ದಲಿತಪರ ಪುಸ್ತಕ
ಲೋಕಾರ್ಪಣೆ
ಪತ್ರಕರ್ತ
ಸಿ.ಎನ್.ರಾಮಚಂದ್ರ ಅವರ `ದಿ ದಲಿತ್ಸ್ ಆಫ್ ಅಮೇರಿಕಾ-ದೇರ್ ಗಾಂಧಿಸ್ ಅಂಡ್
ಅಂಬೇಡ್ಕರ್' ಎಂಬ ಪುಸ್ತಕ ಅನಾವರಣ
ಬೆಂಗಳೂರು:
ಇತ್ತೀಚೆಗೆ ಹಿಂದುಳಿದ ವರ್ಗದವರನ್ನು ಮಂಚೂಣಿ ಸಾಲಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ
ಮೀಸಲಾತಿ ನೀತಿಯನ್ನು ವಿರೋಧಿಸಿ ಸಾವಿರಾರು ವಿದ್ಯಾರ್ಥಿಗಳ ದೇಶದಾದ್ಯಂತ ಪ್ರತಿಭಟನೆಯ
ಕಾವು ಇನ್ನೂ ಆರುವ ಮೊದಲೇ ಹಿರಿಯ ಪತ್ರಕರ್ತರಾದ ಸಿ.ಎನ್.ರಾಮಚಂದ್ರ ಅವರು
ರಚಿಸಿರುವ `ದಿ ದಲಿತ್ಸ್ ಆಫ್ ಅಮೇರಿಕಾ-ದೇರ್ ಗಾಂಧಿಸ್ ಅಂಡ್ ಅಂಬೇಡ್ಕರ್' ಎಂಬ ಪುಸ್ತಕ
ಅನಾವರಣಗೊಂಡಿದೆ.
ಈ ಪುಸ್ತಕ ಬಿಡುಗಡೆ
ಸಮಾರಂಭದಲ್ಲಿ ಮಾತನಾಡಿದ ರಾಮಚಂದ್ರ ಅವರು ಅಮೆರಿಕಾದ ನಿಗ್ರೋ (ಕಪ್ಪು)
ಜನಾಂಗ ಹಾಗೂ ಭಾರತದ ದಲಿತರ ನಡುವೆ ಸಂಪರ್ಕ ಸೇತುವೆಯೊಂದನ್ನು ಕಲ್ಪಿಸುವ
ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅವರ ಪ್ರಕಾರ,
ಅಮೇರಿಕಾದ ನೀಗ್ರೋ ಜನಾಂಗದವರ ಹಾಗೂ ಭಾರತದ ದಲಿತರ ಮಧ್ಯೆ ಸಾಕಷ್ಟು
ಸಾಮ್ಯತೆಗಳಿವೆ. ಅಲ್ಲಿ ಅಮೆರಿಕದಲ್ಲೂ ಸಹ ಕಳೆದ ಐವತ್ತು ವರ್ಷಗಳ ಹಿಂದೆ
ನೀಗ್ರೋಗಳನ್ನು ಕಸಕ್ಕಿಂತ ಕಡೆಯಾಗಿ ನೋಡಲಾಗುತ್ತಿತ್ತು. ಆದರೆ ನಂತರ
ದಿನಗಳಲ್ಲಿ ಬಂದ ಬದಲಾವಣೆಗಳಿಂದಾಗಿ ಈಗ ನೀಗ್ರೋಗಳನ್ನು ಸಹ ಸಮಾಜದ ಮೊದಲ ಪಂಕ್ತಿಯಲ್ಲಿ
ಗುರುತಿಸಲಾಗುತ್ತಿದೆ. ಇದರಿಂದಾಗಿ ಅವರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು
ಮೂಡಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ
ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ದಲಿತ ಬಂಡಾಯ ಸಾಹಿತ್ಯ
ಚಿಂತಕರಲ್ಲೊಬ್ಬರಾದ ಡಾ|| ಸಿದ್ದಲಿಂಗಯ್ಯ ಅವರು ಮಾತನಾಡಿ ಭಾರತದ ದಲಿತ ಹೋರಾಟಗಾರರಿಗೆ
ಈ ಪುಸ್ತಕವೊಂದು ಮಾರ್ಗದರ್ಶಕ ಎಂದು ವರ್ಣಿಸಿದರು.
"ಅಮೇರಿಕದವರು
ಕೇವಲ ಐವತ್ತು ವರ್ಷಗಳ ಅವಧಿಯಲ್ಲಿ ನೀಗ್ರೋಗಳಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ
ಸಫಲರಾಗಿದ್ದಾರೆ. ಆದರೆ ನಮ್ಮ ಸಮಾಜದಲ್ಲಿ ಇನ್ನೂ ಅಸ್ಪೃಶ್ಯತೆ ಮನೆ ಮಾಡಿದೆ. ಹೀಗಾಗಿ
ಮೊದಲು ಸಮಾಜದಿಂದ ಅಸ್ಪೃಶ್ಯತೆಯನ್ನು ಹೋಗಲಾಡಿಸುವುದರ ಬಗ್ಗೆ ಬಹಳ
ಗಂಭೀರವಾದ ಚರ್ಚೆಯಾಗಬೇಕಿದೆ" ಎಂದು ಅಭಿಪ್ರಾಯ ಪಟ್ಟರು.
ಪುಸ್ತಕವನ್ನು ಮುಖ್ಯಮಂತ್ರಿ
ಎಚ್.ಡಿ.ಕುಮಾರ ಸ್ವಾಮಿ ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷ
ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಗೃಹ ಸಚಿವ ಎಂ.ಪಿ.ಪ್ರಕಾಶ್ ಹಾಗೂ ಸಚಿವ ಬಸವರಾಜ್
ಹೊರಟ್ಟಿ ಅವರೂ ಸಹ ಉಪಸ್ಥಿತರಿದ್ದರು.