ಒಂದು ಸರ್ತಿ ಸನ್ಯಾಸಿನಿ ಉಮಾಭಾರತಿ, ಬ್ರಹ್ಮಚಾರಿ
ಗೋವಿಂದಾಚಾರ್ಯರ ಜೊತೆಗಿನ ತಮ್ಮ ಪ್ರೇಮ ಕಥನವನ್ನು
ಇಂಗ್ಲಿಷ್ ವಾರ ಪತ್ರಿಕೆಯಲ್ಲಿ ಸವಿಸ್ತಾರವಾಗಿ ಹೇಳಿಕೊಂಡರು... ನಂತರ
ಖಂಡತುಂಡವಾಗಿ
ಅಲ್ಲಗೆಳೆದರು.
`ಎಂಥಾ ಒಳ್ಳೆಯ ಸ್ಕ್ರಿಪ್ಟು! ಇಂಥಾ ಒಳ್ಳೆಯ
ಲವ್ ಸ್ಟೋರಿಯನ್ನು ನಾನು ನೋಡೂ ಇರಲಿಲ್ಲ, ಸಿನಿಮಾ ಮಾಡಿಯೂ
ಇರಲಿಲ್ಲ. ನನ್ನ ಪ್ರೇಮಲೋಕ, ರಣಧೀರ... ಅದಿರಲಿ, ರಾಮಾಚಾರೀನ
ಕೂಡ ಈ ಕತೆ ಬೀಟ್ ಮಾಡುತ್ತೆ. ಒಂದು ವರ್ಷ ಓಡೋದು ಗ್ಯಾರಂಟಿ...
ಬೇಕಾದ್ರೆ ಬರಕೊಳ್ಳಿ...' ಎಂದು ಲವ್ ಎಕ್ಸ್ಪರ್ಟ್ ರವಿಚಂದ್ರನ್ ಹೇಳಿದ
ಮೇಲೆಯೇ ಚಾಮಿ ತನ್ನ ಕತೆಯನ್ನು ಹಂಸಲೇಖಾವರಗೆ
ತಗೊಂಡು ಹೋಗಿದ್ದು.
`ನೀವು ಕತೆ ಹೇಳ್ತಾ ಹೋಗಿ ನಾನು ಹಾಡಿಗೆ ಟ್ಯೂನ್
ಹಾಕ್ತಾ ಇರ್ತೇನೆ... ರವಿಚಂದ್ರನ್ ಅವರೇ ಮೆಚ್ಚಿದ ಮೇಲೆ ಕತೆ ಚೆನ್ನಾಗಿಯೇ
ಇರಬೇಕು... ಹುಂ, ಹೇಳಿ...' ಎಂದು ಹಂಸಲೇಖಾ ಹಾರ್ಮೋನಿಯಂ ಹಿಡಿದು
ದನಿ ಮೀಟಿ ಸರಿ ಮಾಡಿಕೊಂಡು ಕುಳಿತರು.
`ಸಾರ್ ಇದು ಪೊಲಿಟಿಕಲ್ ಲವ್ ಸ್ಟೋರಿ ಸಾರ್...
ಹುಡುಗಿ ಮಧ್ಯ ಪ್ರದೇಶದವಳು... ಹುಡುಗ ಬಾಂಬೆ ಅಥವಾ ಕರ್ನಾಟಕ
ಕಡೆಯವನು... ಟೀನೇಜ್ ಲವ್ ಸ್ಟೋರಿ ಅಲ್ಲಾ ಸಾರ್, ಇಂದೊಂತರಾ ಮಿಡ್ಲ್
ಏಜೆಡ್ ಲವ್ ಸ್ಟೋರಿ. ಮಧ್ಯವಯಸ್ಕರ ಪ್ರಣಯದ ಕತೆ ಅಂತನೂ
ಕರೀಬಹುದು...'
`ಪರವಾಗಿಲ್ಲರೀ, ಇದು ನಿಜವಾಗಿ ನಡೆದ ಕತೆ...
ಈ ಕತೆ ನಡೆದು, ಅದು ಪತ್ರಿಕೆಗಳಲ್ಲಿ ಪ್ರಿಂಟ್ ಆಗಿ, ಆಮೇಲೆ ಆ ಹುಡುಗಿ...
ಸಾರಿ ಕನ್ಯೆ... ಆ ಪತ್ರಿಕೆ ಕಚೇರಿ ಮುಂದೆ ಸುಳ್ಳು ಅಂತ ಧರಣಿ ಮಾಡಿ
ಭಾರಿ ರಂಪಾ ಆಗೋಯ್ತು, ಬೇಕಾದ್ರೆ ಬಿಜೆಪಿ ಎಂಎಲ್ಎ ಮುಖ್ಯಮಂತ್ರಿ
ಚಂದ್ರೂನೇ ಕೇಳಿ...'
