ಇಂದು ಕನ್ನಡ ಚಿತ್ರರಂಗದ ಮೂವರು
ತಾರೆಗಳ ಜನ್ಮದಿನ
ಸಾಹಸ ಸಿಂಹ ವಿಷ್ಣುವರ್ಧನ್, ಮನೆಮಗಳು
ಶ್ರುತಿ, ರಿಯಲ್ ಸ್ಟಾರ್ ಉಪೇಂದ್ರ ಈ ಮೂವರು ತಾರೆಗಳ ಜನ್ಮದಿನ
ಒಂದೇ ದಿನ ಇರುವುದು ವಿಶೇಷ. ಭಾರತ ಚಿತ್ರರಂಗದಲ್ಲೇ ಇದು ಅಪರೂಪವೆನ್ನಬಹುದು.
ಮೂವರು ವಿಭಿನ್ನ ಪರಿಸರದಿಂದ ಚಿತ್ರರಂಗಕ್ಕೆ ಬಂದವರು. ಒಂದೇ ಹೋಲಿಕೆ
ಅಂದರೆ ಮೂವರು ಸ್ವಲ್ಪ ರಂಗಭೂಮಿ ಹಿನ್ನಲೆಯಿದ್ದವರು ಹಾಗೂ ಪ್ರತಿಭಾವಂತರು.



ಸಂಪತ್ ಕುಮಾರ್(ವಿಷ್ಣುವರ್ಧನ್ ಅವರ ಮೂಲ
ಹೆಸರು) ಎಂಬ ಬಿಸಿರಕ್ತದ ತರುಣ ಪುಟ್ಟಣ್ಣನಂತಹ ಶಿಲ್ಪಿಯ ಕೈಗೆ
ಸಿಕ್ಕಿ ಒಳ್ಳೆ ಆಕಾರ ಪಡೆದ ಮೇಲೆ ಹಿಂತಿರುಗಿ ನೋಡಲೇ ಇಲ್ಲ. ಸಾಹಸಮಯ
ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಭಾವನಾತ್ಮಕ ಚಿತ್ರಗಳಲ್ಲೂ ತನ್ನ
ನಟನೆಯಿಂದ ಸೈ ಎನಿಸಿಕೊಂಡವರು ವಿಷ್ಣು. ತಮ್ಮದೇ ಆದ ಮ್ಯಾನರಿಸಂಗಳ
ಮೂಲಕ ಚಿತ್ರರಂಗದಲ್ಲಿ ಯಶಸ್ವಿಯಾದರು. ದ್ವಾರಕೀಶ್ ಜೊತೆಗಿನ
ಹಾಸ್ಯಮಯ ಚಿತ್ರಗಳು, ಸಾಂಸಾರಿಕ ಚಿತ್ರಗಳು, ಪ್ರೇಮಮಯ
ಚಿತ್ರಗಳು ವಿಷ್ಣು ಅವರಿಗೆ ಸ್ಟಾರ್ಗಿರಿಯನ್ನು ತಂದುಕೊಂಡಿತು. ಇವರ
ನಾಗರಹಾವು, ಬಂಧನ, ರಾಯರು ಬಂದರು ಮಾವನ ಮನೆಗೆ,
ಜಿಮ್ಮಿ ಗಲ್ಲು, ಕರುಣಾಮಯಿ, ಜೀವನಚಕ್ರ, ಮುತ್ತಿನಹಾರ ಹಾಗೂ
ಇತ್ತೀಚಿನ ಸಿಂಹಾದ್ರಿಯ ಸಿಂಹ, ಯಜಮಾನ, ಆಪ್ತಮಿತ್ರ ಮುಂತಾದ
ಚಿತ್ರಗಳು ಜನರ ಮನಸೂರೆ ಮಾಡಿದೆ. ನಟಿ ಭಾರತಿಯವರನ್ನು
ವರಿಸಿದ ಸ್ನೇಹಜೀವಿ ವಿಷ್ಣುವರ್ಧನ್ರವರ ಮುಂದಿನ ಚಿತ್ರ `ಸಿರಿವಂತಕ್ಕೆ
ಯಶಸ್ಸು ಕೋರುತ್ತಾ ಹುಟ್ಟು ಹಬ್ಬದ ಶುಭಾಶಯವನ್ನು
ಹೇಳೋಣ.
ಪ್ರಿಯದರ್ಶಿನಿ ಅನ್ನೊ ಹೆಸರಿನಿಂದ `ಆಸೆಗೊಬ್ಬ ಮೀಸೆಗೊಬ್ಬ'
ಚಿತ್ರದಲ್ಲಿ ಕಾಣಿಸಿಕೊಂಡ ಶ್ರುತಿ, ಮುಂದೆ `ಶ್ರುತಿ' ಎಂಬ ಹೆಸರಿನ
ಚಿತ್ರದ ಮೂಲಕ ಮನೆಮಾತಾದರು. ಆರಂಭದಲ್ಲಿ ಶ್ರುತಿಯವರಿಗೆ ಪ್ರತಿಭೆಗೆ
ತಕ್ಕ ಪಾತ್ರ ಸಿಗದೆ ಹೋದರೂ ನಂತರ ರಾಜ್ಯದ ಮನೆ
ಮಗಳಾದರು. ಇವರ ಅಭಿನಯದ ರಂಜಿತಾ, ಮಿಡಿದ
ಹೃದಯಗಳು, ಕರ್ಪೂರದ ಗೊಂಬೆ, ವೀರಪ್ಪನಾಯ್ಕ,
ಗಟ್ಟಿಮೇಳ, ಹಾಗೂ ಭಾಮಾ ಸತ್ಯಭಾಮ, ರಾಮಾ ಭಾಮಾ ಶಾಮ
ಚಿತ್ರಗಳು ಉತ್ತಮ ಅಭಿನೇತ್ರಿಯೆಂದು ನಿರೂಪಿಸಿದವು.
