇಳೆ ವಿಮಾನ ಆಕ್ಸಿಡೆಂಟ್ ಆದ್ರೆ ಒಬ್ಬೊಬ್ರಿಗೆ ಐದರಿಂದ ಹತ್ತು ಲಕ್ಷ ಪರಿಹಾರ
ಸಿಗುತ್ತೆ ಕಣ್ರೀ...'
ಚಾಮಿ ಉಗುಳು
ನುಂಗಿಕೊಳ್ಳುತ್ತಾ ಕೇಳಿದ:
`ಸತ್ತೋರಿಗಾ
ಇದ್ದೋರಿಗಾ ಸಾರ್?!'
ಅಷ್ಟರಲ್ಲಿ ಜಾನ್ಗೆ
ಒಂದು ಫೋನ್ ಕಾಲ್ ಬಂತು. ಅಲ್ಲಿಂದ ಎದ್ದು ಹೋದರು. ಚಾಮಿ ತಲೆ
ಕೆರೆದುಕೊಳ್ಳುತ್ತಾ ಕುಳಿತಿದ್ದ.