`ಪೊಲಿಟಿಕಲ್ ಲವ್ ಸ್ಟೋರಿ ಅಂದಮೇಲೆ ಅದು ಸ್ಪೆಷಲ್
ಕತೆನೇ ಇರಬೇಕು... ಪೊಲಿಟಿಕಲ್ ಅಂದ್ಮೇಲೆ ನಾವೂ ಬೇಕಾದಂತೆ
ತಿರುವು ಕೊಡಬಹುದು... ಹುಂ, ಹೇಳಿ ಹುಡುಗ ಹುಡುಗಿಗೆ ಒರಿಜಿನಲ್
ಹೆಸರಿದೆಯೋ ಅಥವಾ ಸಿನಿಮಾ ಹೆಸರೋ...'
`ಅದು ಹ್ಯಾಗೆ ಬೇಕಾದ್ರೂ ಜನ ಅರ್ಥ
ಮಾಡ್ಕೊಳ್ಲಿ. ಆದ್ರೆ, ನಾವು ಈ ಕತೆಗೆ ತಿರುವು ಕೊಡೋದೇ ಬೇಡ.
ಕತೇನೇ ಹಾಗಿದೆ... ಹುಡುಗಿ ಹೆಸರು ಉಮಾ ಅಂತ, ಅವ್ಳು ಮಧ್ಯಪ್ರದೇಶದವಳು.
ಬೆಟ್ಟ ಗುಡ್ಡಗಳಲ್ಲಿ...'
`ನಿಲ್ಸಿ ನಿಲ್ಸೀ... ಹೀರೋಯಿನ್ ಎಂಟ್ರೀನೇ ಹಾಡಿನಲ್ಲಿ
ಹಾಕಬಹುದು... ಮೇಲೆ ತಿಳಿಯಾದ ಗಗನ, ಕೆಳಗೆ ನದಿಯ ನೀರಿನ
ತನನನಾ... ನನಗಿಲ್ಲೀ ಗೋವಿಂದನ ಧ್ಯಾನ... ಬರುವೆಯಾ
ಗೋವಿಂದಾ... ತರುವೆಯಾ ಆನಂದಾ...'
`ಫೆಂಟಾಸ್ಟಿಕ್ ಸಾರ್! ಅಲ್ಲಾ ಸಾರ್ ನಿಮಗೆ ಹ್ಯಾಗೆ
ಗೊತ್ತಾಯ್ತು ಆ ಹುಡುಗನ ಹೆಸರು ಗೋವಿಂದ ಅಂತ...?'
`ಛೆ ಛೆ ಹಾಗೇನಿಲ್ಲ... ಸಾಮಾನ್ಯವಾಗಿ ಹುಡುಗಿಯರಿಗೆ
ಸದಾ ಕೃಷ್ಣ ಉರುಫ್ ಗೋವಿಂದನ ಧ್ಯಾನವಲ್ಲವೇ? ಅದಕ್ಕೇ ಹಾಗೇ
ಒಂದು ಲೈನ್ ಹೊಳೀತು... ಅಂದ ಹಾಗೆ ನನ್ನ ಅಸಲೀ ಹೆಸರೂ
ಗೋವಿಂದನೇ ಕಣ್ರೀ... ಹುಂ ಮುಂದೆ ಹೇಳಿ...'
`ಒಂದು ದಿನ ಆ ಹುಡುಗಿಗೆ ಬೆಟ್ಟಗುಡ್ಡಕ್ಕೆ ಬರೋ
ಸನ್ಯಾಸಿಗಳನ್ನು ನೋಡಿ ತಾನೂ ಕಾವಿ ಹಾಕ್ಕೋಬೇಕು, ಸನ್ಯಾಸಿ
ಆಗಬೇಕು ಅಂತ ಆಸೆಯಾಯಿತು. ಸರಿ ಹಿಂದೆ ಮುಂದೆ ನೋಡದೆ ಕಾವಿ
ಹಾಕ್ಕೊಂಡು ಸನ್ಯಾಸಿ ಆಗೇಬಿಟ್ಲು...'
`ಇಲ್ಲಿ ನಾವೂ ಒಂದು ರ್ಯಾಪ್ ಹಾಡನ್ನು
ಬಳಸಬಹುದು... ಒಳ್ಳೆ ಕಾಂಟ್ರಾಸ್ಟ್ ಇರುತ್ತೆ... ಕಾವಿಯ
ತೊಟ್ಟಳು... ಸಂಸಾರ ಬಿಟ್ಟಳು... ಬಂಬಂ ಶಕಲಕಾ ಬಂಬಂಬಂ!'