ಅಳುಮುಂಜಿ ತಾರೆ ಎಂಬ ಹಣೆಪಟ್ಟಿಯನ್ನು
ತೆಗೆದುಹಾಕಲು ಇತ್ತೀಚಿಗೆ ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ
ಕಾಣಿಸುತ್ತಿರುವ ಶ್ರುತಿಯವರು ನಿರ್ದೇಶಕ ಮಹೇಂದರ್ ಅವರನ್ನು ಮದುವೆಯಾಗಿ
ಸಂಸಾರ ನಡೆಸುತ್ತಿದ್ದಾರೆ. ಇವರ ಮುಂದಿನ ಯೋಜನೆಗಳಿಗೆ ಶುಭ
ಹಾರೈಸೋಣ.
`ಉಪ್ಪಿ
ಎಂಬ ಎರಡಕ್ಷರವ ಕೇಳದೆ ಇರುವ ಚಿತ್ರ ಪ್ರೇಮಿ ಇಲ್ಲವೆನ್ನಬಹುದು.
ಚಿತ್ರಕತೆ ಬರೆಯುತ್ತಾ ಕಾಶಿನಾಥ್ ಗರಡಿಯಲ್ಲಿ ಪಳಗಿದ ಉಪೇಂದ್ರ, `ತರ್ಲೆನನ್ಮಗ'ದ
ಮೂಲಕ ನಿರ್ದೇಶಕರಾದರು. ಆಮೇಲೆ ಶ್..., ಓಂ, ಆಪರೇಷನ್ ಅಂತ,
ಸ್ವಸ್ತಿಕ್,
ಹೆಚ್೨ಓ ಚಿತ್ರಗಳನ್ನು ನೀಡಿದರು. ನಿರ್ದೇಶನದಿಂದ ನಟನೆಗೆ ಇಳಿದ ಮೇಲೆ ಎ, ಉಪೇಂದ್ರ ಎಂಬ ಚಿತ್ರಗಳಿಂದ ಮನೆಮಾತಾದರು. ವಿಭಿನ್ನ ರೀತಿಯ
ಚಿತ್ರಕಥೆ, ನಟನೆಯಲ್ಲಿನ ವೇಗ, ವಿಚಿತ್ರ ದಿರಿಸುಗಳಿಂದ ಹೊಸ ಬಗೆಯ
ಟ್ರೆಂಡ್ ಹುಟ್ಟಿಹಾಕಿದವರು. ಶಿವರಾಜ್ ಕುಮಾರ್ ನಟಿಸಿದ ರೌಡಿಗಳ
ಕಥೆಯುಳ್ಳ `ಓಂ' ಚಿತ್ರ ಬಹುಕಾಲ ಚರ್ಚೆಗೆ ಈಡಾಗಿತ್ತು. ತಮ್ಮ ಸಂದೇಶ
ಜನರಿಗೆ ಸರಿಯಾಗಿ ತಲುಪದಿದ್ದಕ್ಕೋ ಏನೋ ನಿರ್ದೇಶನವನ್ನು ಬಿಟ್ಟು
ನಟನೆಯತ್ತ ಗಮನಹರಿಸ ತೊಡಗಿದರು. ಪ್ರೀತ್ಸೆ, ನಾನು ನಾನೇ,
ಕುಟುಂಬ, ಸೂಪರ್ ಸ್ಟಾರ್, ರಕ್ತ ಕಣ್ಣೀರು ಚಿತ್ರಗಳಲ್ಲಿ ಉತ್ತಮ
ಅಭಿನಯ ನೀಡಿ ನಟನೆಯಲ್ಲೂ ಸೈ ಅನ್ನಿಸಿಕೊಂಡರು. ನಟಿ ಪ್ರಿಯಾಂಕರನ್ನು
ಮದುವೆಯಾದ ಉಪೇಂದ್ರರವರ ಇತ್ತೀಚಿನ ಚಿತ್ರ ಐಶ್ವರ್ಯ.
ಇವರ ಮುಂದಿನ ಯೋಜನೆಗೆ ಯಶಸ್ಸನ್ನು
ಕೋರೋಣ.
ವಿಕ್ರಾಂತ ಬಳಗ ಈ ಮೂವರು ತಾರೆಯರ ಹುಟ್ಟುಹಬ್ಬಕ್ಕೆ
ಶುಭಾಶಯವನ್ನು ಸಲ್ಲಿಸುತ್ತದೆ.
ಉಪೇಂದ್ರ ಹಾಗು ವಿಷ್ಣುವರ್ಧನ್ ಚಿತ್ರ ಸಂಪುಟ
ಇನ್ನಷ್ಟು
ಧೂಮಪಾನದ ದೃಶ್ಯವಿರುವ ಸಿನಿಮಾಗಳಿಗೆ `ಎ'
ಯೋಗ್ಯತೆ
ಜಗ್ಗೇಶ್ ನಾಯಕತ್ವದಲ್ಲಿ ಪೂಚಂತೆ ಕಾದಂಬರಿ
ತೆರೆಗೆ
ಮೂರು ವರ್ಷದ ಪ್ರೇಮ ಕಥೆಗೆ ತಿರುವು
ಪರ್ವೀನ್ ಪಾತ್ರದಿಂದ ಖುಷಿಯಾದ ಕಂಗನಾ
ಅಭಿಷೇಕ್ ಜೊತೆ ದೀಪಿಕಾ ಪಡುಕೊಣೆ