`ಅದ್ಭುತ ಸಾರ್! ಇತ್ತ ಈ ಹುಡುಗ ಗೋವಿಂದ
ಬಾಂಬೆನಲ್ಲಿ ಬಡತನದಲ್ಲೇ ಓದಿಕೊಂಡು ದೇಶಸೇವೆ ಮಾಡೋಕೆ ಏನು
ಮಾಡುವುದು ಅಂತ ಯೋಚನೆ ಮಾಡುತ್ತಾ ಸ್ವಯಂ ಸೇವೆಯ ಸಂಘವೊಂದನ್ನು
ಸೇರಿಕೊಳ್ಳುತ್ತಾನೆ. ಅಕ್ಕಪಕ್ಕದ ಹುಡುಗರಿಗೆ ವ್ಯಾಯಾಮ ಕಲಿಸೋದು,
ಬ್ರಹ್ಮಚರ್ಯವೇ ಜೀವನ ಅಂತ ಸಾರೋದು, ರಕ್ಷಣೆಗೆ ಲಾಠಿ
ತಿರುಗಿಸೊದು.. ಹೀಗೆ ಮಾಡ್ಕೊಂಡು ಇರ್ತಾನೆ... ಒಂದು ದಿನ ಈ ಸಂಘದ
ದೊಡ್ಡ ಸಭೆ ಆಗುತ್ತೆ.. ಅಲ್ಲಿಗೆ ಆ ಮಧ್ಯಪ್ರದೇಶದ ಸನ್ಯಾಸಿನಿ
ಆಗಿರೋ ಹುಡುಗಿ ಬರ್ತಾಳೆ... ಇಬ್ಬರೂ ಬ್ರಹ್ಮಚಾರಿಗಳ, ಕ್ಷಮಿಸಿ,
ಅವಿವಾಹಿತರ ದೇಹದಲ್ಲಿ ಸಾವಿರ ಓಲ್ಟ್ ವಿದ್ಯುತ್ ಸಂಚಾರವಾಗುತ್ತದೆ.
`ಅದ್ಭುತವಾಗಿ ಒಂದು ಡ್ಯುಯೆಟ್ ಬಾರಿಸಬೌದು...
ಅದೂ ಡ್ರೀಮಲ್ಲಿ... ನಿನ್ನ ಕಣ್ಣಿನ ವಿದ್ಯುತ್ತಿಗೆ ಬಲ್ಬಾಗಲೇ ನಾನು...
ನಿನ್ನ ನಯನದ ದೀಪಕ್ಕೆ ಬತ್ತಿಯಾಗಲೇ ನಾನು... ನಿನ್ನ ಹಣತೆಯ
ಕಾಂತಿಗೆ ಎಣ್ಣೆಯಾಗಲೇ ನಾನು... ಅಂತ ಸ್ಲೋ ಮೋಷನ್ನಲ್ಲಿ ಹಾಡ್ತಾ
ಇದ್ರೆ ಅದು ಬೇರೇನೇ ಲೋಕ...'
`ಲೌಲಿ ಸಾರ್, ಆಮೇಲೆ ಇಬ್ರುದ್ದೂ ಡೀಪ್ ಲವ್ ಶುರುವಾಗುತ್ತೆ
ಸಾರ್... ಎಷ್ಟು ಡೀಪ್ ಅಂದ್ರೆ ಇವ್ರ ಲವ್ ದೆಸೆಯಿಂದ ಸಂಘದ ಬ್ರಹ್ಮಚಾರಿ
ಹುಡುಗರಿಗೆ ತಳಮಳ ಶುರುವಾಗುತ್ತೆ... ಶಿಸ್ತು ಸಡಿಲವಾಗುತ್ತೆ...
ಸಂಘದ ಮುಖ್ಯಸ್ಥರಿಗೆ ಇದು ದೊಡ್ಡ ತಲೆನೋವಾಗುತ್ತೆ.... ಹಾಗಾಗಿ
ಉಮಾಳನ್ನ ಡೆಲ್ಲಿ ಕಡೆ ಕಳಿಸಿ, ಗೋವಿಂದನನ್ನು ಹೈದ್ರಬಾದ್ ಕಡೆ
ಕಳಿಸಿಬಿಡುತ್ತಾರೆ.... ಇಬ್ಬರ ಹತ್ರ ಇದ್ದ ಮೊಬೈಲ್ ಫೋನನ್ನೂ
ಕಿತ್ತುಕೊಳ್ತಾರೆ... ಹೀಗೆ ಸುಮಾರು ಹತ್ತು ವರ್ಷ ಬೇರೆ ಮಾಡಿಬಿಡುತ್ತಾರೆ
ಸಾರ್...' ಚಾಮಿ ದುಃಖ ತೆರಯಲಾಗದೇ ಬಿಕ್ಕತೊಡಗುತ್ತಾನೆ. ಹಂಸಲೇಖಾ
ಕೂಡ ಕರ್ಚೀಫಿನಿಂದ ಕಣ್ಣೊರೆಸಿಕೊಳ್ಳುತ್ತಾರೆ.
`ನೋಡಿ ಚಾಮಿ ಇಲ್ಲೊಂದು ಪ್ಯಾಥೋ ಹಾಕೋಣ...
ದಿಲ್ಲಿಯಲ್ಲಿ ಉಮಾ ಹಾಡೋದು, ಹೈದ್ರಾಬಾದ್ನಲ್ಲಿ ಗೋವಿಂದ ಹಾಡೋದು...
ನಾನಿಲ್ಲಿ ಇರುವೆ ಮರದ ದಿಮ್ಮಿಯ ಹಾಗೆ.... ನನ್ನಾತ್ಮ ತಾಳದು ಈ ವಿರಹ
ಬೇಗೆ- ಅಂತ ಗೋವಿಂದಣ್ಣ ಹಾಡಿದ್ರೆ... ಅಲ್ಲಿ ದಿಲ್ಲೀಲಿ ಉಮಾ, ನೀನಿಲ್ಲದ ಈ
ಪಾರ್ಲಿಮೆಂಟೂ ಸುಳ್ಳು... ಕಾವಿಯ ಒಳಗಣ ಸನ್ಯಾಸ ಪೊಳ್ಳು... ಅಂತ
ಹಾಡಿದ್ರೆ ನೋಡುವವರ ಕರುಳೇ ತಪಕ್ಕಂತ ಬಾಯಿಗೆ ಬರ್ಬೇಕು....'
`ವಂಡರ್ಫುಲ್ ಸಾರ್...! ಆಮೇಲೆ ಹೀಗೆ
ದೂರವಾದ ಮೇಲೆ ಶೋಕವನ್ನು ತಾಳಲಾರದೆ ಖಾಯಂ ಸನ್ಯಾಸಿ
ಆಗೋಣ ಅಂತ ಉಮಾ ಹೃಷಿಕೇಶಕ್ಕೆ ಹೋದರೆ ಅಲ್ಲಿ ಹಿಮಾಚ್ಛಾದಿತ ಬೆಟ್ಟದಲ್ಲಿ
ಗೋವಿಂದಣ್ಣ! ಎರಡೂ ಪವಿತ್ರ ಆತ್ಮಗಳು ಒಂದಾಗುತ್ತವೆ, ತಮ್ಮ
ಐವತ್ತನೇ ವಯಸ್ಸಿನಲ್ಲಿ... ಅಂದ್ರೆ ಪ್ರೇಮ ಎಂದೆಂದೂ ಅಮರ ಅಂತ
ಸಾರ್ತವೆ...'
`ಇಲ್ಲಿ ಲಾಸ್ಟಿಗೆ ಒಂದು ಬೊಂಬಾಟ್ ಡ್ಯುಯೆಟ್ ಹಾಕೋಣ...
ಪ್ರೇಮಕ್ಕೇ ಪ್ರೀತಿಗೆ ಜೈಜೈ... (ವಿತ್ ಸ್ಯಾಕ್ಸೋಫೋನ್ ಎಫೆಕ್ಟ್)
ಕಾವಿ, ಸನ್ಯಾಸಕೆ ಗುಡ್ ಬೈ... ಅಂತ ಡ್ಯುಯೆಟ್ನ್ನು ಗ್ರೂಪ್ ಸಾಂಗ್
ಆಗಿ ಕನ್ವರ್ಟ್ ಮಾಡಿದರೆ ಬ್ಯೂಟಿಫುಲ್ ಆಗಿರುತ್ತೆ.... ಅಂದ ಹಾಗೆ ಸಿನಿಮಾನ
ಡೈರೆಕ್ಟ್ ಮಾಡೋದು ಯಾರು?'
`ರೋಮ್ಯಾಂಟಿಕ್ ಆಸ್ಪೆಕ್ಟ್ ನೋಡಿದರೆ
ರಾಜೇಂದ್ರ ಬಾಬುಗೆ ಹೇಳಬಹುದು... ಸಂಘದ ಕಮಿಟ್ಮೆಂಟ್ ನೋಡಿ
ಮಾಡೋದಾದರೆ ಅದಕ್ಕೆ ಫಣಿ ರಾಮಚಂದ್ರ ಕರೆಕ್ಟಾದ ನಿರ್ದೇಶಕರು!'
`ಇಬ್ಬರೂ ಸೇರಿ ಮಾಡಿದರೆ?'
`ಛೆಛೆ... ಒಬ್ರು ದಳ! ಇನ್ನೊಬ್ರು ಬಿಜೆಪಿ.
ಅವರಿಬ್ರೂ ಸೇರಿದ್ರೆ, ಎನ್ಡಿಎ ಆಗುತ್ತೇ ಹೊರತು ಸಿನಿಮಾ ಆಗಲ್ಲ....?'